ಆಲಂಕಾರು: ಆಲಂಕಾರು ಗ್ರಾಮದ ಕಕ್ವೆ ಪರಿಸರದಲ್ಲಿ ಧಾರಕಾರ ಮಳೆಯಿಂದ ಧರೆ ಕುಸಿದು ಹತ್ತಿರದ ಮರ ಬಿದ್ದು ವಿದ್ಯುತ್ ಕಂಬಗಳು ರಸ್ತೆಯಲ್ಲಿ ಮುರಿದು ಬಿದ್ದಿದ್ದು, ಕಕ್ವೆ ಪರಿಸರದ ಹತ್ತು ಮನೆಗಳ ಸಂಪರ್ಕ ರಸ್ತೆ ಕಳಕೊಳ್ಳುವ ಭೀತಿ ಎದುರಾಗಿದೆ. ಧರೆ ಕುಸಿತದ ಮಣ್ಣು ಕಕ್ವೆ ಪದ್ಮಯ್ಯ ಗೌಡ ,ಶಿವಣ್ಣ ಗೌಡ ಎಂಬುವವರ ತೋಟಕ್ಕೆ ನೀರಿನ ಮೂಲಕ ಮಣ್ಣು ನುಗ್ಗಿ, ಪದ್ಮಯ್ಯ ಗೌಡರ ತೋಟದ ಪಕ್ಕದಲ್ಲಿ ಹರಿಯುತ್ತಿದ್ದ ನೀರು ಉಕ್ಕಿ,ಮತ್ತು ಪಕ್ಕದ ರಸ್ತೆಯಲ್ಲಿ ಹರಿದ ನೀರು ಒಟ್ಟಾಗಿ ಹರಿದ ಪರಿಣಾಮ ರಸ್ತೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿ ಸುಮಾರು 10ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪದ್ಮಯ್ಯ ಗೌಡರ ಸುಮಾರು 100ಕ್ಕೂ ಹೆಚ್ಚು ಫಸಲುಭರಿತ ಅಡಿಕೆಮರ, ಶಿವಣ್ಣ ಗೌಡರ ಫಸಲು ಭರಿತ ಅಂದಾಜು 400ಕ್ಕೂ ಹೆಚ್ಚು ಗಿಡಗಳ ಮದ್ಯೆ ಕೆಸರು ನೀರು ತುಂಬಿಕೊಂಡಿದೆ. ತೋಟಕ್ಕೆ ಬೇಸಿಗೆ ಕಾಲದಲ್ಲಿ ನೀರುಣಿಸಲು ಇದ್ದ ಬೃಹದಾಕಾರದ ಕೆರೆ ಸಂಪೂರ್ಣ ಮಣ್ಣು ತುಂಬಿಕೊಂಡು ಮುಚ್ಚಿ ಹೋಗಿದೆ. ತೋಟದ ಪಕ್ಕದಲ್ಲಿದ್ದ ಮರಗಳು, ಅಡಿಕೆ ಗಿಡಗಳು ಧರಶಾಯಿಯಾಗುತ್ತಲೇ ಇದೆ. ಮಳೆ ಪ್ರಮಾಣ ಇನ್ನಷ್ಟು ಹೆಚ್ಚಿದಲ್ಲಿ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದ್ದು, ಸಂಬಂಧ ಪಟ್ಟ ಜನಪ್ರತಿನಿಧಿಗಳು ಮತ್ತು ಸರಕಾರ ಈ ಬಗ್ಗೆ ಗಮನ ಹರಿಸಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಅಲ್ಲಿನ ಗ್ರಾಮಸ್ಥರು ಅಗ್ರಹಿಸುತ್ತಿದ್ದಾರೆ.
