
ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮಾಡುತ್ತಾ ಇತರ ವಾಹನ ಗಳಿಗೆ ತೊಂದರೆ ಉಂಟು ಮಾಡಿ ಹುಚ್ಚಾಟ ಮೆರೆದ ಘಟನೆ ಏ 27ರ ರಾತ್ರಿ ನಡೆದಿದೆ.
ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಕಡಬದಿಂದ ಆಲಂಕಾರು ವರೆಗೆ 15ಕಿ.ಮೀ ಉದ್ದಕ್ಕೂ ಹಲವು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿರುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಎರಡು ವೀಡಿಯೋ ತುಣುಕುಗಳು ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಹಲವು ಕಾರಿನಲ್ಲಿ ಅಪಾಯಕಾರಿ ರೀತಿಯಲ್ಲಿ ಕುಳಿತು ಹೋಗುತ್ತಿರುವುದು ಕಂಡು ಬಂದಿದೆ. ಈ ಘಟನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ. ಇದೇ ರೀತಿ ಸುಳ್ಯದಲ್ಲಿ ಇತ್ತೀಚೆಗೆ ಕಾರಿನ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮೆರೆದವರ ವಿರುದ್ದ ಸುಳ್ಯ ಪೊಲೀಸರು ಸುಮೊಟೊ ಕೇಸು ದಾಖಲಿಸಿಕೊಂಡಿದ್ದರು.ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
ಡಿಸೈರೊ ಕಾರು ವಶಕ್ಕೆ ಹಲವರಿಗೆ ಶೋಧ:
ಈ ಸಂಬಂಧ ಸ್ಥಳೀಯ ಡಿಸೈರೊ ಕಾರನ್ನು ಕಡಬ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದು, ಇನ್ನುಳಿದ ಕಾರು ಹಾಗೂ ಪುಂಡಾಟ ಮೆರೆದವರಿಗೆ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಕಡಬ ಠಾಣಾ ಎಸ್.ಐ. ಅಭಿನಂದನ್ ಅವರು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಕಾರನ್ನು ವಶಪಡಿಸಿಕೊಳ್ಳಲಾಗಿದೆ, ಯುವಕರನ್ನು ಶೀಘ್ರ ವಶಕ್ಕೆ ಪಡೆದುಕೊಳ್ಳುತ್ತೇವೆ. ಯುವಕರು ಕ್ರೀಡಾಕೂಟಕ್ಕೆ ಬಂದವರು ಈಗಾಗಲೇ ಬೆಂಗಳೂರು ಕಡೆಗೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