ನಿಮ್ಮಜಾಗ ಕಾನೂನು ಪ್ರಕಾರ ಇದ್ದಲ್ಲಿ ಅದನ್ನು ಖಂಡಿತವಾಗಿಯೂ ಸಕ್ರಮ ಮಾಡಿಕೊಡುತ್ತೇನೆ: ಶಾಸಕ ಅಶೋಕ್ ರೈ
ಪುತ್ತೂರು: ನಿಮ್ಮ ಅಕ್ರಮಸಕ್ರಮ ಕಡತ, 94 ಸಿ ಹಕ್ಕು ಪತ್ರವನ್ನು ಮಾಡಿಸಿಕೊಡುವುದಾಗಿ ನಾನು ಕ್ಷೇತ್ರದ ಜನತೆಗೆ ಮಾತು ಕೊಟ್ಡಿದ್ದೆ ಆ ಮಾತಿನಂತೆ ನಡೆದುಕೊಂಡಿದ್ದೇನೆ, ರಾಜ್ಯದ ಯಾವ ಕ್ಷೇತ್ರದಲ್ಲೂ ನಡೆಯದ ಅಕ್ರಮ ಸಕ್ರಮ ಕಡತ ವಿಲೇವಾರಿಯನ್ನು ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ನಿಮ್ಮ ಅರ್ಜಿಗಳು ಕಾನೂನು ಪ್ರಕಾರವಾಗಿಯೇ ಇದ್ದಲ್ಲಿ ಅದನ್ನು ಖಂಡಿತವಾಗಿಯೂ ಸಕ್ರಮ ಮಾಡಿ ಕೊಡುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಳ್ತಿಗೆ ಗ್ರಾಪಂ ಸಭಾಂಗಣದಲ್ಲಿ ನಡೆದ ಏಳು ಗ್ರಾಮಗಳ ಅಕ್ರಮ ಸಕ್ರಮ ಕಡತ ಬೈಠಕ್ ನ್ನು ಉದ್ಘಾಟಿಸಿ ಮಾತನಾಡಿದರು.
28 ಸಾವಿರ ಅರ್ಜಿ ಇತ್ತು
ನಾನು ಶಾಸಕನಾಗುವ ವೇಳೆ 28 ಸಾವಿರ ಅಕ್ರಮ ಸಕ್ರಮ ಅರ್ಜಿಗಳಿದ್ದವು. ದುಡ್ಡಿದ್ದವರ ಕಡತ ಮಾತ್ರ ವಿಲೇವಾರಿಯಾಗಿದೆ. ಬಡವರ ಕಡತ ಕಚೇರಿಯಲ್ಲೇ ಕೊಳೆಯುತ್ತಿತ್ತು. ಕ್ಷೇತ್ರದಾದ್ಯಂತ ಲಂಚಮನೆ ಮಾಡಿತ್ತು. ನಾನು ಶಾಸಕನಾದ ಬಳಿಕ ಪಕ್ಷಾತೀತವಾಗಿ ಎಲ್ಲರ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿಮಾಡುತ್ತಿದ್ದೇನೆ. ನಯಾ ಪೈಸೆ ಲಂಚ ತೆಗೆದುಕೊಳ್ಳದೆ ಈ ಕೆಲಸವನ್ನು ಮಾಡುತ್ತಿದ್ದೇನೆ, ಜನರ ಬೇಡಿಕೆ ಈಡೇರಿಸುವುದರ ಜೊತೆ ಅವರ ವಶದಲ್ಲಿದ್ದ ಭೂಮಿಯನ್ನು ಅವರವರಿಗೆ ಮಾಡಿಕೊಡುವುದರಲ್ಲೇ ನಾನು ಸಂತೋಷಪಡುತ್ತೇನೆ ಎಂದು ಶಾಸಕರು ಹೇಳಿದರು.
ಬಿಜೆಪಿಯ ಶಾಸಕರು ನನ್ನ ಕಡತವನ್ನೇ ಮಾಡಿಲ್ಲ:
ಇಲ್ಲಿನ ಮಾಜಿ ಶಾಸಕರು ನನ್ನ ಕಡತವನ್ನು ವಿಲೇವಾರಿ ಮಾಡಿಲ್ಲ ಜೊತೆಗೆ ನಾನು ಕಳಿಸಿದ್ದ ನೂರಾರು ಮಂದಿ ಬಡವರ 94 ಸಿ ಕಡತವನ್ನೂ ವಿಲೇವಾರಿ ಮಾಡಿಲ್ಲ. ಗಂಟು ಕೊಟ್ಟವರದ್ದು ಮಾತ್ರ ಕಡತ ವಿಲೇವಾರಿಯಾಗುತ್ತಿತ್ತು ಎಂದು ಶಾಸಕರು ಆರೋಪಿಸಿದರು.
