ಸರಕಾರದಿಂದ ಹಿಂದೂ ಕಾರ್ಯಕರ್ತರ ದಮನದ ಉದ್ದೇಶ-ಪೊಲೀಸರಿಂದ ನಡುರಾತ್ರಿಯ ಹೊತ್ತಿನಲ್ಲಿ ಕಾರ್ಯಕರ್ತರ ಮನೆ ಭೇಟಿ ಕಾನೂನು ಬಾಹಿರ : ವಿಹಿಂಪ ಪತ್ರಿಕಾಗೋಷ್ಠಿ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ನಮ್ಮ ಸಾಮಾನ್ಯ ಕಾರ್ಯಕರ್ತರ ಮನೆಗಳಿಗೆ ತಡ ರಾತ್ರಿ ಭೇಟಿ ನೀಡಿ ಬೆದರಿಸುವ ರೀತಿಯಲ್ಲಿ ಜಿಪಿಎಸ್ ಫೋಟೋ ಕ್ಲಿಕ್ಕಿಸುವುದು ಸರಿಯಲ್ಲ. ಇದು ಕಾನೂನು ಬಾಹಿರ. ಇದು ಮುಂದುವರಿಸದಂತೆ ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕಾರ್ಯದರ್ಶಿ ನವೀನ್ ನೆರಿಯ, ಕೋಶಾಧಿಕಾರಿ ಮಾದವ ಪೂಜಾರಿ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.


ಸರಕಾರ ಹಿಂದೂ ಕಾರ್ಯಕರ್ತರನ್ನು ದಮನ ಮಾಡುವ ಉದ್ದೇಶವಿಟ್ಟು ಕೊಂಡಿದ್ದಾರೆ. ಪೊಲೀಸರು ಇದೀಗ ಕಾರ್ಯಕರ್ತರ ಮನೆಗಳಿಗೆ ನಡು ರಾತ್ರಿ ಬಂದು ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದ ಕಾರ್ಯಕರ್ತರ ಮನೆಗೆ ನಡುರಾತ್ರಿ ಹೋಗುವುದು ಸರಿಯಲ್ಲ. ವಯೋವೃದ್ಧರು, ಅನಾರೋಗ್ಯದವರು ಇರುವ ಮನೆಯಲ್ಲಿ ಈ ರೀತಿಯ ಪೊಲೀಸರ ಕಿರಿಕಿರಿಯಿಂದ ಏನಾದರೂ ಹೆಚ್ಚುಕಡಿಮೆ ಆದರೆ ಪೊಲೀಸರೇ ಜವಾಬ್ದಾರರು ಎಂದು ಡಾ.ಕೃಷ್ಣಪ್ರಸನ್ನ ಹೇಳಿದ್ದಾರೆ.


ಹೈಕೋರ್ಟ್ ಆದೇಶವಿದೆ:
ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ರ ತನಕ ಮನೆಗಳಿಗೆ ಪೊಲೀಸರು ಭೇಟಿ ಕೊಡಬಾರದು ಎಂದು ಹೈಕೋರ್ಟ್ ಆದೇಶವಿದೆ. ವಾರಂಟ್ ಅಥವಾ ಸರ್ಚ್ ವಾರಂಟ್ ಇದ್ದರೂ ಅದಕ್ಕೆ ನೋಟೀಸ್ ಕೊಟ್ಟು ಹೋಗಬಹುದು. ಆದರೆ ಈಗ ಪೊಲೀಸರು ರಾತ್ರಿ ಕಾರ್ಯಕರ್ತರ ಮನೆಗಳಿಗೆ ಹೋಗಿ ಅಲ್ಲಿ ಅವರ ವಾಹನ ತಪಾಸಣೆ ಮಾಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಎಸ್ಪಿಯವರಿಗೂ ಈ ಕುರಿತು ಮನವಿ ಮಾಡಲಿದ್ದೇವೆ ಮತ್ತು ನಾವು ಪೊಲೀಸರು ರಾತ್ರಿ ಮನೆಗೆ ಭೇಟಿ ನೀಡುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ವಿಶ್ವಹಿಂದು ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ ತಿಳಿಸಿದರು.


ಹೈಕೋರ್ಟ್‌ಗೆ ಪಿಎಎಲ್:
ಈಗಿನ ಹೊಸ ಕಾನೂನು ಪ್ರಕಾರ 7 ವರ್ಷದಲ್ಲಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ ನೋಟೀಸ್ ಕೊಟ್ಟು ಹಾಜಾರಾಗಲು ತಿಳಿಸುತ್ತಾರೆ. ಇಂತಹ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲು ಆಗದೇ ಇರುವಾಗ ಅವರ ಮನೆಗೆ ಹೋಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸುವುದು ಕಾನೂನು ಬಾಹಿರ. ಈ ಕುರಿತು ನಾವು ಹೋರಾಟ ಮಾಡಲು ಪಿಎಎಲ್ ಹಾಕಲಿದ್ದೇವೆ. ಈ ಅಧಿಕಾರಿ ವರ್ಗದವರನ್ನು ಪತ್ರಕರ್ತರು ಪ್ರಶ್ನೆ ಮಾಡಬೇಕು ಎಂದು ಮಾದವ ಪೂಜಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಸಹಸಂಯೋಜಕ ಸಂತೋಷ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

ಗೋವಂಶದ ಕುರ್ಬಾನಿ ಆಗದ ಹಾಗೆ ಮನವಿ
ರಾಜ್ಯ ಮತ್ತು ದೇಶದ ಕಾನೂನಿನನ್ವಯ ಹಾಗು ಆನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾದ ಸುತ್ತೋಲೆಯಂತೆ ಹಾಗು ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಮತ್ತಿತರ ಹಬ್ಬ ಸಂದರ್ಭದಲ್ಲಿ ಜಾನುವಾರು ಮತ್ತು ಇತರೇ ಪ್ರಾಣಿಗಳ ಹತ್ಯೆ ನಿಷೇಧವಿದ್ದು. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧ ಕಾಯಿದೆ 1959ರ ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲಿ ನಿಷೇಧವಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಇದರ ಜೊತೆಗೆ ಕಾಯ್ದೆ ಪ್ರಕಾರ ಪ್ರಾಣಿ ಬಲಿ ತಡೆಯುವ ಅಧಿಕಾರ ಸಾರ್ವಜನಿಕರಿಗೂ ಇದೆ. ಹಾಗಾಗಿ ಅಕ್ರಮ ಜಾನುವಾರು ಸಾಗಾಟ ತಡೆಯುವಲ್ಲಿ ಸಾರ್ವಜನಿಕರಿಗೆ ಅವಕಾಶ ಸಿಗದಂತೆ ಪೊಲೀಸರು ಎಚ್ಚರ ವಹಿಸಬೇಕೆಂದು ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here