ಕಡಬ: ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ ಸೆಪ್ಟಂಬರ್ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡ ಸಂದರ್ಬದಲ್ಲಿ ನೀಡಿದ ಭರವಸೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಎರಡನೇ ಬಾರಿ ಫೆಬ್ರವರಿ 10 ರಿಂದ ಮತ್ತೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಂದಾಯ ಸಚಿವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಡಬ ತಾಲೂಕು ಘಟಕದ ವತಿಯಿಂದ ಕಡಬ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ನೀಡಿದರು.
ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಮೂಲಭೂತ ಸಮಸ್ಯೆಗಳಿದ್ದು, ಮುಖ್ಯವಾಗಿ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಶನ್ಗಳ ಮೂಲಕ ಆಗುತ್ತಿರುವ ಸಮಸ್ಯೆ, ಇಲಾಖೆಯಿಂದ ಅಭಿವೃದ್ದಿ ಪಡಿಸಿರುವ ಸುಮಾರು 17 ಕ್ಕೂ ಹೆಚ್ಚು ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಾಗಿರುವ ಮೊಬೈಲ್ ಸಾಧನ, ಹಾಗು ಲ್ಯಾಪ್ಟಾಪ್ ಹಾಗು ಅದಕ್ಕೆ ಅವಶ್ಯಕವಾಗಿರುವ ಇಂಟರ್ನೆಟ್ ಹಾಗು ಸ್ಕ್ಯಾನರ್ ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಉಂಟಾಗುತ್ತಿದೆ. ಅದ್ದರಿಂದ ನಮಗೆ ವೃತ್ತಕ್ಕೆ ಒಂದರಂತೆ ಮೊಬೈಲ್ ,ಲ್ಯಾಪ್ಟಾಪ್, ಗೂಗಲ್ ಕ್ರೋಮ್ ಬುಕ್ , ಪ್ರಿಂಟರ್ , ಇಂಟರ್ನೆಟ್ ಸೌಲಭ್ಯ ನೀಡಬೇಕು ಸೇರಿದಂತೆ, ಇನ್ನೂ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಪ್ರತಿಭಟನೆ ಕಳೆದ ವರ್ಷ ಸೆ.26 ರಿಂದ ಹಮ್ಮಿಕೊಳ್ಳಲಾಗಿತ್ತು. ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಅಕ್ಟೋಬರ್. 3 ರಂದು ಪ್ರತಿಭಟನೆ ವಾಪಸ್ಸು ತೆಗೆದುಕೊಳ್ಳಲಾಯಿತು. ಆದರೆ ನಮಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ನಿರ್ಣಯದಂತೆ ಫೆ.10 ರಿಂದ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಘದ ಕಡಬ ತಾಲೂಕು ಘಟಕದ ಅಧ್ಯಕ್ಷ ಶೇಷಾದ್ರಿ ನೀಡಿದ ಮನವಿಯನ್ನು ಕಡಬ ಆಡಳಿತ ಕಚೇರಿಯ ಉಪ ತಹಶೀಲ್ದಾರ ಗೋಪಾಲ ಕಲ್ಲುಗುಡ್ಡೆ ಸ್ವೀಕರಿಸಿದರು. ಉಪತಹಶೀಲ್ದಾರ ಭೀಮಯ್ಯ ,ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.