ಮೀನ ಸಂಕ್ರಮಣದ ದಿನದ ವಿಶೇಷತೆ-ದೇವಿಗೆ ವಿಶೇಷ ಪೂಜೆ
ಪುತ್ತೂರು: ಪುರಾತನ, ಕಾರಣಿಕ ಕ್ಷೇತ್ರ ಪುತ್ತೂರು ರೈಲು ನಿಲ್ದಾಣ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾ.14ರ ಮೀನ ಸಂಕ್ರಮಣದಂದು ವಿಶೇಷತೆಯಿದೆ. ಮುಂಜಾನೆಯ ವೇಳೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಗುತ್ತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ.
ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು. ಪ್ರಾತಃಕಾಲ ಶ್ರೀಲಕ್ಷ್ಮೀದೇವಿ ಭಕ್ತ ವೃಂದದವರಿಂದ ಭಜನೆ, ಎಸ್ಎಲ್ ವಿಭಜನಾ ಮಂಡಳಿ ಹಾಗೂ ಸುಮಂಗಲ ಶೆಣೈ ಬಳಗದವರಿಂದ ಭಜನೆ, ಶ್ರೀಕೃಷ್ಣ ಉಪಾಧ್ಯಾಯರವರಿಂದ ವೇದ ಮಂತ್ರ ಘೋಷ ನೆರವೇರಿತು. ಬೆಳಿಗ್ಗೆ 7.30ರ ಸಮಯದಲ್ಲಿ ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀಯ ಕೆಲ ಕ್ಷಣ ಬಿಂಬದ ಮೇಲೆ ಸ್ಪರ್ಶಿಸಿತು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿತು. ವೈದಿಕರಿಂದ ವೇದ, ಘೋಷ ಮಂತ್ರ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.

ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಮೀನ ಸಂಕ್ರಮಣದಂದು ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ ಹೊರತು ಪಡಿಸಿದರೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುವ ರಾಜ್ಯದ ಎರಡನೇ ದೇವಸ್ಥಾನ ಪುತ್ತೂರಿನ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರವಾಗಿದೆ. ಲಕ್ಷ್ಮೀದೇವಿ ಬೆಟ್ಟದಲ್ಲಿ ಮೀನ ಸಂಕ್ರಮಣದ ದಿನ ಬೆಳಗ್ಗಿನ ಜಾವ ಸೂರ್ಯನ ಕಿರಣಗಳು ದೇವಿಯ ಬಿಂಬವನ್ನು ಸ್ಪರ್ಶಿಸಿದರೆ ಜನವರಿ ತಿಂಗಳ ಮಕರ ಸಂಕ್ರಮಣದ ದಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಜೆ ವೇಳೆ ಸ್ಪರ್ಶಿಸುತ್ತಿದೆ.