ಉಪ್ಪಿನಂಗಡಿ: ಕೊಯಿಲ, ಗಂಡಿಬಾಗಿಲು- ಉಪ್ಪಿನಂಗಡಿ ಮಧ್ಯೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಫೆ.7ರಂದು ಗಂಡಿಬಾಗಿಲುವಿನಲ್ಲಿ ಜಮಾಯಿಸಿದ ಗ್ರಾಮಸ್ಥರು ಬಸ್ಸಿಗೆ ಸ್ವಾಗತ ಕೋರುವ ಮೂಲಕ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಬಹು ಕಾಲದ ಬೇಡಿಕೆಯನ್ನು ಈಡೇರಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಹೊಸ ಪೂಜಾರ ಪಿ. ಇವರಿಗೆ ಕೃತಜ್ಞತೆ ಸಲ್ಲಿಸಿದರು.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಗಡಿ ಪ್ರದೇಶವಾದ ಬೊಲುಂಬುಡ, ಕಡಬ ತಾಲೂಕಿನ ಗಡಿ ಪ್ರದೇಶವಾದ ಗಂಡಿಬಾಗಿಲು ಪರಿಸರದ ಜನರು ತಮ್ಮೆಲ್ಲಾ ವ್ಯವಹಾರ, ಉದ್ಯೋಗ, ವಿದ್ಯಾಭ್ಯಾಸಕ್ಕೆ ಮತ್ತು ಕೂಲಿ ಕಾರ್ಮಿಕರು ಮತ್ತು ಹೈನುಗಾರರು ತಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಉಪ್ಪಿನಂಗಡಿ ಮತ್ತು ಕೊಯಿಲವನ್ನು ಅವಲಂಭಿಸಿದ್ದು, ಈ ಮಧ್ಯೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಸಕ ಅಶೋಕ್ ಕುಮಾರ್ ರೈಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಶಾಸಕರು ಗಂಡಿಬಾಗಿಲು ಪ್ರದೇಶಕ್ಕೆ ಬಸ್ ಸಂಚಾರ ವ್ಯವಸ್ಥೆ ಮಾಡುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಕೆಎಸ್ಸಾರ್ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಶ್ರೀಕಾಂತ್ ಮತ್ತು ಪುತ್ತೂರು ಬಸ್ ನಿಲ್ದಾಣದ ಮೇಲುಸ್ತುವಾರಿ ಅಬ್ಬಾಸ್ ಕೆ. ಗಂಡಿಬಾಗಿಲುಗೆ ಆಗಮಿಸಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದು, ಅದರಂತೆ ಕೆಎಸ್ಸಾರ್ಟಿಸಿ ವಿಭಾಗೀಯ ಸಂಚರಣಾಧಿಕಾರಿ ಜೈಶಾಂತ್ರವರ ನಿರ್ದೇಶನದಂತೆ ಬಸ್ ಸಂಚಾರ ಆರಂಭಗೊಂಡಿದೆ.
ಬಸ್ಸಿಗೆ ಸ್ವಾಗತ ಕೋರುವ ಸಂದರ್ಭ ಕೊಯಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಫಲೂಲುದ್ದೀನ್, ಗಂಡಿಬಾಗಿಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಅಗರಿ, ಉಪಾಧ್ಯಕ್ಷೆ ಸ್ವಪ್ನ, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್ ಹಾಜಿ, ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್ ಹಾಜಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಎಲ್ಯಣ್ಣ ಪೂಜಾರಿ, ಗಂಡಿಬಾಗಿಲು ಯಂಗ್ಮೆನ್ಸ್ ಅಧ್ಯಕ್ಷ ಪಿ. ಲತೀಫ್, ಆಶಾ ಕಾರ್ಯಕರ್ತೆ ದಿವ್ಯಾ ರವಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಬ್ರಾಹಂ, ಎಸ್.ಪಿ. ಖಲಂದರ್, ಝಿಯಾದ್, ಇಸಾಕ್ ಬೊಲುಂಬುಡ, ಅಬ್ದುಲ್ ರಜಾಕ್ ಮರ್ವೇಲ್, ಬಸ್ ಚಾಲಕ ಲಿಕ್ಷಿತ್, ನಿರ್ವಾಹಕ ಕುಮಾರ್ ಉಪಸ್ಥಿತರಿದ್ದರು.
ಬಸ್ ಸಂಚಾರ ಸಮಯ:
ಈಗ ಹೊಸದಾಗಿ ಆರಂಭವಾಗಿರುವ ಬಸ್ ಸಂಚಾರ ಸಂಜೆ 4.30ಕ್ಕೆ ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟು ಹಿರೇಬಂಡಾಡಿ-ನೆಹರೂತೋಟ-ಶಾಖೆಪುರ-ಗಂಡಿಬಾಗಿಲು-ಕೊಯಿಲಕ್ಕೆ ಆಗಮಿಸಲಿದ್ದು, ಮತ್ತೆ 5 ಗಂಟೆಗೆ ಅದೇ ರಸ್ತೆಯಾಗಿ ಮತ್ತೆ ಉಪ್ಪಿನಂಗಡಿಗೆ ತೆರಳಲಿದೆ. ಬೆಳಗ್ಗಿನ ಸಮಯದಲ್ಲಿ ಇಲ್ಲಿಗೆ ಸುಮಾರು ಆರೇಳು ತಿಂಗಳ ಹಿಂದೆಯೇ ಬಸ್ ಸಂಚಾರ ಆರಂಭಗೊಂಡಿದ್ದು, ಬೆಳಗ್ಗೆ ಕಡಬ-ಇಚ್ಲಂಪಾಡಿ-ನೆಲ್ಯಾಡಿಯಾಗಿ ಬರುವ ಬಸ್ 8-35ಕ್ಕೆ ಕೊಯಿಲಕ್ಕೆ ಆಗಮಿಸಿ ಅಲ್ಲಿಂದ ಗಂಡಿಬಾಗಿಲು-ಶಾಖೆಪುರ, ನೆಹರೂತೋಟ-ಹಿರೇಬಂಡಾಡಿಯಾಗಿ ಉಪ್ಪಿನಂಗಡಿಗೆ ತೆರಳುತ್ತಿದೆ.