- ನಮ್ಮ ಸಂಘಟನೆ ಯಾವುದೇ ಪಕ್ಷ, ಪಾರ್ಟಿಗೆ ಸೇರಿಲ್ಲ
ಪುತ್ತೂರು: ನಮ್ಮ ಮುಷ್ಕರ ಮುಗಿದಿಲ್ಲ. ಯಾರ ತಪ್ಪಿತಸ್ಥರಿದ್ದಾರೋ ಅವರನ್ನು ಪೊಲೀಸ್ ಠಾಣೆಗೆ ತರುವ ತನಕ ನಮ್ಮ ನಾವು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ಮಾಡುವ ಮೂಲಕ ನಮ್ಮ ಮುಷ್ಕರ ಮುಂದುವರಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ದೀಪಕ್ ರೈ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರದಲ್ಲಿ ನ್ಯಾಯಾಕ್ಕಾಗಿ ಮಾಡಿದ ನಮ್ಮ ಹೋರಾಟಕ್ಕೆ ಬಹಳಷ್ಟು ಬೆಂಬಲ ಸಿಕ್ಕಿದೆ. ಇವತ್ತು ಎಸ್ಪಿಯವರ ಭರವಸೆಯಂತೆ ಖಾಸಗಿ ಆಸ್ಪತ್ರೆಗಳು ಒಪಿಡಿ ತೆರೆದುಕೊಂಡಿದೆ. ನಾವು ಕೂಡಾ ಕರ್ತವ್ಯ ಮಾಡುತ್ತೇವೆ. ಆದರೆ ಕಪ್ಪು ಪಟ್ಟಿ ಧರಿಸಿ ನಮ್ಮ ನೋವನ್ನು ತೋರಿಸುತ್ತಿದ್ದೇವೆ. ಈ ನಡುವೆ ನಮಗೆ ಬೆಂಬಲ ನೀಡಿದ ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್ಸ್ ಫಾರಮ್ ಪುತ್ತೂರು, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು, ಆಯುಷ್ ಫಡರೇಶನ್ ಆಫ್ ಇಂಡಿಯಾ ಪುತ್ತೂರು, ಆಸ್ಪಿಟಲ್ಸ್ ಅಸೋಸಿಯೇಶನ್ ಪುತ್ತೂರು, ಪೊಲೀಸ್ ಇಲಾಖೆ ಪುತ್ತೂರು, ಕರ್ನಾಟಕ ಸರಕಾರಿ ನೌಕರರ ಸಂಘ ಪುತ್ತೂರು ಮತ್ತು ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಮತ್ತು ಸುಳ್ಯದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಬೇಕು. ಆಸ್ಪತ್ರೆಯ ಪ್ರಸವನಂತರದ ನವಜಾತ ಶಿಶುಗಳ ವಿಭಾಗದಲ್ಲಿ ಗಂಡಸರಿಗೆ ಎಂಟ್ರಿ ಇಲ್ಲ. ಆದರೆ ಮೊನ್ನೆ ಡಾ. ಅಶಾ ಪುತ್ತೂರಾಯ ಅವರು ರೌಂಡ್ಸ್ ಮಾಡುವಾಗ ಹೊರಗಿನಿಂದ ಬಂದ ನಾಲ್ವರು ಬೆಡ್ನಲ್ಲಿ ಕೂತಿರುವುದನ್ನು ನೋಡಿ ಅವರನ್ನು ಹೊರಗೆ ಹೋಗಲು ತಿಳಿಸಿದರು. ಈ ವೇಳೆ ಅಲ್ಲಿಗೆ ಬಂದವರು ವೈದ್ಯರನ್ನು ನಿಂದಿಸಿದ್ದಾರೆ. ಈ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಅವರನ್ನು ಕರೆದೊಯ್ದಿದ್ದಾರೆ. ಅದಕ್ಕೆ ಎಫ್ಐಆರ್ ಕೂಡಾ ಆಗಿದೆ. ಇನ್ನು ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬರಬೇಕಾಗಿದೆ ಎಂದವರು ಹೇಳಿದರು.
