ಪುತ್ತೂರು:ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ವಾಯ್ಸ್ ಸಂದೇಶವನ್ನು ವಾಟ್ಸಪ್ನಲ್ಲಿ ಹಾಕಿ ಧರ್ಮಗಳ ಮಧ್ಯೆ ವೈರುತ್ವ, ದ್ವೇಷ, ವೈಮನಸ್ಸು ಹರಡುವಂತೆ ಮಾಡಿದ ಆರೋಪದ ದೂರಿಗೆ ಸಂಬಂಧಿಸಿ ಹಕೀಂ ಕೂರ್ನಡ್ಕ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿರುವ ನಗರಸಭೆಯ ಕಾಂಗ್ರೆಸ್ ಸದಸ್ಯ ಪರ್ಲಡ್ಕ ನಿವಾಸಿ ಬಶೀರ್ ಎಂಬವರು ದೂರು ನೀಡಿದವರು.‘ಅಶೋಕ್ ರೈ ಸೋಷಿಯಲ್ ಮೀಡಿಯಾ ವಾಟ್ಸಪ್ ಗ್ರೂಪ್ನಲ್ಲಿ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಹಕೀಂ ಕೂರ್ನಡ್ಕ ಎಂಬವರು ಕಾಂಗ್ರೆಸ್ ಪಕ್ಷದ ಮತ್ತು ಪುತ್ತೂರಿನ ಶಾಸಕ ಅಶೋಕ್ ರೈ ಅವರ ಬಗ್ಗೆ ಒಂದು ವಾಯ್ಸ್ ಸಂದೇಶವನ್ನು ವಾಟ್ಸಪ್ನಲ್ಲಿ ಹಾಕಿ ಅದರಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯತ್, ಚುನಾವಣೆ ಬಂದಾಗ ನಾವು ಮುಸಲ್ಮಾನ ಕ್ಯಾಂಡಿಡೇಟ್ ನಿಲ್ಲಿಸಿ ಗೆಲ್ಲಿಸುವ.ಯಾಕೆ ನಮಗೆ ಶಕ್ತಿ ಇಲ್ಲ. ಗೆಲ್ಲಿಸಲಿಕ್ಕೆ ನಾವೆಲ್ಲ ಮುಸಲ್ಮಾನ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗುವ. ಕೋಮುವಾದಿ ಹಿಂದೆ ಹೋಗುವುದು ಬೇಡ.ಅಶೋಕ್ ರೈ ಅವರನ್ನು ನಾವಿಲ್ಲಿ ಕಷ್ಟಪಟ್ಟು ಗೆಲ್ಲಿಸಿಕೊಟ್ರೆ ಅದರ ಲಾಭ ಪಡೆಯುವುದು ಯಾರು ಇದೇ ಅಶೋಕ್ ರೈ, ಯಾಕೆ ನಾವು ಕಷ್ಟಪಟ್ಟು ಗೆಲ್ಲಿಸಿ ಕೊಟ್ಟು ಅವರ ಕೈ ಬಲಪಡಿಸಬೇಕು.ಇದರಿಂದ ಪಕ್ಷಕ್ಕಾಗುವ ಲಾಭ ಏನು?.ನಾಡಿದ್ದು ಯಾವಾಗ ಜಿ.ಪಂ, ತಾ.ಪಂ ಚುನಾವಣೆ ಆಗುತ್ತದೆ. ನಾವು ಆ ಭಾಗದಲ್ಲಿ ಮುಸಲ್ಮಾನ ಕ್ಯಾಂಡಿಡೇಟ್ ಆಯ್ಕೆ ಮಾಡುವ, ಗೆದ್ದು ತೋರಿಸುವ, ನಮ್ಮ ಶಕ್ತಿ ಏನಂತ ತೋರಿಸುವ.ನಾವು ಜಾತ್ಯಾತೀತ ವ್ಯಕ್ತಿಗಳು.ಜಾತ್ಯಾತೀತ ಪಕ್ಷದಲ್ಲಿ ಇದ್ದವರು.ಆದರೆ ಇಲ್ಲಿ ಜಾತ್ಯಾತೀತ ಪಕ್ಷದಲ್ಲಿರುವ ಕೋಮುವಾದಿಗಳಿಗೆ ನಾವು ಬುದ್ದಿ ತೋರಿಸಬೇಕಲ್ಲ.ಒಂದು ಸಮುದಾಯವನ್ನು ಮೂಲೆಗುಂಪು ಮಾಡುವಾಗ ನಾವು ಏನಾದರೂ ಪರಿಹಾರ ವ್ಯವಸ್ಥೆ ಮಾಡಬೇಕಲ್ಲ ಎಂದು ಸುಳ್ಳು ಮಾಹಿತಿಯನ್ನು ಹರಡಿ, ಹಿಂದು ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ವೈರತ್ವ ದ್ವೇಷ, ವೈಮನಸ್ಸು ಹರಡುವಂತೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಪ್ರಕರಣದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದ್ದು ಪೊಲೀಸರು ತನಿಖೆ ನಡೆಸಿ ಹಕೀಂ ಕೂರ್ನಡ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.