ಮದುವೆ ನಿಶ್ಚಿತಾರ್ಥವಾಗಿದ್ದ ಬಾಳಿಲದ ಯುವಕ ದಿಢೀರ್ ನಾಪತ್ತೆ-ದೂರು

0

ಪುತ್ತೂರು: ಇನ್ನೇನು ಎರಡು ವಾರದೊಳಗೆ ಹಸೆಮಣೆ ಏರಲಿರುವ ಸಂತಸದಲ್ಲಿದ್ದ ಬಾಳಿಲದ ಯುವಕನೊಬ್ಬ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಿಲದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ(38 ವ.)ನಾಪತ್ತೆಯಾದವರು.


ಕಳೆದ ಸುಮಾರು 13 ವರ್ಷಗಳಿಂದ ಪುತ್ತೂರಿನಲ್ಲಿ ಮಹೀಂದ್ರ ಫೈನಾನ್ಸ್‌ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಹರೀಶ್ ರೈ ಅವರಿಗೆ ಏ.6ರಂದು ಮದುವೆ ನಿಗದಿಯಾಗಿದ್ದು ಮದುವೆಗಾಗಿ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಅವರು ನಾಪತ್ತೆಯಾಗಿದ್ದಾರೆ.‘ದೂರದ ಸಂಬಂಧಿ ಯುವತಿ ಜೊತೆ ತಮ್ಮ ಹರೀಶ್ ರೈಗೆ ವಿವಾಹ ನಿಶ್ಚಯವಾಗಿತ್ತು. ಮಾ.20ರಂದು ಬೆಳಿಗ್ಗೆ 7.30 ಗಂಟೆಗೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ಅಣ್ಣ ವೆಂಕಪ್ಪ ರೈ ಅವರಲ್ಲಿ ತಿಳಿಸಿ ಮನೆಯಿಂದ ಬೈಕ್ (ಕೆಎ 21-ಇ:4957)ನಲ್ಲಿ ತೆರಳಿದ್ದರು. ಸಂಜೆ 5 ಗಂಟೆಗೆ ಮನೆಗೆ ವಾಪಸ್ ಬರಬೇಕಾಗಿದ್ದ ಹರೀಶ್ ರೈ ಅವರು, ಸಂಜೆ 6 ಗಂಟೆಯಾದರೂ ಬಾರದೇ ಇದ್ದಾಗ ಆತಂಕಗೊಂಡ ವೆಂಕಪ್ಪ ರೈಯವರು, ತಮ್ಮನಿಗೆ ವಿವಾಹ ನಿಶ್ಚಿತಾರ್ಥ ನಡೆದಿದ್ದ ಯುವತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರು. ಯುವತಿಯ ಮನೆಗೆ ಬೆಳಿಗ್ಗೆ 8 ಗಂಟೆಗೆ ಹೋಗಿದ್ದ ತಮ್ಮ ಹರೀಶ್, ಆಕೆಯನ್ನು ತನ್ನ ಬೈಕ್‌ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿದ್ದರು. ಆಕೆಗೆ ವಿಟ್ಲಕ್ಕೆ ಹೋಗಲಿದ್ದ ಕಾರಣಕ್ಕಾಗಿ ಪುತ್ತೂರು ಬಸ್ ನಿಲ್ದಾಣದಲ್ಲಿ ಆಕೆಯನ್ನು ಇಳಿಸಿದ್ದ ಹರೀಶ್ ರೈಯವರು ಬಳಿಕ, ಚಿನ್ನಾಭರಣ ಖರೀದಿಗೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾಗಿ ಯುವತಿ ಮಾಹಿತಿ ನೀಡಿದ್ದರು. 12 ಗಂಟೆ ಬಳಿಕ ತಾನು ಹರೀಶ್ ಅವರಿಗೆ ಕಾಲ್ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದೂ ಯುವತಿ ತಿಳಿಸಿದ್ದರು.‌ ಬಳಿಕ ನಾನು ಮಂಗಳೂರಿನಲ್ಲಿರುವ ನನ್ನ ಅಣ್ಣಂದಿರಿಗೆ, ಹರೀಶನ ಸಹೋದ್ಯೋಗಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರಕಿರುವುದಿಲ್ಲ ಎಂದು, ಹರೀಶ್ ರೈಯವರ ಅಣ್ಣ ವೆಂಕಪ್ಪ ರೈ ದೇರಂಪಾಲು ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾಗಿರುವ ಹರೀಶ್ ರೈ ಅವರ ಮೊಬೈಲ್ ಫೋನ್ ಕಾರ್ಯನಿರ್ವಹಣೆ ಆಧಾರದಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. ಅವರ ಬೈಕ್ ಮಂಗಳೂರು ಪಡೀಲ್ ತನಕ ಹೋಗಿರುವ ಮಾಹಿತಿ ಸಿಸಿ ಕ್ಯಾಮರಾಗಳ ಮೂಲಕ ಪತ್ತೆಯಾಗಿದ್ದು, ಆ ಬಳಿಕದ ವಿವರ ಪೊಲೀಸರಿಗೆ ಇನ್ನಷ್ಟೆ ಲಭಿಸಬೇಕಿದೆ ಎಂದು ಹೇಳಲಾಗುತ್ತಿದೆ. ಹರೀಶ್ ರೈಯವರ ಮನೆಯವರು, ಬಂಧುಮಿತ್ರರು ಹಾಗೂ ಕಚೇರಿ ಸಹೋದ್ಯೋಗಿಗಳೂ ಹುಡುಕಾಟದ ಪ್ರಯತ್ನದಲ್ಲಿದ್ದಾರೆ.

LEAVE A REPLY

Please enter your comment!
Please enter your name here