ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪವಿತ್ರ ಬೋಜನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

0

ಕಾಣಿಯೂರು: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೋಜನ ಪ್ರಸಾದವು ಪರಮ ಪಾವನವಾದುದು. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾಗುತ್ತಾರೆ. ಅನ್ನದಾತ ಸುಬ್ಬಪ್ಪ ಎಂಬ ಪ್ರತೀತಿ ಪಡೆದ ಶ್ರೀ ದೇವಳದಲ್ಲಿ ಇತರ ಸೇವೆಗಳಂತೆ ಬೋಜನ ಪ್ರಸಾದ ಸ್ವೀಕಾರವು ಪವಿತ್ರವಾಗಿದೆ. ಇಲ್ಲಿ ವಾರ್ಷಿಕವಾಗಿ ಸುಮಾರು 55ಲಕ್ಷಕ್ಕೂ ಮಿಕ್ಕಿ ಭಕ್ತರು ಬೋಜನ ಪ್ರಸಾದ ಸ್ವೀಕರಿಸುತ್ತಾರೆ.ಇದೀಗ ಶ್ರೀ ದೇವಳದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ವಿಶೇಷ ಕಾಳಜಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರ ಚಿಂತನಾತ್ಮಕ ಯೋಜನೆ ಮೇರೆಗೆ ಪ್ರಸಾದ ಬೋಜನ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ವಿನೂತನ ಬದಲಾವಣೆಗಳನ್ನು ತರಲಾಗಿದೆ.ಇದರಿಂದಾಗಿ ಭಕ್ತರಿಗೆ ವಿಶೇಷ ಬೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.


ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು.ಆದರೆ ಇದೀಗ ನೂತನ ಯೋಜನೆ ಮೂಲಕ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.ಕಡ್ಲೆ ಬೇಳೆ, ಹೆಸರು ಬೇಳೆ, ಕಡ್ಳೆ ಬೇಳೆ ಸಾಬಕ್ಕಿ, ಗೋದಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ,ರವೆ ಪಾಯಸ ಮತ್ತು ಸಿರಿಧಾನ್ಯ ಸೇರಿದಂತೆ 10 ಬಗೆಯ ಪಾಯಸವನ್ನು ದಿನವಾಹಿ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ.ಪ್ರಸಾದ ಬೋಜನವು ಅತ್ಯಂತ ಸ್ವಾಧಿಷ್ಠ ಮತ್ತು ಪೌಷ್ಠಿಕಾಂಶಗಳಿಂದ ಕೂಡಿರಬೇಕೆಂದು ಅತ್ಯುತ್ತಮವಾದ 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಯೋಜನೆ ಮಾಡಿದ್ದಾರೆ.


ಕುಕ್ಕೆ ದೇವಳದಲ್ಲಿ ಸಂಪ್ರದಾಯ ಪ್ರಕಾರ ಬಾಳೆ ಎಲೆಯಲ್ಲಿ ಬೋಜನ ಪ್ರಸಾದ ವಿತರಣೆಯಾಗುತ್ತದೆ.ಪ್ರತಿನಿತ್ಯ ಭಕ್ತರಿಗೆ ಅನಾದಿ ಕಾಲದಿಂದ ಪ್ರಸಾದದಲ್ಲಿ ವಿತರಿಸಲಾಗುತ್ತಿರುವ ಸಾಂಪ್ರದಾಯಿಕ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಣೆಯಾಗುತ್ತದೆ. ಜಾತ್ರೆ ಮತ್ತು ಹೊಸ್ತಾರೋಗಣೆಯ ದಿನಗಳಲ್ಲಿ ಭಕ್ಷ್ಯಗಳ ಸಂಖ್ಯೆ ಅಧಿಕವಿರುತ್ತದೆ. ಅಲ್ಲದೆ ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.


ಶಿಕ್ಷಣಕ್ಕಾಗಿ ಅನ್ನದಾನ:
ಶ್ರೀ ದೇವಳವು ಭಕ್ತರಿಗೆ ಸೂಕ್ತವಾದ ಅನುಕೂಲತೆಯನ್ನು ಒದಗಿಸುವುದರ ಜೊತೆಗೆ ತನ್ನ ಆಡಳಿತದಲ್ಲಿ ಎರಡು ಶಿಕ್ಷಣ ಸಂಸ್ಥೆಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.ಈ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಿನ ನಿತ್ಯ ಶ್ರೀ ದೇವಳದಿಂದ ಪ್ರಸಾದ ಬೋಜನ ವಿತರಣೆಯಾಗುತ್ತಿದೆ.ಅದೇ ರೀತಿ ಕ್ಷೇತ್ರದಲ್ಲಿನ ಇತರ ಶಾಲೆಗಳಿಗೆ ಕೂಡಾ ಶ್ರೀ ದೇವಳದಿಂದ ಬೋಜನ ವ್ಯವಸ್ಥೆ ಮಾಡಲಾಗುತ್ತದೆ.ಕ್ಷೇತ್ರದಲ್ಲಿ ವ್ಯಾಸಂಗ ಮಾಡುವ ಸುಮಾರು 3,300 ಮಂದಿಗೆ ಬೋಜನ ಪ್ರಸಾದ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನ ಪ್ರಗತಿಗೆ ದೇವಳ ತನ್ನದೇ ಆದ ಕೊಡುಗೆ ನೀಡಿದೆ.

