ಕಬಡ್ಡಿ ಪಂದ್ಯಾಟ-ಲಿಟ್ಲ್ ಫ್ಲವರ್ ಶಾಲಾ ತಂಡ ಸತತ 2ನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಇಡೀ ಶಾಲಾ ತಂಡವೇ ಪ್ರಥಮ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ ಲಿಟ್ಲ್ ಫ್ಲವರ್ ಶಾಲಾ ತಂಡ

ಪುತ್ತೂರು:ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ(ಆಡಳಿತ)ಚಿಕ್ಕಮಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಡೂರು, ಹಾಗೂ ಕ್ಯಾಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಪುರ,ಕಡೂರು ಇಲ್ಲಿ ಅ.17ರಂದು ನಡೆದ ರಾಜ್ಯ ಮಟ್ಟದ ಮಟ್ಟದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ತಂಡವು ಚಾಂಪಿಯನ್ ಪಡೆದು, ಸತತ 2ನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದೆ.


ರಾಜ್ಯದ 4 ವಿಭಾಗಗಳಿಂದ 4 ಬಲಿಷ್ಠ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ದರ್ಬೆ ಲಿಟ್ಲ್ ಫ್ಲವರ್ ಶಾಲಾ ತಂಡವು ಉತ್ತಮ ಪ್ರದರ್ಶನ ನೀಡಿದೆ. ಕಲ್ಬುರ್ಗಿ ವಿಭಾಗದ ತಂಡದೊಂದಿಗೆ 60, ಬೆಂಗಳೂರು ವಿಭಾಗದೊಂದಿಗೆ 52 ಹಾಗೂ ಬೆಳಗಾಂ ವಿಭಾಗದ ತಂಡದೊಂದಿಗೆ 22 ಗರೀಷ್ಠ ಅಂಕಗಳ ಅಂತರದಿಂದ ಚಾಂಪಿಯನ್ ಗಳಿಸಿ ಶಾಲಾ ತಂಡವು ಸತತ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. 14ರ ವಯೋಮಾನದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರಿನ ಇತಿಹಾಸದಲ್ಲಿ ಇಡೀ ಶಾಲಾ ತಂಡವೇ ಪ್ರಥಮ ಬಾರಿಗೆ ಆಯ್ಕೆಯಾಗಿದೆ.


ಜುಎನಾ ಡ್ಯಾಝಲ್ ಕುಟಿನ್ಹಾ, ಸನ್ನಿಧಿ, ಜೆನಿಟ ಸಿಂಧು ಪ್ರಸನ್ನ, ಸುಶ್ರಾವ್ಯ, ಹಾರ್ದಿಕ ಪಿ., ಪ್ರದೀಕ್ಷಾ, ನೇಹಾ ಪಿ., ಕೀರ್ತಿ, ಶಿವಾನಿ, ಚೈತನ್ಯ ಬಿ., ಅನ್ವಿತಾ ಕೆ., ಅನ್ವಿ ಕೆ.ಎ. ಶಾಲಾ ತಂಡದಲ್ಲಿ ಭಾಗವಹಿಸಿದ್ದರು. ಇಡೀ ಶಾಲಾ ತಂಡವೇ ಪ್ರಥಮ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡವು ಕಳೆದ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ತಂಡವು ಸತತ ಐದನೇ ಬಾರಿಗೆ ಜಿಲ್ಲಾ ಮಟ್ಟ, ಎರಡನೇ ಬಾರಿಗೆ ವಿಭಾಗ ಮಟ್ಟ ಹಾಗೂ ಎರಡನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿಯೇ ಲಿಟ್ಲ್ ಫ್ಲವರ್ ಶಾಲೆಯು ಬಲಿಷ್ಠ ತಂಡವಾಗಿ ಮೂಡಿಬಂದಿದೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಹಾಗೂ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ತರಬೇತಿ ನೀಡಿದ್ದಾರೆ.

ಬಾಲಕೃಷ್ಣ ರೈ ಪೊರ್ದಾಲ್ ರಾಷ್ಟ್ರಮಟ್ಟದ ತರಬೇತುದಾರರಾಗಿ ಆಯ್ಕೆ:

ಲಿಟ್ಲ್ ಫ್ಲವರ್ ಶಾಲಾ ಸಹ ಶಿಕ್ಷಕರಾಗಿ, ರಾಜ್ಯ ಮಟ್ಟದ ಕಾರ್ಯಕ್ರಮದ ನಿರೂಪಕರು, ಉತ್ತಮ ಸಂಘಟಕರು, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್‌ರವರ ತರಬೇತಿಯಲ್ಲಿ ಕಳೆದ 5 ವರ್ಷಗಳಿಂದ ಸತತ ಜಿಲ್ಲಾ ಮಟ್ಟಕ್ಕೆ ಆಯ್ಕೆ , ಸತತ 3 ವರ್ಷಗಳಿಂದ ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಕಳೆದ ಸಾಲಿನಲ್ಲಿ 14ರ ವಯೋಮಾನದ ಬಾಲಕಿಯರ ರಾಜ್ಯ ತಂಡದ ಮುಖ್ಯಸ್ಥರಾಗಿ ರಾಷ್ಟ್ರ ಮಟ್ಟದಲ್ಲಿ ತಂಡವನ್ನು ಮುನ್ನಡೆಸಿದ್ದ ಬಾಲಕೃಷ್ಣ ರೈಯವರು ಈ ಬಾರಿ ಮತ್ತೆ ರಾಷ್ಟ್ರಮಟ್ಟದ ತರಬೇತುದಾರರಾಗಿ ಆಯ್ಕೆಯಾಗಲಿದ್ದಾರೆ.

LEAVE A REPLY

Please enter your comment!
Please enter your name here