ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಪ್ರತಿಷ್ಟಾ ಮಹೋತ್ಸವದ ಅಂಗವಾಗಿ ವಿನಾಯಕ ಮಂಟಪ ಸಭಾಂಗಣದ ಉದ್ಘಾಟನೆ ಮೇ 28 ರಂದು ಸಂಜೆ ನಡೆಯಿತು.
ಸರಕಾರಿ ಜಾಗದಲ್ಲಿರುವ ಮಂದಿರಗಳು ಮಂದಿರಗಳ ಹೆಸರಿಗೆ ಆಗಬೇಕು – ಅಶೋಕ್ ರೈ
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು ‘ದೇವಸ್ಥಾನದ ಬ್ರಹ್ಮಕಲಶೋತ್ಸವದ ರೀತಿಯಲ್ಲಿ ವ್ಯವಸ್ಥೆಗಳು ನಡೆದಿರುವುದು ಸಂತೋಷ ತಂದಿದೆ. ಧರ್ಮದ ಬಗ್ಗೆ ಅರಿವು, ಚಿಂತನೆ ಹೆಚ್ಚಾಗಿದೆ. ದೇವಸ್ಥಾನಗಳು, ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಹೆಚ್ಚಾಗಿವೆ. ದೇವರ ನಂಬಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಒಂದಾಗಿ ಬಾಳುವ ಅವಕಾಶ ಇಲ್ಲಿಯೂ ಕಾಣುತ್ತಿದೆ. ದೇವರನ್ನು ಹೊಗಳುವುದು ಭಜನೆ. ಮನೆಯಲ್ಲಿರುವ ತಂದೆ ತಾಯಿಯ ಅನುಗ್ರಹ ಮೊದಲು ಬೇಕು. ದೇವರು ಏನೂ ಕೇಳುವುದಿಲ್ಲ. ಸರಕಾರದ ಜಾಗದಲ್ಲಿರುವ ಮಂದಿರ, ದೇವಸ್ಥಾನಗಳು ಆಯಾ ಮಂದಿರಗಳ ಹೆಸರಿಗೆ ಆಗಬೇಕು. ಇಲ್ಲಿನ ಜಾಗವನ್ನೂ ಮಂದಿರದ ಹೆಸರಿಗೆ ಮಾಡುವ ಪ್ರಯತ್ನ ಮಾಡುತ್ತೇನೆ. ಹಿಂದುತ್ವದ ಭಾಷಣ ಮಾಡುವ ಬದಲು ಧರ್ಮದ ಉಳಿವು ಅಭಿವೃದ್ಧಿಗೆ ಕೆಲಸ ಮಾಡಬೇಕು’ ಎಂದರು. ಅಭಿವೃದ್ಧಿ ಯಲ್ಲಿ ಕಾಂಗ್ರೆಸ್ ಬಿಜೆಪಿ ಎಂದು ನಾನು ನೋಡುವುದಿಲ್ಲ. ಬಡವರಿಗೆ ಆದ್ಯತೆ ಕೊಡುತ್ತೇನೆ. ದೇಶವನ್ನು ವಿರೋಧಿಸುವವರನ್ನು ಶೂಟೌಟ್ ಮಾಡಬೇಕು.
ಸಂಸ್ಕೃತಿಯ ಪುನರುಜ್ಜೀವನ ಭಜನೆಯಿಂದಾಗಿದೆ – ಡಾ. ಪುತ್ತೂರಾಯ
ಪ್ರತಿಷ್ಟಾ ಮಹೋತ್ಸವ ಕಾರ್ಯಕ್ರಮದ ಸಭಾಂಗಣ ‘ವಿನಾಯಕ ಮಂಟಪ’ ವನ್ನು ಉದ್ಘಾಟಿಸಿ ಮಾತನಾಡಿದ ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ‘ಭಜನಾ ಮಂದಿರಗಳಲ್ಲಿ ಧಾರ್ಮಿಕ ಚಟುವಟಿಕೆ ಮಾತ್ರವಲ್ಲದೇ ಸಮಾಜದ ಅಭ್ಯುದಯಕ್ಕಾಗಿ ಸಾಮಾಜಿಕ ಕಾರ್ಯಗಳು ನಡೆಯಬೇಕು. ಸಂಸ್ಕೃತಿಯ ಪುನರುಜ್ಜೀವನ ಮಾಡುವಲ್ಲಿ ಭಜನಾ ಮಂದಿರಗಳು ವಿಶೇಷ ಪಾತ್ರ ವಹಿಸುತ್ತದೆ. ಪ್ರಪಂಚದಲ್ಲಿ ಹಿಂದು ಸಮಾಜ ಅಲ್ಪಸಂಖ್ಯಾತ ಸಮಾಜವಾಗಿದೆ. ಧರ್ಮವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಲ್ಲಿದೆ’ ಎಂದರು.
