ಪುತ್ತೂರು: ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ ಸತ್ಯನಾರಾಯಣ ಪೂಜೆ, ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.22 ಮತ್ತು ಫೆ 23 ರಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ ಫೆ.15ರಂದು ಗೊನೆ ಮುಹೂರ್ತ ನಡೆಯಿತು.
ದೇವಸ್ಥಾನದ ಅರ್ಚಕ ಕೆ.ಪ್ರವೀಣ್ ಶಂಕರ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.ಈ ಸಂದರ್ಭ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಮೋಹನ್ದಾಸ್ ರೈ ನಳೀಲು, ಪ್ರವೀಣ್ ಕುಮಾರ್,ಸತೀಶ್ ರೈ ,ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ, ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು,ಉಪಾಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ,ಕೋಶಾಧಿಕಾರಿ ಸುಧಾಕರ ರೈ ಪಾಲ್ತಾಡಿ ಹೊಸಮನೆ,ದೈವದ ಪರಿಚಾರಕರಾದ ಕೇಪು ಗೌಡ ಹರೀಶ್ ಮಡಿವಾಳ,ಬಾಲಕೃಷ್ಣ ಗೌಡ ಪೂಜಾರಿಮನೆ, ಉದಯ,ವಿಠಲ ಶೆಟ್ಟಿ ಪಾಲ್ತಾಡಿ,ಗೋಪಾಲಕೃಷ್ಣ ಆಚಾರ್ಯ ನಳೀಲು, ಜಗನ್ನಾಥ ರೈ ಮಣಿಕ್ಕರ,ಅಮರನಾಥ ರೈ ಬಾಕಿಜಾಲು,ಧನಂಜಯ ಕಾಯರಗುರಿ,ಸವಣೂರು ಗ್ರಾ.ಪಂ.ಸದಸ್ಯೆ ವಿನೋದಾ ಸಿ.ರೈ ಚೆನ್ನಾವರ, ಶಿಲ್ಪಾ ಪ್ರವೀಣ್ ಶಂಕರ್,ಪ್ರಜ್ವಲ್ ರೈ ಚೆನ್ನಾವರ,ಲೀಲಾ ಮಾಧವ,ಸುಬ್ಬಿ ,ಜತ್ತಪ್ಪ ಪೂಜಾರಿ ಮೊದಲಾದವರಿದ್ದರು.
ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.22, 23ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಹಸಿರುವಾಣಿ ಸಮರ್ಪಣೆ ಫೆ.21ರಂದು ನಡೆಯಲಿದೆ.
ಫೆ.22ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ,ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ,ವೈದಿಕ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9ಕ್ಕೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸವಿನೆನಪುಗಳ ಸ್ಮರಣ ಸಂಚಿಕೆ ವಲ್ಮಿಕ 2024 ಬಿಡುಗಡೆ ನಡೆಯಲಿದೆ.ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾದ ನಾರಾಯಣ ರೈ ಕುಕ್ಕುವಳ್ಳಿ,ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ಉಪಸ್ಥಿತರಿರುವರು.
ರಾತ್ರಿ 9.30ರಿಂದ ಅಭಿನಯ ಕಲಾವಿದರು ಉಡುಪಿ ಇವರಿಂದ ತುಳು ನಾಟಕ ಶಾಂಭವಿ ಪ್ರದರ್ಶನಗೊಳ್ಳಲಿದೆ.
ಫೆ.23ರಂದು ಪ್ರಾತಃಕಾಲ ವ್ಯಾಘ್ರ ಚಾಮುಂಡಿಯ ನೇಮೋತ್ಸವ, ಬೆಳಿಗ್ಗೆ ರುದ್ರ ಚಾಮುಂಡಿಯ ನೇಮೋತ್ಸವ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ.