ಪುತ್ತೂರು: ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಅಧೀನದಲ್ಲಿರುವ ಅನಿವಾಸಿ ಭಾರತೀಯರ ಸಂಘಟನೆ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಜಮಾಅತ್ ಯುವ ಸಮಾವೇಶ ಕಾರ್ಯಕ್ರಮ ಸಂಟ್ಯಾರ್ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ನಡೆಯಿತು. ಗಲ್ಫ್ ಫ್ರೆಂಡ್ಸ್ ಅಧ್ಯಕ್ಷ ಸಾಬಿತ್ ಅಲಿ ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಖತೀಬ್ ಅಬ್ದುಲ್ ಲತೀಫ್ ಹನೀಫಿ ದುವಾ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾವೇಶದಲ್ಲಿ ಶೈಕ್ಷಣಿಕ ಪ್ರಗತಿ ಸಂವಾದ, ಉದ್ಯಮಶೀಲತಾ ಕಾರ್ಯಾಗಾರ ಹಾಗೂ ಐಕ್ಯತೆ ಮತ್ತು ಸಹೋದರತ್ವ ಸಂದೇಶ ನೀಡಲಾಯಿತು.
ಶೈಕ್ಷಣಿಕ ಪ್ರಗತಿ ಸಂವಾದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಣ ತಜ್ಞರಾದ ರಫೀಕ್ ಮಾಸ್ಟರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಬಗ್ಗೆ ಸ್ಪಷ್ಟವಾದ ಗುರಿಯನ್ನು ಹೊಂದಬೇಕು ಹಾಗೂ ಆ ಗುರಿಯನ್ನು ತಲುಪಲು ಪೋಷಕರ ಜವಾಬ್ದಾರಿಯ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಟ್ಯಾರ್ ಜಮಾಅತ್ನ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಉದ್ಯಮಶೀಲತಾ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಕರ್ಷನ್ ಇಂಡಸ್ಟ್ರೀಸ್ ಇದರ ಎಂ.ಡಿ ಸಾದಿಕ್ ಹಾಜಿ ಮಾತನಾಡಿ “Spark-Bizz” ಉದ್ಯೋಗದ ಒಂದು ಕಿಡಿ ಎಂಬ ಶೀರ್ಷಿಕೆಯಲ್ಲಿ ವಿಷಯ ಮಂಡಿಸಿದರು, ಯುವ ಜನತೆಯು ಸ್ವಯಂ ಉದ್ಯೋಗದ ಕಡೆ ಆಕರ್ಷಿತರಾಗಬೇಕಾಗಿದೆ ಎಂದು ಹೇಳಿದರು.
ಐಕ್ಯತೆ ಹಾಗೂ ಸಹೋದರತ್ವ ಸಂದೇಶ ನೀಡಿದ ಬೋಲಿಯಾರ್ ಜುಮಾ ಮಸೀದಿ ಖತೀಬ್ ರಿಯಾಝ್ ರಹ್ಮಾನಿ ಕಿನ್ಯ ಮಾತನಾಡಿ ಐಕ್ಯತೆ ಹಾಗೂ ಸಹೋದರತ್ವ ಎಂಬುದು ಹೊಸದೊಂದು ಸೇರಿಸಲು ಇರುವ ಅಂಶವಲ್ಲ, ನಮ್ಮ ಜನ್ಮತಾ ನಮ್ಮಲ್ಲಿರುವ ಅಂಶವಾಗಿದೆ, ಪರಸ್ಪರ ಜಮಾತ್ನ ಸರ್ವರೂ ಐಕ್ಯತೆಯಿಂದ ಒಂದೇ ಕುಟುಂಬದ ಸದಸ್ಯರಂತೆ ಇದ್ದರೆ ಮಾತ್ರ ಆ ಜಮಾಅತ್ ಅಭಿವೃದ್ದಿಯ ಕಡೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಫಾರೂಕ್ ಸಂಟ್ಯಾರ್, ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಜೊತೆ ಕಾರ್ಯದರ್ಶಿ ಅಝೀಝ್ ಕಲ್ಲರ್ಪೆ, ಸದಸ್ಯರಾದ ಮಹಮ್ಮದ್ ನೀರ್ಕಜೆ, ಸಮೀರ್ ಸಲಾಲ, ನಿಶಾದ್ ಮಲಾರ್, ನಾಸಿರ್ ನೀರ್ಕಜೆ, ಆಸಿಫ್ ಕಲ್ಲರ್ಪೆ ಹಾಗೂ ಜಮಾತ್ನ ಯುವಕರು, ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ದೇಶಕ ಸವಾದ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.