“ಶ್ರೀ ದೇವಳದಲ್ಲಿ ಬೋಜನವು ಕೂಡಾ ಒಂದು ಅಮೂಲ್ಯವಾದ ಪ್ರಸಾದ.ಹಿಂದಿನಿಂದಲೂ ಶ್ರೀ ದೇವರ ಅನ್ನಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಪಾಕಶಾಲೆ ನಿರ್ಮಾಣವಾಗಿದೆ. ಮುಂದೆ ಭಕ್ತರಿಗೆ ಶ್ರೀ ದೇವರ ಬೋಜನ ಪ್ರಸಾದ ಸ್ವೀಕರಿಸಲು ಹೆಚ್ಚಿನ ವ್ಯವಸ್ಥೆಯನ್ನು ಮಾಡಲಾಗುವುದು.ಅಲ್ಲದೆ ಭಕ್ತರಿಗೆ ಬೋಜನ ಪ್ರಸಾದ ಸ್ವೀಕಾರ ಸುಲಲಿತಗೊಳಿಸಲು ಬೇಕಾದ ಉತ್ತಮ ಯೋಜನೆ ನಡೆಸಲಾಗುವುದು. ಇದರೊಂದಿಗೆ ಭಕ್ತರಿಗೆ ಸೂಕ್ತವಾದ ಅನುಕೂಲತೆ ಒದಗಿಸುವ ಮೂಲಕ ದೇವರ ಸೇವೆಯನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ”
ಜುಬಿನ್ ಮೊಹಪಾತ್ರ
ಆಡಳಿತಾಧಿಕಾರಿಗಳು ಮತ್ತು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು

“ ಭಕ್ತರಿಗೆ ಪೌಷ್ಟಿಕಾಂಶ ಭರಿತವಾದ ವಿಶೇಷ ಬೋಜನ ಪ್ರಸಾದ ವಿತರಿಸುವ ದೃಷ್ಠಿಯಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ.ಇದರಿಂದಾಗಿ ಭಕ್ತರು ಸ್ವಾದಿಷ್ಠವಾದ ಪ್ರಸಾದ ಸ್ವೀಕರಿಸಲು ಅನುಕೂಲತೆಯಾಗಿದೆ.ವಿವಿಧ ಬಗೆಯ ಪಾಯಸ, ವಿವಿಧ ತರಕಾರಿಗಳ ಸಾಂಬಾರನ್ನು ಇದೀಗ ತಯಾರಿಸಲಾಗುತ್ತಿದೆ.ಬೋಜನ ಪ್ರಸಾದ ವಿತರಣೆ ಮತ್ತು ತಯಾರಿಕೆಯ ವ್ಯವಸ್ಥೆಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ”
ಅರವಿಂದ ಅಯ್ಯಪ್ಪ ಸುತಗುಂಡಿ
ಕಾರ್ಯನಿರ್ವಹಣಾಧಿಕಾರಿಗಳು

“ಪ್ರತಿದಿನ ಕಾಲೇಜಿಗೆ ಊಟ ಬರುತ್ತಿರುವುದರಿಂದ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಳಿಂದ ಮತ್ತು ದೂರದೂರುಗಳಿಂದ ಬರುವಂತಹ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ಬಿಟ್ಟು ಆಹಾರ ಸೇವಿಸದೆ ಬರುತ್ತಾರೆ.ಆದುದರಿಂದ ಮಧ್ಯಾಹ್ನ ಉತ್ತಮವಾದ ಭೋಜನ ಸಿಗುವ ಕಾರಣ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತಿದೆ. ಅಷ್ಟೇ ಅಲ್ಲದೆ ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರ ದೊರಕುವುದರಿಂದ ವಿದ್ಯಾರ್ಥಿಗಳ ಬುದ್ದಿಶಕ್ತಿ ಚುರುಕುಗೊಳ್ಳುತ್ತದೆ. ಕಾಲೇಜಿಗೆ 100ಕ್ಕೆ 100 ಫಲಿತಾಂಶ ಬರುವುದರಲ್ಲಿ ಆಡಳಿತ ಮಂಡಳಿಯ ಅತ್ಯುತ್ತಮ ಸಹಾಯ, ಉಪನ್ಯಾಸಕರ ಸಂಯೋಜನೆ ಹಾಗೂ ಶ್ರೀ ದೇವಳದ ಭೋಜನ ವ್ಯವಸ್ಥೆಯು ಕಾರಣೀಭೂತವಾಗಿದೆ”
ಸೋಮಶೇಖರ ನಾಯಕ್
ಪ್ರಾಚಾರ್ಯರು, ಎಸ್‌ಎಸ್‌ಪಿಯು ಕಾಲೇಜು

LEAVE A REPLY

Please enter your comment!
Please enter your name here