ಉಪ್ಪಿನಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮಡಿದವರಿಗೆ 34 ನೆಕ್ಕಿಲಾಡಿ ಹೆಲ್ಪ್ಲೈನ್ ಇದರ ವತಿಯಿಂದ ಎ.25ರಂದು ನೆಕ್ಕಿಲಾಡಿ ಜಂಕ್ಷನ್ನಲ್ಲಿ ಮೊಂಬತ್ತಿ ಉರಿಸಿ ಸಂತಾಪ ಸೂಚಿಸಲಾಯಿತ್ತಲ್ಲದೆ, ಈ ಉಗ್ರ ದಾಳಿಯನ್ನು ಖಂಡಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಝಕರಿಯಾ ಕೊಡಿಪ್ಪಾಡಿ, ಈ ಭಯೋತ್ಪಾದಕ ಕೃತ್ಯವು ಪ್ರತಿಯೋರ್ವ ಭಾರತೀಯ ನಾಗರಿಕನು ತಲೆ ತಗ್ಗಿಸುವಂತೆ ಮಾಡಿದೆ. ಕೇಂದ್ರ ಸರಕಾರದ ಭದ್ರತಾ ಲೋಪ ಈ ಕೃತ್ಯದ ಹಿಂದೆ ಎದ್ದು ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಕಪೋಲ ಕಲ್ಪಿತ ಸುಳ್ಳುಗಳನ್ನು ಭಿತ್ತರಿಸುತ್ತಿವೆ. ಇದಕ್ಕೆಲ್ಲಾ ಪ್ರಜ್ಞಾವಂತ ನಾಗರಿಕರು ಉತ್ತರ ಕೊಡುವ ದಿನ ದೂರವಿಲ್ಲ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಬ್ದುರ್ರಹ್ಮಾನ್ ಯುನಿಕ್, ವಕೀಲ ನೌಶಾದ್, ಇರ್ಷಾದ್ ಯು.ಟಿ. ಘಟನೆಯನ್ನು ಖಂಡಿಸಿದರು. ಮಡಿದವರ ಆತ್ಮಕ್ಕೆ ಶಾಂತಿಕೋರಿ ಸಭೆಗೆ ಮೊದಲು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು.
ಈ ಸಂದರ್ಭ ಹಲವು ಗಣ್ಯರು ಉಪಸ್ಥಿತರಿದ್ದರು. ರಿಜ್ವಾನ್ ಎ.ವೈ.ಎಂ. ಸ್ವಾಗತಿಸಿದರು. ಶರೀಕ್ ಅರಫಾ ವಂದಿಸಿದರು.