ದುಡ್ಡು ಮಾಡ್ಲಿಕ್ಕೆ ಶಾಸಕನಾಗಿಲ್ಲ:
ನಾನು ದುಡ್ಡುಮಾಡ್ಲಿಕ್ಕೆ ಶಾಸಕನಾಗಿದ್ದಲ್ಲ, ಬಡವರ ಸೇವೆ ಮಾಡುವುದಕ್ಕೆ ಶಾಸಕನಾಗಿದ್ದು ಈಗ ಮಾಡುವ ಕೆಲಸದಲ್ಲಿ ನನಗೆ ತೃಪ್ತಿ ಇದೆ. ಹಣಮಾಡಬೇಕು ಎಂಬ ಆಸೆ ಇದ್ದಿದ್ರೆ ನಾನು ಕೋಟಿಗಟ್ಟಲೆ ಹಣ ಖರ್ಚುಮಾಡಿ ದೀಪಾವಳಿ ಸೀರೆ ವಿತರಣೆ ಮಾಡುತ್ತಿರಲಿಲ್ಲ ಎಂದು ಶಾಸಕರು ಹೇಳಿದರು.
ಯುವಕರ ಮೈಂಡ್ ವಾಶ್ ಮಾಡುವುದಲ್ಲ ಅವರಿಗೆ ಉದ್ಯೋಗ ಕೊಡಿಸಿ
ಜಾತಿ,ಧರ್ಮದ ಹೆಸರಿನಲ್ಲಿ ಯುವಕರನ್ನು ಹುಚ್ಚೆಬ್ಬಿಸುವ ಬದಲು ಅವರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡಬೇಕು, ಧರ್ಮ ದಂಗಲ್ ಗೆ ಯುವಕರನ್ನು ಬಳಸಿ ಅವರನ್ನು ಜೈಲಿಗೆ ಹಾಕುವ ಕೆಲಸ ಮಾಡಬೇಡಿ, ಅವರಿಗೆ ಉತ್ತಮ ಬದುಕು ಕಟ್ಟಿ ಕೊಡಿ ಎಂದು ಬಿಜೆಪಿಗೆ ಶಾಸಕರು ಮನವಿ ಮಾಡಿದರು. ನಾನು ಶಾಸಕನಾದ ಬಳಿಕ ಉದ್ಯೋಗಮೇಳವನ್ನುಮಾಡಿ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸಿದ್ದೇನೆ. ಮಾಜಿ ಶಾಸಕರು 5 ವರ್ಷದ ಅವಧಿಯಲ್ಲಿ ಒಂದೇ ಒಂದು ಉದ್ಯೋಗ ಯಾರಿಗಾದರೂ ಕೊಡಿಸಿದ್ದಾರ ಎಂದು ಮಾಜಿ ಶಾಸಕ ಮಠಂದೂರು ಅವರನ್ನು ಕೆಣಕಿದರು.
ದೇವರೇ ಬಂದರೂ ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವಿಲ್ಲ:
ದೇವರೇ ಮೇಲಿಂದ ಕೆಳಗೆ ಬಂದು ಇಲ್ಲಿ ಪ್ರತ್ಯಕ್ಷವಾದರೂ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ ಯಾಕೆಂದರೆ ಅಧಿಕಾರಿ ಬೇಡ ಅಂದ್ರೂ ಅವರ ಕಿಸೆಗೆ ಹಣ ತುರುಕಿಸುವ ಮಂದಿ ನಮ್ಮಲ್ಲಿ ಇನ್ನೂ ಇದ್ದಾರೆ. ಯಾರಿಗೂ ಹಣ ಕೊಡಬೇಡಿ ಎಂದು ಪ್ರತೀ ಬಾರಿ ಹೇಳುತ್ತಿದ್ದರೂ ತಮ್ಮ ಕೆಲಸವಾಗುವಲ್ಲಿ ಕದ್ದು ಮುಚ್ಚಿ ಲಂಚನೀಡುತ್ತಿದ್ದಾರೆ ಅದು ಸಂಪೂರ್ಣ ನಿಲ್ಲಬೇಕಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಹೊಸನಿಯಮದಿಂದ ಲಾಭವಾಗಿದೆ:
ಆಪ್ ಮೂಲಕ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗುತ್ತಿದ್ದು ,ಇಲ್ಲಿಮಂಜೂರಾದ ಕಡತಗಳು ಫ್ಲಾಟಿಂಗ್ ಆಗಿಯೇ ಬರುವ ಕಾರಣಕ್ಕೆ ಜನರಿಗೆ ಫ್ಲಾಟಿಂಗ್ ಸಮಸ್ಯೆಯಿಂದ ಮುಕ್ತವಾಗಿದೆ. ಇದು ಸಿದ್ದರಾಮಯ್ಯ ಸರಕಾರದ ಜನಪರ ಯೋಜನೆಯಾಗಿದೆ ಎಂದು ಶಾಸಕರು ಹೇಳಿದರು.
ಜನತೆಗೆ ಇನ್ನೇನು ಕೊಡಬೇಕು?
