ಪುತ್ತೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಎಲ್ಲೆಡೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದು, ಮೇ.31ರ ಮುಂಜಾನೆ ವೇಳೆಗೆ ಶಾಸಕ ಅಶೋಕ್ ಕುಮಾರ್ ರೈಯವರ ಕೋಡಿಂಬಾಡಿಯಲ್ಲಿರುವ ಮನೆಯ ಹಟ್ಟಿಯ ಮೇಲೆ ಗುಡ್ಡ ಕುಸಿದು ಬಿದ್ದು ದನವೊಂದು ಸಾವನ್ನಪ್ಪಿದೆ.

ಅಶೋಕ್ ಕುಮಾರ್ ರೈಯವರ ಹಳೆ ಮನೆಯ ಬಳಿಯಿರುವ ಆರ್.ಸಿಸಿ ಕಟ್ಟಡದ ಹಟ್ಟಿಯಿದೆ. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಹಟ್ಟಿಯ ಹಿಂಭಾಗದ ಗುಡ್ಡ ಕುಸಿದು ಹಟ್ಟಿ ಸಂಪೂರ್ಣವಾಗಿ ಮಣ್ಣಿನಡಿಗೆ ಬಿದ್ದಿದೆ. ಘಟನೆಯಿಂದ ಹಟ್ಟಿಯಲ್ಲಿದ್ದ ಒಂದು ದನ ಮೃತಪಟ್ಟರೆ ಇನ್ನೊಂದು ಗಾಯಗೊಂಡಿದೆ. ಅಲ್ಲದೆ ಹಳೆಯ ಮನೆಯ ಹಿಂಭಾಗದ ತಡೆಗೋಡೆ ಕುಸಿದು ಬಿದ್ದಿದೆ. ಪಂಪ್ ಶೆಡ್, ವಿದ್ಯುತ್ ಕಂಬ ಹಾಗೂ ಅಡಿಕೆ ತೋಟಕ್ಕೂ ಹಾನಿಯುಂಟಾಗಿದ್ದು ಸುಮಾರು 25 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.