ದಾನಿಗಳನ್ನು ಸನ್ಮಾನಿಸಿದ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ರವರು ಮಾತನಾಡಿ, ‘ಸಿದ್ದಿವಿನಾಯಕನ ಕಾರಣಿಕತೆಯಿಂದಾಗಿ ಈ ಕ್ಷೇತ್ರಕ್ಕೆ ಬರುವಂತಾಗಿದೆ. ಪ್ರತಿಯೊಬ್ಬನೂ ಭಕ್ತಿಯಿಂದ ಪಾಲ್ಗೊಳ್ಳುವ ಪುಣ್ಯ ಕ್ಷೇತ್ರವಾಗಿ ಸುಂದರ ಭಜನಾ ಮಂದಿರ ನಿರ್ಮಾಣಗೊಂಡಿದೆ. ಎಲ್ಲರೂ ಸಾಮರಸ್ಯದಿಂದ ಬದುಕಲು ದೇವರ ಅನುಗ್ರಹ ಪ್ರಾಪ್ತಿಸಲಿ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ರವರು ಮಾತನಾಡಿ, ‘ಧಾರ್ಮಿಕ ಕಾರ್ಯಕ್ರಮಗಳಿಗೆ ಮುಂದಾದಾಗ ಸಮಾಜದಲ್ಲಿ ಟೀಕೆ ಸಹಜ. ಅದನ್ನೆಲ್ಲ ಮೀರಿ ಭವ್ಯವಾದ ಮಂದಿರ ನಿರ್ಮಾಣ ಮಾಡಿ ಈ ಭಾಗದಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ಕೊಡುವ ಕಾರ್ಯ ನಡೆದಿದೆ’ ಎಂದರು.
ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಬೊರ್ಕರ್ ರವರು ಮಾತನಾಡಿ, ‘ಮಾನವೀಯ ಮೌಲ್ಯಗಳನ್ನು ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಭಜನೆಯ ಮೂಲಕ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಇಲ್ಲಿನ ಸಮಿತಿಯವರಿಂದ ನಡೆದಿದೆ’ ಎಂದರು.
ನೌಕಾಪಡೆಯ ನಿವೃತ್ತ ಸೈನಿಕ ಪುಷ್ಪರಾಜ್ ಶೆಟ್ಟಿ ಕೋಟೆಯವರು ಮಾತನಾಡಿ, ‘ಈ ಮಂದಿರದಲ್ಲಿ ವಿಶೇಷವಾದ ಚೈತನ್ಯವಿರುವುದು ನನ್ನ ಅನುಭವಕ್ಕೆ ಬಂದಿದೆ. ಧರ್ಮದ ಉನ್ನತಿಗಾಗಿ ನಾವೆಲ್ಲಾ ಕಟಿಬದ್ಧರಾಗೋಣ’ ಎಂದರು.
ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ, ಶೇಣಿ ಶಾರದಾಂಬಾ ವಿದ್ಯಾಲಯದ ಸಂಸ್ಕೃತ ಅಧ್ಯಾಪಕ ಸುಕುಮಾರ್ ಮಂಜುಳಗಿರಿ, ಕುಂಬಾರರ ಗುಡಿಕೈಗಾರಿಕ ಸಹಕಾರಿ ಸಂಘದ ಉಪಾಧ್ಯಕ್ಷ ದಾಮೋದರ ಕುಲಾಲ್, ಪಾಂಚಜನ್ಯ ಎಂಟರ್ಪ್ರೈಸಸ್ ಮ್ಹಾಲಕ ಆನಂದ ಗೌಡ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ನವೀನ್ ರೈ ಚೆಲ್ಯಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿಸಿರೋಡು ಕರ್ನಾಟಕ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಅರುಣ್ ಕುಮಾರ್ ರೈ ಮೊದಲೆಗುಂಡಿ, ಸಿವಿಲ್ ಇಂಜಿನಿಯರ್ ಎನ್. ರಂಜನ್, ಸ್ಕಂದ ಬೋರ್ವೆಲ್ ಮ್ಹಾಲಕ ಸಂದೀಪ್ ಉಪಸ್ಥಿತರಿದ್ದರು. ಬಣ್ಣದ ಮಾಲಿಂಗ ಯಕ್ಷಸ್ನೃತಿ ಪುರಸ್ಕೃತರಾದ ಬಾಲಕೃಷ್ಣ ಪೂಜಾರಿ ಉಡ್ಡಂಗಳ ರವರು ಮಾತನಾಡಿ ‘ಭಜನೆ ಮತ್ತು ಯಕ್ಷಗಾನ ಧಾರ್ಮಿಕ ಶಿಕ್ಷಣದ ಒಂದು ಅಂಗವಾಗಿದೆ’ ಎಂದರು.