ಆರೋಗ್ಯ ರಕ್ಷಾ ಸಮಿತಿಗೂ ತಿಳಿಸಿದ್ದೇವೆ:
ಘಟನೆ ನಡೆದ ತಕ್ಷಣ ಡಾ. ಆಶಾ ಪುತ್ತೂರಾಯ ಅವರು ನನಗೆ ಕರೆ ಮಾಡಿದರು. ಆ ಸಂದರ್ಭ ನಾನು ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಜೊತೆಯಲ್ಲಿ ಮೀಟಿಂಗ್ನಲ್ಲಿದ್ದೆವು. ತಕ್ಷಣ ನಾವು ಅಲ್ಲಿಗೆ ಬಂದು ಮಾಹಿತಿ ಪಡೆದು ಆರಂಭದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಿಗೆ ಕರೆ ಮಾಡಿದ್ದೆವು. ಅವರು ನಾನು ಊರಿನಲ್ಲಿ ಇಲ್ಲ. ಇನ್ನೋರ್ವ ಸದಸ್ಯರಿಗೆ ತಿಳಿಸುತ್ತೇನೆ ಎಂದು ಹೇಳಿದ್ದರು. ಜೊತೆಗೆ ಶಾಸಕರಿಗೂ ಕರೆ ಮಾಡಿದಾಗ ಅವರ ಕರೆ ಸಿಗುತ್ತಿರಲಿಲ್ಲ. ಅವರ ಸಹಾಯಕರಿಗೂ ಕರೆ ಮಾಡಿದ್ದೇವೆ. ಶಾಸಕರ ಜೊತೆ ಇರುವ ಇನ್ನೋರ್ವರಿಗೂ ಕರೆ ಮಾಡಿ ತಿಳಿಸಿದ್ದೆವೆ. ಅವರು ಶಾಸಕರಿಗೆ ಹೇಳಲಾಗಿಲ್ಲ. ಇದೆಲ್ಲಕ್ಕೂ ನಮ್ಮಲ್ಲಿ ಕಾಲ್ ರೆಕಾರ್ಡ್ ಇದೆ. ಬಳಿಕ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಸಂಜೆ ಆರೋಪಿಯ ವಿರುದ್ಧ ಎಫ್.ಐ.ಆರ್ ಆಗಿದೆ ಎಂದು ಡಾ. ದೀಪಕ್ ರೈ ಹೇಳಿದರು.
ಇದು ಮೊದಲನೆ ಘಟನೆ ಅಲ್ಲ. ೬ ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿದ್ದ ಮಕ್ಕಳ ತಜ್ಞೆ ಡಾ. ಅರ್ಚನಾ ಕರಿಕ್ಕಳ ಅವರಿಗೆ ಅಗಿನ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಅವರು ನಿಂಧಿಸಿದ್ದರು. ಈ ಕುರಿತ ನಾವು ದೂರು ನೀಡಿ ಎಫ್ಐಆರ್ ಮಾಡಿಸಿದ್ದೇವೆ. ಬಳಿಕ ಅವರು ಕ್ಷಮೆ ಕೇಳಿದ ಬಳಿಕ ಅದನ್ನು ಬಿಟ್ಟುಬಿಡಲಾಗಿತ್ತು. ಈ ಘಟನೆಯೂ ಕೂಡಾ ಡಾ. ಅಶಾ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದವರು ಕ್ಷಮೆ ಕೇಳಿದರೆ ಮುಗಿದು ಹೋಗುತ್ತಿತ್ತು ಎಂದು ಹೇಳಿದರು.
ದೂರು ನೀಡಿರುವುದನ್ನು ನಮ್ಮ ಸಂಘಟನೆಗೆ ಮಾತ್ರ ಹೇಳಿದ್ದು:
ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ ಬಳಿಕ ನಾವು ನಮ್ಮ ಸಂಘಟನೆ ಕರ್ನಾಟಕ ಸರಕಾರಿ ಮೆಡಿಕಲ್ ಆಫಿಸರ್ಸ್ ಸಂಘಕ್ಕೆ ಮಾತ್ರ ಹೇಳಿದ್ದು. ಆ ನಂತರ ನಾವು ನಮ್ಮ ಕೆಲಸವನ್ನು ಮುಂದುವರಿಸಿದ್ದೇವೆ. ಎಲ್ಲೂ ಕೆಲಸ ಸ್ಥಗಿತಗೊಳಿಸಿಲ್ಲ. ಆದರೆ ರಾತ್ರಿ ಪೊಲೀಸ್ ಠಾಣೆ ಮುಂದೆ ಜನರು ಜಮಾಯಿಸಿದ್ದಾರೆ ಎಂದು ನನಗೆ ಕಾಲ್ ಬಂತು. ಆದರೆ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಜನರು ಜಮಾಯಿಸಿದ್ದಾರೆಂದು ನನಗೆ ಮಾದ್ಯಮದ ಮೂಲಕವೇ ಗೊತ್ತಾಗಿದ್ದು. ಇದರಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ಸೇರಿಕೊಂಡಿರುವುದು ಗೊತ್ತಾಗಿದೆ. ಆದರೆ ನಮ್ಮ ಸಂಘಟನೆ ಯಾವುದೇ ಪಕ್ಷ, ಪಾರ್ಟಿಗೆ ಸೇರಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಡಾ. ದೀಪಕ್ ರೈ ಹೇಳಿದರು.