ಕರ್ನಾಟಕದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಯಡಿ ತಿಂಗಳಿಗೆ 2000, ಕರೆಂಟ್ ಬಿಲ್ ಉಚಿತ, ಬಸ್ಪ್ರಯಾಣ ಉಚಿತ, ಅಕ್ಕಿ ಉಚಿತ, ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ ಗೌರವ ಧನ, ಕೃಷಿಕರಿಗೆ ಬೆಳೆವಿಮೆ, ಭೂಮಿಯ ಹಕ್ಕು ಪತ್ರ, ಅನ್ನದಾಸೋಹ, ಶಾಲಾ ಮಕ್ಕಳಿಗೆ ಬಿಸಿಯೂಟ, ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಸರಕಾರ ನೆರವು ನೀಡುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಜನತೆಗೆ ನೆರವು ನೀಡಿದ ಸರಕಾರ ಹಿಂದೆಂದೂ ದೇಶದಲ್ಲಿಬಂದಿಲ್ಲ,ಇನ್ನು ಬರುವುದು ಇಲ್ಲ ಎಂದು ಶಾಸಕರು ಹೇಳಿದರು.
ಅಕ್ರಮ ಸಕ್ರಮ ಪುತ್ತೂರು ರಾಜ್ಯದಲ್ಲೇ ಪ್ರಥಮ: ತಹಶೀಲ್ದಾರ್
ಅಕ್ರಮಸಕ್ರಮ ಕಡತ ವಿಲೇವಾರಿಯಲ್ಲಿ ಕರ್ನಾಟಕದಲ್ಲೇ ಪುತ್ತೂರು ಪ್ರಥಮಸ್ಥಾನದಲ್ಲಿದೆ ಎಂದು ತಹಶೀಲ್ದಾರ್ ಪುರಂದರ್ ಹೆಗ್ಡೆ ಹೇಳಿದರು.
ಶಾಸಕ ಅಶೋಕ್ ರೈ ಅವರ ಮುತುವರ್ಜಿಯಿಂದ ಇದು ಸಾಧ್ಯವಾಗಿದೆ. ಉಳಿದ ಯಾವ ವಿಧಾನಸಭಾ ಕ್ಷೇತ್ರದಲ್ಲಿಯೂ ಕಡತ ವಿಲೇವಾರಿಯಾಗಿಲ್ಲ.ಜನಪರ ಇರುವ ಶಾಸಕರನ್ನು ಪಡೆದಿರುವುದು ಇಲ್ಲಿನ ಜನತೆಯ ಪುಣ್ಯವಾಗಿದೆ ಎಂದು ಹೇಳಿದರು.
ಬಡವರ ಬಗ್ಗೆ ನಿರಂತರ ಕಾಳಜಿ: ಮಹಮ್ಮದ್ ಬಡಗನ್ನೂರು
ಶಾಸಕ ಅಶೋಕ್ ರೈ ಅವರಿಗೆ ಬಡವರ ಪರಕಾಳಜಿಯ ಕಾರಣಕ್ಕೆ ಕ್ಷೇತ್ರದಲ್ಲಿ ಎಲ್ಲಾ ರಂಗದಲ್ಲೂ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಅಕ್ರಮ ಸಕ್ರಮ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಶಾಸಕರು ತೀರ್ಮಾನ ಮಾಡಿದ್ದು ಎಲ್ಲಾ ದಾಖಲೆಗಳನ್ನು ಮುರಿದು ಈ ಬಾರಿ ಪುತ್ತೂರಿನಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗಲಿದೆ ಎಂದು ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು. ಪುತ್ತೂರು ಕ್ಷೇತ್ರದ ಜಿಡಿಪಿ ಹೆಚ್ಚಳವಾಗಿರುವುದು ಶಾಸಕರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸೊರಕೆ ಯುಗ ಮರಳಿಬಂದಿದೆ: ಪ್ರಮೋದ್ ಕೆ ಎಸ್
ಈ ಹಿಂದೆ ವಿನಯಕುಮಾರ್ ಸೊರಕೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಅಕ್ರಮಸಕ್ರಮ ಕಡತಗಳ ವಿಲೇವಾರಿ ನಡೆಯುತ್ತಿತ್ತು.ರಾತ್ರಿ ವೇಳೆ ಗ್ಯಾಸ್ ಲೈಟ್ ಇಟ್ಟು ಕಡತ ವಿಲೇವಾರಿ ಮಾಡುತ್ತಿದ್ದರು. ಅದೇ ವೈಭವ ಶಾಸಕ ಅಶೋಕ್ ರೈ ಅವಧಿಯಲ್ಲಿ ಮರುಕಳಿಸಿದೆ ಎಂದು ಕೊಳ್ತಿಗೆ ಗ್ರಾ.ಪಂ. ಉಪಾಧ್ಯಕ್ಷ ಪ್ರಮೋದ್ ಕೆ ಎಸ್ ಹೇಳಿದರು. ಕೊಳ್ತಿಗೆ ಗ್ರಾಮಕ್ಕೆ ಹೆಚ್ಚಿನ ಅನುದಾನದ ಜೊತೆಗೆ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ವೇದಿಕೆಯಲ್ಲಿ ಅಕ್ರಮ ಸಕ್ರಮಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು.