ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕಾನುಮೂಲೆ ನಿವಾಸಿ ಪುಷ್ಪಲತಾ ಬಿ ಎಂಬವರ ಮನೆಯ ಹಿಂದೆ ಬೇರೊಬ್ಬರಿಗೆ ಸೇರಿದ ಗುಡ್ಡ ಕುಸಿತಗೊಂಡು ಬಚ್ಚಲು ಮನೆ ಸಂಪೂರ್ಣ ಹಾನಿಗೊಂಡ ಘಟನೆ ಮೇ.28ರಂದು ಸಂಭವಿಸಿದೆ. ಅಲ್ಲದೆ ಅಪಾರ ಪ್ರಮಾಣದಲ್ಲಿ ಮಣ್ಣು ಬಿದ್ದಿರುವುದರಿಂದ ಮನೆಯ ಹಿಂದೆ ಬಹಳ ತೊಂದರೆಯಾಗಿದೆ.
ಮನೆಯ ಹಿಂದೆ ಬೇರೊಬ್ಬರ ಜಾಗವಿದ್ದು ಅವರ ಜಾಗ ತಲಪಾಯ ಮಾಡುವಾಗ ಮಣ್ಣು ತಂದು ಅಲ್ಲಿ ರಾಶಿ ಹಾಕಿದ ಕಾರಣ ವಿಪರೀತ ಮಳೆಗೆ ಆ ಮಣ್ಣು ಕುಸಿದು ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ದೂರು: ಕಳೆದ ಮೂರು ವರ್ಷಗಳಿಂದ ಇದೆ ರೀತಿ ಮಣ್ಣು ಕುಸಿತದ ಘಟನೆ ನಡೆಯುತ್ತಿದ್ದು, ಆ ಬಗ್ಗೆ ಪಂಚಾಯತ್ ಗೆ ದೂರು ನೀಡಲಾಗಿತ್ತು. ಮಣ್ಣನ್ನು ತೆರವುಗೊಳಿಸಲು ಪಂಚಾಯತ್ ನಿಂದ ಅವರಿಗೆ ಸೂಚನೆ ನೀಡಿದರೂ ತೆಗೆಯದ ಕಾರಣ ಈ ಸಮಸ್ಯೆ ಉಂಟಾಗಿದೆ. ಅಲ್ಲದೆ ಮಣ್ಣು ಬಚ್ಚಲು ಮನೆಯ ಮೇಲೆ ಬಿದ್ದು 15 ಸಿಮೆಂಟ್ ಶೀಟ್ ಪುಡಿಯಾಗಿದ್ದು, ಬಚ್ಚಲು ಮನೆಯ ಗೋಡೆಗೂ ಹಾನಿ ಸಂಭವಿಸಿ ಅಪಾರ ನಷ್ಟ ಸಂಭವಿಸಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಪ್ಯ ಠಾಣೆಗೆ ದೂರು ನೀಡಲಾಗಿದೆ ಎಂದು ಪುಷ್ಪಲತಾರವರು ಪತ್ರಿಕೆಗೆ ತಿಳಿಸಿದ್ದಾರೆ.