ಕಕ್ವೆ ಗ್ರಾ.ಪಂ ರಸ್ತೆಯನ್ನು ನಾವು 30 ವರ್ಷಗಳಿಂದ ಉಪಯೋಗಿಸಿಕೊಂಡು ಬರುತ್ತಿದ್ದೇವೆ, ಇದು ದೈನಂದಿನ ಚಟುವಟಿಕೆ ಮತ್ತು ಶಾಲಾ ವಿದ್ಯಾರ್ಥಿಗಳು ಹೋಗುವ ರಸ್ತೆಯಾಗಿದ್ದು, ನಮಗೆ ಇದೇ ರಸ್ತೆ ಬಿಟ್ಟು ಬೇರೆ ರಸ್ತೆ ಇಲ್ಲ. 10 ಮನೆಯವರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದೇವೆ ಸರಕಾರ ಅದಷ್ಟು ಬೇಗನೇ ಸರಿಪಡಿಸಿ ಕೊಡುವಂತೆ ಒತ್ತಾಯಿಸುತ್ತೇವೆ.
ದಾಮೋದರ ಗೌಡ ಕಕ್ವೆ
ಮಾಜಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಕ್ಷೇತ್ರ ಶರವೂರು ( ರಸ್ತೆಯ ಫಲಾನುಭವಿ)
ಘಟನಾ ಸ್ಥಳಕ್ಕೆ ಅಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲಾ, ಅಭಿವೃದ್ಧಿ ಅಧಿಕಾರಿ ಸುಜಾತ.ಕೆ, ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ,ಗ್ರಾಮಸಹಾಯಕರು ವಿಶ್ವನಾಥ ಮತ್ತು ಗ್ರಾ.ಪಂ ಸದಸ್ಯರು,ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿದ್ದಾರೆ.
ಆಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಯ ಅಜಿಲ ಬಿನ್ ಹುಕ್ರ ಅಜಿಲ ಶರವೂರು ಇವರ ಮನೆ ಬರೆ ಕುಸಿತ, ಜಾನಕಿ ಕೋಂ ಫಕ್ರು ಅಜಿಲ ಶರವೂರು ರವರ ಮನೆ ಬಳಿ ಬರೆ ಕುಸಿತ, ದೇವಣ್ಣ ಬಿನ್ ತನಿಯಪ್ಪ ಗೌಡ ಕಕ್ವೆ ಇವರ ಮನೆ ಮೇಲೆ ಗುಡ್ಡ ಕುಸಿತ, ಚಿತ್ರಾವತಿ ಕೋಂ ಕುಶಾಲಪ್ಪ ಗೌಡ ಪಜ್ಜಾಪು ಇವರ ಮನೆ ಬಳಿ ಗುಡ್ಡ ಕುಸಿತ , ಉಮೇಶ ಬಿನ್ ಸೇಸಪ್ಪ ಗೌಡ ಕಕ್ವೆ ರವರ ಮನೆ ಬಳಿ ಗುಡ್ಡ ಕುಸಿತ, ಮೋನಪ್ಪ ಗೌಡ ಬಿನ್ ನಾಗಪ್ಪ ಗೌಡ ಕಕ್ವೆ ಮನೆ ಬಳಿ ಮಣ್ಣು ಕುಸಿತ, ಶಿವಣ್ಣ ಗೌಡ ಬಿನ್ ಲಕ್ಷ್ಮಣ ಗೌಡ ಬಾಳ್ತಿಕುಮೇರು ಇವರ ಮನೆ ಬಳಿ ಹಾಗು ಬುಡೇರಿಯಾ ಕಡೆಗಳಲ್ಲಿ ಹಾಗು ಇನ್ನಿತರ ಕಡೆಗಳಲ್ಲಿ ಗುಡ್ಡ ಕುಸಿತಗೊಂಡಿದೆ. ಆಲಂಕಾರು ಪೇಟೆಯಲ್ಲಿರುವ ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಹಿಂಭಾಗದಲ್ಲಿ ಧರೆ ಕುಸಿತಗೊಂಡಿದ್ದು ಬೈಕ್ ಮತ್ತು ಅಕ್ಟೀವ್ ಹೊಂಡ ಮಣ್ಣಿನ ಅಡಿಗೆ ಬಿದ್ದಿದೆ. ಎಲ್ಲಾ ಸ್ಥಳಗಳಿಗೆ ಗ್ರಾ.ಪಂ ಮತ್ತು ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.