ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರಮಠದ ಸಮೀಪದ ಗುಡ್ಡಕ್ಕೆ ಮಾ.24ರಂದು ಬೆಂಕಿ ತಗುಲಿದ ಘಟನೆ ನಡೆದಿದೆ.
ಮೂರು ವರ್ಷಗಳ ಹಿಂದೆ ಸುಮಾರು ಒಂದು ಸಾವಿರ ಪುನಾರ್ಪುಳಿ ಗಿಡಗಳನ್ನು ನೆಡಲಾಗಿತ್ತು. ಅದರಲ್ಲಿ ಸುಮಾರು 50 ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದೆ. ಬೆಂಕಿ ತಗುಲಿದ ಕೂಡಲೇ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬಿಸಿಲಿನ ಧಗೆಗೆ ಬೆಂಕಿ ಇಡೀ ಗುಡ್ಡಕ್ಕೆ ಹರಡಿಕೊಂಡಿತು.
ಬಳಿಕ ಬಂಟ್ವಾಳ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದರ ಪಕ್ಕದಲ್ಲೇ ಮನೆಗಳು ಹಾಗೂ ಏರ್ಟೆಲ್ ಟವರ್ ಇದ್ದು ಸುತ್ತಲೂ ಬೆಂಕಿ ಆವರಿಸಿದ್ದು ಅದಕ್ಕೆ ಯಾವುದೇ ಹಾನಿಯಾಗಿಲ್ಲ. ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಬಿದ್ದ ಬೆಂಕಿಯ ಕಿಡಿಯಿಂದಾಗಿ ಬೆಂಕಿ ತಗುಲಿರುವುದಾಗಿ ಅಂದಾಜಿಸಲಾಗಿದೆ.