ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿರಾಡಿ ಶಾಖೆಯ ನೂತನ ಕಟ್ಟಡ ’ಸಹಕಾರಿ ಸೌಧ’ 2024ರ ಅ.7ರಂದು ಲೋಕಾರ್ಪಣೆಗೊಂಡಿತ್ತು. ಸಹಕಾರಿ ಸೌಧ ಉದ್ಘಾಟಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರೂ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ನೂತನ ಕಟ್ಟಡಕ್ಕೆ ಅತೀ ಹೆಚ್ಚಿನ ಮೊತ್ತದ ಸಹಾಯಧನ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಏ.28ರಂದು ಸಂಘಕ್ಕೆ ಭೇಟಿ ನೀಡಿದ ಅವರು ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಬಿಡುಗಡೆಗೊಂಡ 8 ಲಕ್ಷ ರೂ. ಸಹಾಯಧನ ಮೊತ್ತದ ಚೆಕ್ ಅನ್ನು ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು ಅವರಿಗೆ ಹಸ್ತಾಂತರಿಸಿದರು.
ಶಶಿಕುಮಾರ್ ರೈ ಅವರು ಮಾತನಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಉತ್ತಮ ರೀತಿಯ ವ್ಯವಹಾರ ನಡೆಸಿದ್ದು ಹಲವಾರು ವರ್ಷಗಳ ಬಳಿಕ ಕಳೆದ ಎರಡು ವರ್ಷಗಳಿಂದ ಶೇ.100 ಸಾಲ ವಸೂಲಾತಿ ಮಾಡುವುದರ ಮೂಲಕ ದಾಖಲೆಯನ್ನು ಮಾಡಿದೆ. ಇನ್ನು ಮುಂದೆಯೂ ಈ ಸಂಘವು ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು. ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು ಮಾತನಾಡಿ, ಸಹಾಯಧನ ಬಿಡುಗಡೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ವಂದಿಸಿದರು. ಸಂಘದ ನಿರ್ದೇಶಕರಾದ ಭಾಸ್ಕರ ರೈ, ಜಿನ್ನಪ್ಪ ಗೌಡ, ಬಾಬು ನಾಯ್ಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