ಸನ್ಮಾನ
ಮಂದಿರ ನಿರ್ಮಾಣದಲ್ಲಿ ಮರ ಮುಂಗಟ್ಟು ನೀಡಿ ಸಹಕರಿಸಿದ ರಾಧಾಕೃಷ್ಣ ಭಟ್ ಕಕ್ಕೂರು, ಮೋನಪ್ಪ ಗೌಡ ನಾಯರಡ್ಕ, ಸುಧಾಕರ ಭಟ್ ಬಂಟಾಜೆ, ಕೊರಗಪ್ಪ ವಿನಾಯಕನಗರ, ಶಂಕರ ಪಾಟಾಳಿ ಕಕ್ಕೂರು, ರಾಮಯ್ಯ ರೈ ಕಕ್ಕೂರು ಸ್ನರಣಾರ್ಥ ಮೀನಾಕ್ಷಿ ರಾಮಯ್ಯ ರೈ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕರಿಗೆ ಸನ್ಮಾನ
ಮಂದಿರ ನಿರ್ಮಾಣಕ್ಕಾಗಿ ಸರಕಾರದ ಕಡೆಯಿಂದ 5 ಲಕ್ಷ ರೂ. ಅನುದಾನ ತರಿಸಿದ ಶಾಸಕ ಅಶೋಕ್ ರೈಯವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಭಜನಾ ತರಬೇತುದಾರನಿಗೆ ಸನ್ಮಾನ
ಇದೇ ವೇಳೆ ಭಜನಾ ತರಬೇತುದಾರ ಮೋಹನ್ ದರ್ಬೆತ್ತಡ್ಕರವರನ್ನು ಗೌರವಿಸಲಾಯಿತು.
ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸನತ್ ಕುಮಾರ್ ರೈ ತೋಟದಮೂಲೆ ಸ್ವಾಗತಿಸಿ, ಧನ್ಯಶ್ರೀ ಕಕ್ಕೂರು ವಂದಿಸಿದರು. ಅಜಿತ್ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಕಾರ್ಯದರ್ಶಿ ಸುರೇಂದ್ರ ಕಕ್ಕೂರು, ಕೋಶಾಧಿಕಾರಿ ದಿನೇಶ್ ಪಂಬೆಜಾಲು, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಶ್ರೀಕುಮಾರ್ ಅಡ್ಯೆತ್ತಿಮಾರು, ಕಾರ್ಯದರ್ಶಿ ಗಣೇಶ್ ಪಂಬೆಜಾಲು, ಕೋಶಾಧಿಕಾರಿ ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ ಉಪಸ್ಥಿತರಿದ್ದರು.
ವೈದಿಕ ಕಾರ್ಯಕ್ರಮಗಳ ಅಂಗವಾಗಿ ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ರಾತ್ರಿ ಮಹಾಸುದರ್ಶನ ಹೋಮ, ಶ್ರೀ ದುರ್ಗಾಪೂಜೆ ನಡೆಯಿತು.
ಜ್ಞಾನ ಮಂದಿರ ನಿರ್ಮಾಣಕ್ಕೆ 3 ಲಕ್ಷ ರೂ. ಘೋಷಿಸಿದ ಶಾಸಕರು
ಇದೇ ವೇಳೆ ಭಜನಾ ಮಂದಿರವು ಜ್ಞಾನ ಮಂದಿರವೂ ಆಗಬೇಕೆಂಬ ಹಿನ್ನೆಲೆಯಲ್ಲಿ ವಾಚನಾಲಯ ನಿರ್ಮಾಣದ ಅನುದಾನಕ್ಕಾಗಿ ಶಾಸಕರಿಗೆ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು. ತನ್ನ ಭಾಷಣದಲ್ಲಿ ವಾಚನಾಲಯಕ್ಕಾಗಿ 3 ಲಕ್ಷ ರೂ. ಬರೆದಿದ್ದೇನೆ ಎಂದರು.
ಇಂದು ಹಸಿರುವಾಣಿ, ದೇವರ ಛಾಯಾಬಿಂಬ ಮೆರವಣಿಗೆ
ಪ್ರತಿಷ್ಟಾ ಮಹೋತ್ಸವದ ಅಂಗವಾಗಿ ಹಸಿರುವಾಣಿ ಮೆರವಣಿಗೆಯು ಮೇ 29 ರಂದು ಬೆಳಿಗ್ಗೆ ರೆಂಜ ಅಯ್ಯಪ್ಪ ಭಜನಾ ಮಂದಿರದಲ್ಲಿ ಚಾಲನೆಗೊಳ್ಳಲಿದೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ದೇವರ ಛಾಯಾಬಿಂಬ ಮೆರವಣಿಗೆ ನಡೆಯಲಿದೆ. ಸಂಜೆ ರಾಕ್ಷೋಘ್ನ ಹೋಮ, ಭೂವರಾಹ ಹೋಮ, ವಾಸ್ತು ಹೋಮ ವೈದಿಕ ವಿಧಾನಗಳು ನಡೆಯಲಿವೆ. ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಭಕ್ತಿ ಸಂಗೀತ, ರಾತ್ರಿ ಯಕ್ಷಗಾನ ಜರಗಲಿದೆ