
ನೆಲ್ಯಾಡಿ: ಕಟ್ಟಿಗೆ ಕೊಂಡೊಯ್ಯುವ ವಿಚಾರದಲ್ಲಿ ಸಹೋದರರ ಮಕ್ಕಳ ನಡುವೆ ಆರಂಭಗೊಂಡ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಮೇ.9ರಂದು ರಾತ್ರಿ ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ ನಡೆದಿದೆ.
ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಗಂಗಪ್ಪ ಗೌಡ ಅವರ ಪುತ್ರ ಶರತ್ಕುಮಾರ್ (34ವ.)ಮೃತಪಟ್ಟ ಯುವಕ. ಮೃತ ಯುವಕನ ಚಿಕ್ಕಪ್ಪ ದಿ.ಜನಾರ್ದನ ಗೌಡರ ಮಗ ಹರಿಪ್ರಸಾದ್ ಕೊಲೆ ಆರೋಪಿ. ಶರತ್ಕುಮಾರ್ ತಂದೆ, ತಾಯಿ ಹಾಗೂ ಸಹೋದರ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿದ್ದು ಮಾದೇರಿಯಲ್ಲಿ ಶರತ್ಕುಮಾರ್ ಒಬ್ಬರೇ ವಾಸ್ತವ್ಯವಿದ್ದರು. ಶರತ್ ಕುಮಾರ್ ಹಾಗೂ ಅವರ ಚಿಕ್ಕಪ್ಪ ದಿ.ಜನಾರ್ದನ ಗೌಡರವರ ಮನೆಯೂ ಅಕ್ಕಪಕ್ಕದಲ್ಲೇ ಇದ್ದು ಶರತ್ಕುಮಾರ್ ಹಾಗೂ ದಿ.ಜನಾರ್ದನ ಗೌಡರ ಮಕ್ಕಳ ಮಧ್ಯೆ ಕೆಲವು ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಗಲಾಟೆಯಾಗುತ್ತಿತ್ತು. ಮೇ 8 ರಂದು ಶರತ್ಕುಮಾರ್ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಗೌಡರವರು ಅವರ ಮನೆಗೆ ಕೊಂಡು ಹೋಗುತ್ತಿದ್ದಾಗ ಕಟ್ಟಿಗೆಯನ್ನು ಕೊಂಡು ಹೋಗದಂತೆ ಶರತ್ಕುಮಾರ್ ತಿಳಿಸಿದ್ದು ಈ ವೇಳೆ ಜನಾರ್ದನ ಗೌಡರವರ ಮನೆಯವರಿಗೂ ಶರತ್ಕುಮಾರ್ ನಡುವೆ ಗಲಾಟೆ ನಡೆದಿದೆ. ಇದೇ ವಿಚಾರದಲ್ಲಿ ಮೇ 9ರಂದು ರಾತ್ರಿ 8 ಗಂಟೆಯಿಂದ 8.30ರ ಅವಧಿಯಲ್ಲಿ ಶರತ್ಕುಮಾರ್ ಚಿಕ್ಕಪ್ಪನ ಮನೆಗೆ ಹೋಗಿ ಅಂಗಳದಲ್ಲಿ ನಿಂತು ಚಿಕ್ಕಪ್ಪನ ಮಗ ಸತೀಶನಿಗೆ ಬೈಯುತ್ತಿದ್ದಾಗ ತೋಟಕ್ಕೆ ಹೋಗಿದ್ದ ಹರಿಪ್ರಸಾದ್ನು ಬಂದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ಕುಮಾರ್ನ ತಲೆಗೆ ಹೊಡೆದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಶರತ್ಕುಮಾರ್ ಅಂಗಳದಲ್ಲಿ ಕುಸಿದು ಬಿದ್ದಾಗ ಹರಿಪ್ರಸಾದ್ನು ಮತ್ತೆ ತಲೆಗೆ ಬಲವಾಗಿ ಹೊಡೆದಿರುವುದರಿಂದ ಶರತ್ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮೃತನ ಅಣ್ಣ ಚರಣ್ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: ಅ.ಕ್ರ: 38/2025 ಕಲಂ: 103(1) ಭಾರತೀಯ ನ್ಯಾಯ ಸಂಹಿತ 2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಎಸ್.ಪಿ.ಭೇಟಿ;
ಕೊಲೆ ಕೃತ್ಯದ ಮಾಹಿತಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆ ಪೊಲೀಸರು ಹಾಗೂ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇ 10ರ ಬೆಳಗಿನ ತನಕವೂ ಶರತ್ಕುಮಾರ್ ಮೃತದೇಹ ಆರೋಪಿ ಹರಿಪ್ರಸಾದ್ರವರ ಮನೆಯ ಮೆಟ್ಟಿಲಿನ ಬಳಿಯಲ್ಲಿಯೇ ಬಿದ್ದಿತ್ತು. ಮೃತದೇಹದ ಪಕ್ಕ ಚಾಕುವೊಂದು ಕಾಣಿಸಿಕೊಂಡಿತ್ತು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸ್ಥಳಕ್ಕೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಕೊಲೆ ಪ್ರಕರಣದ ಆರೋಪಿ ಹರಿಪ್ರಸಾದ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.