ನಾವು ಕಾಲ್ನಡಿಗೆ ಜಾಥಾ ಮಾತ್ರ ಮಾಡಿದ್ದು:
ಆಸ್ಪತ್ರೆಯಲ್ಲಿ ಎಲ್ಲಾ ಮತ, ಜಾತಿಯ ವೈದ್ಯರು ಇದ್ದಾರೆ. ಚಿಕಿತ್ಸೆ ನೀಡುವಾಗ ಜಾತಿ ಮತ ಕೇಳುವುದಿಲ್ಲ. ಈ ಕುರಿತು ಆಸ್ಪತ್ರೆಯ ರೋಗಿಗಳಲ್ಲಿ ಕೇಳಬಹುದು. ನಮ್ಮ ಸರಕಾರಿ ಆಸ್ಪತ್ರೆ ರಾಜ್ಯದಲ್ಲೇ ಉತ್ತಮ ಸ್ಥಾನದಲ್ಲಿದೆ. ಸರಕಾರದ ಆದೇಶದಂತೆ ಕೆಲಸ ಮಾಡುವವರು ನಾವು. ಘಟನೆಯ ಸಂದರ್ಭ ದೂರು ನೀಡಿದ್ದೇವೆ ಹೊರತು ಪ್ರತಿಭಟನೆ ಮಾಡಿಲ್ಲ. ಎ.೨೬ರಂದು ಬೆಳಗ್ಗೆ ನಾವು ಸರಕಾರಿ ಆಸ್ಪತ್ರೆಯಿಂದ ಕಾಲ್ನಡಿಗೆ ಜಾಥಾ ಮೂಲಕ ಠಾಣೆಗೆ ಹೋಗಿ ಮನವಿ ನೀಡಿದ್ದು ಮಾತ್ರ. ಆದರೆ ನಾವು ಅಲ್ಲಿಗೆ ಹೋದಾಗ ಬೇರೆ ಬೇರೆ ರಾಜಕೀಯ, ಪಕ್ಷ, ಸಂಘಟನೆ ಸೇರಿ ಪ್ರತಿಭಟನೆ ಮಾಡುತ್ತಿದ್ದರು. ನಾವು ಅವರಿಂದ ದೂರ ಇದ್ದು ಮನವಿ ನೀಡಿ ವಾಪಾಸು ಬಂದಿದ್ದೇವೆ. ಅಲ್ಲಿ ನಡೆದ ಪ್ರತಿಭಟನೆಗೆ ಕನಾಟಕ ಸರಕಾರಿ ಮೆಡಿಕಲ್ ಆಫಿಸರ್ಸ್ ಅಸೋಸಿಯೇಶನ್ನಿಂದ ನಾವು ಯಾರು ಹೋಗಿಲ್ಲ ಎಂದು ಡಾ. ದೀಪಕ್ ರೈ ಹೇಳಿದರು.
ಭದ್ರತಾ ಸಿಬ್ಬಂದಿಗಳು ಬೇಕು:
ಸರಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಅರ್ಚನಾ ಕಾವೇರಿ ಅವರು ಮಾತನಾಡಿ ನಾವು ರಾತ್ರಿ ಪಾಲಯದಲ್ಲೂ ಕೆಲಸ ಮಾಡುವ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡಬೇಕಾಗಿದೆ. ಆಸ್ಪತ್ರೆಯಲ್ಲಿ ಸಂದರ್ಶಕರಿಗೆ ಇಂತಿಷ್ಟೆ ಸಮಯದಲ್ಲಿ ಬರಲು ಫಲಕ ಹಾಕಲಾಗಿದೆ. ಆದರೆ ಇದನ್ನು ಜನರು ಪಾಲಿಸುತ್ತಿಲ್ಲ. ಅದನ್ನು ತಿಳಿಸುವ ವ್ಯವಸ್ಥೆಗೆ ಸರಿಯಾದ ಭದ್ರತಾ ಸಿಬ್ಬಂದಿಗಳ ಕೊರತೆ ಇದೆ. ಕೆಲವರು ಒಳಗೆ ಬಂದಾಗ ನಾವು ಅವರಿಗೆ ತಿಳಿಸಿ ಹೊರಗೆ ಕಳುಹಿಸುತ್ತೇವೆ. ಹೊರಗಿನಿಂದ ಜನರು ಪ್ರಸವ ನಂತರದ ಕೊಠಡಿಗೆ ಬಂದರೆ ಅಲ್ಲಿ ಮಕ್ಕಳಿಗೆ ಅಥವಾ ತಾಯಂದಿರಿಗೆ ಸೋಂಕು ಹರಡುವ ಸಂಭವ ಇದೆ. ಅವರ ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ವೈದ್ಯರು ಯಾವತ್ತಿದ್ದರೂ ನಮ್ಮ ರೋಗಿಗಳಿಗೆ ಏನು ಆಗಬಾರದು ಎಂಬ ನೆಲೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆದರೆ ಆಸ್ಪತ್ರೆಗೆ ಹಲವು ಕಡೆಯಿಂದ ಒಳಗೆ ಬರಲು ಬಾಗಿಲುಗಳಿವೆ. ಇದರಿಂದಾಗಿ ತುಂಬಾ ಸಮಸ್ಯೆ. ಆಡಳಿತಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ರಾತ್ರಿ ಹಗಲೆನ್ನದೆ ನಮಗೆ ಸಲಹೆ ಮಾರ್ಗದರ್ಶನ ನೀಡುತ್ತಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕನಾಟಕ ಸರಕಾರಿ ಮೆಡಿಕಲ್ ಅಫಿಸರ್ಸ್ ಅಸೋಸಿಯೇಶನ್ನ ಕಾರ್ಯದರ್ಶಿ ಡಾ. ನಿಖಿಲ್, ಆಸ್ಪತ್ರೆಯ ವೈದ್ಯರಾದ ಡಾ. ಯದುರಾಜ್, ಡಾ ಅಜೇಯ್ ಉಪಸ್ಥಿತರಿದ್ದರು.
ವೈದ್ಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ
ಡಾ. ಆಶಾ ಪುತ್ತೂರಾಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಶಬ್ದಗಳನ್ನು ಪ್ರಯೋಗಿಸಿ ನಿಂದಿಸುವುದು ಸರಿಯಲ್ಲ. ಇದರಿಂದಾಗಿ ಆಸ್ಪತ್ರೆಯ ಇತರ ವೈದ್ಯರುಗಳು ಕೂಡಾ ಕೆಲಸ ಮಾಡುವ ಸ್ಪೂರ್ತಿಯನ್ನು ಕಳೆದುಕೊಂಡಿದ್ದಾರೆ. ಆಶಾ ಪುತ್ತೂರಾಯ ಅವರು ನಿಕ್ಪಕ್ಷವಾಗಿ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದ್ದಾರೆ. ಆಸ್ಪತ್ರೆಯನ್ನು ಉತ್ತಮ ಸ್ಥಾನಕ್ಕೆ ತರಲು ಡಾ.ಆಶಾ ಪುತ್ತೂರಾಯ ಕಾರಣ. ಇಂತಹ ವೈದ್ಯರ ಮೇಲೆ ನಿಂದನೆ ಮಾಡವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ಮಾಡುವುದು ಅವರ ಮನಸಿಗೆ ನೋವು ಉಂಟು ಮಾಡಿದೆ. ಅವರು ಮಾನಸಿಕ ಖಿನ್ನತೆಯಿಂದ ನಾಲ್ಕು ದಿನ ರಜೆಯಲ್ಲಿದ್ದಾರೆ. ನಮ್ಮೆಲ್ಲ ವೈದ್ಯರು, ನೌಕರರ ಆಶಯ ಒಂದೇ ಡಾ. ಆಶಾ ಪುತ್ತೂರಾಯ ಅವರು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಮುಂದುವರಿಯ ಬೇಕೆಂದು ಮನವಿ.
ಡಾ. ದೀಪಕ್ ರೈ ಅಧ್ಯಕ್ಷರು, ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ದ.ಕ