*ಉತ್ತಮ ಮನಸ್ಸು, ಹೃದಯವಿದ್ದಾಗ ನೆಮ್ಮದಿಯ, ಸಂತೋಷದ, ಆರೋಗ್ಯದ ಜೀವನ-ವಂ|ಲಾರೆನ್ಸ್ ಮಸ್ಕರೇನ್ಹಸ್
*ಉದ್ಯೋಗದಲ್ಲಿನ ಒಂದಂಶ ಸಮಾಜದ ಬೆಳವಣಿಗೆಯಲ್ಲಿ ತೊಡಗಿಸಿ-ಡಾ.ನಝೀರ್ ಅಹಮದ್
*ಉತ್ತಮ ಸೇವೆಯಿದ್ದಲ್ಲಿ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ-ಡಾ.ಶ್ರೀಪ್ರಕಾಶ್
*ವೈದ್ಯ, ಫಾರ್ಮಸಿ, ಆಸ್ಪತ್ರೆ, ರೋಗಿ ವೈದ್ಯಲೋಕದ ಅಡಿಪಾಯಗಳು-ಡಾ.ಸತೀಶ್ ಎ.ಪಿ
ಪುತ್ತೂರು: ದರ್ಬೆ ಜಂಕ್ಷನ್ ನಲ್ಲಿನ ಪ್ರೇಮಾ ಬೇಕರಿ ಎದುರುಗಡೆಯ ಕೆ.ಎಂ ಗೌಡ ಬಿಲ್ಡಿಂಗ್ ನಲ್ಲಿ ಔಷಧಗಳ ಹಾಗೂ ಸೌಂದರ್ಯವರ್ಧಕಗಳ ಮಳಿಗೆ ಜಯಶಂಕರ ಮೆಡಿಕಲ್ಸ್ ಜೂ.6ರಂದು ಶುಭಾರಂಭಗೊಂಡಿತು.
ಉತ್ತಮ ಮನಸ್ಸು, ಹೃದಯವಿದ್ದಾಗ ನೆಮ್ಮದಿಯ, ಸಂತೋಷದ, ಆರೋಗ್ಯದ ಜೀವನ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ, ದೇವರು ನಮಗೆ ಜೀವನ ನಿರ್ವಹಣೆಗೆ ಯಾವುದಾದರೂ ಉದ್ಯೋಗ ಕಲ್ಪಿಸಿಕೊಟ್ಟಿರುತ್ತಾನೆ. ಮಾನವನಿಗೆ ಬೇರೆ ಬೇರೆ ರೀತಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮಾನವನಿಗೆ ಒಳ್ಳೆಯ ಆರೋಗ್ಯವನ್ನು ಹೊಂದಲು ವೈದ್ಯರುಗಳು ಶ್ರಮಿಸುತ್ತಾರೆ. ನಮ್ಮ ಆರೋಗ್ಯ ಸುಧಾರಿಸುವಲ್ಲಿ ಒಳ್ಳೆಯ ಗುಣಮಟ್ಟದ ಔಷಧಗಳ ಪೂರೈಕೆ ಸಹಕಾರಿಯಾಗುತ್ತದೆ. ನಮ್ಮಲ್ಲಿ ಉತ್ತಮ ಮನಸ್ಸು, ಹೃದಯವಿದ್ದಾಗ ನೆಮ್ಮದಿಯ, ಸಂತೋಷದ ಜೀವನ ನಮ್ಮದಾಗಬಲ್ಲುದು ಎಂದು ಹೇಳಿ ಶುಭ ಹಾರೈಸಿದರು.
ಉದ್ಯೋಗದಲ್ಲಿನ ಒಂದಂಶ ಸಮಾಜದ ಬೆಳವಣಿಗೆಯಲ್ಲಿ ತೊಡಗಿಸಿ-ಡಾ.ನಝೀರ್ ಅಹಮದ್:
ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮದ್ ಮಾತನಾಡಿ, ಜೀವನಾಧಾರಕ್ಕೆ ನಮಗೆ ಉದ್ಯೋಗ ಅಗತ್ಯ. ಉದ್ಯೋಗದಲ್ಲಿ ಸಿಗುವ ಲಾಭಾಂಶ ದ ಒಂದಂಶವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಿದರೆ ಉದ್ಯಮ ಬೆಳೆಯುತ್ತದೆ. ಯಾವುದೇ ಉದ್ಯಮ ಬೆಳೆಯಬೇಕಾದರೆ ಆ ಉದ್ಯಮದಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಆ ಸಂಸ್ಥೆ ಉತ್ತುಂಗಕ್ಕೆ ಬೆಳೆಯುತ್ತದೆ. ದೇವರ ಹಾಗೂ ಹೆತ್ತವರ ಆಶೀರ್ವಾದದಿಂದ ಆರಂಭಿಸಿದ ಈ ಮೆಡಿಕಲ್ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಉತ್ತಮ ಸೇವೆಯಿದ್ದಲ್ಲಿ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ-ಡಾ.ಶ್ರೀಪ್ರಕಾಶ್:
ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ನ ವೈದ್ಯ ಡಾ. ಶ್ರೀಪ್ರಕಾಶ್ ಬಿ. ಮಾತನಾಡಿ, ದರ್ಬೆ ಜಂಕ್ಷನ್ ನಲ್ಲಿನ ಈ ಬಿಲ್ಡಿಂಗ್ ನಲ್ಲಿ ನಾನು ಮತ್ತು ಮರಿಕೆ ಕ್ಲಿನಿಕ್ ವೈದ್ಯ ಡಾ.ಸತೀಶ್ ಎ.ಪಿರವರು ಹಲವಾರು ವರ್ಷಗಳಿಂದ ಸೇವೆ ನೀಡುತ್ತಿದ್ದೇವೆ. ಗ್ರಾಹಕರಿಗೆ ಬೇಕಾದ ಎಲ್ಲಾ ರೀತಿಯ ಔಷಧಿಗಳ, ಪೌಷ್ಟಿಕಾಂಶಗಳ ವ್ಯವಸ್ಥೆಯನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿದಾಗ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ದಿನದ ಎಂಟು ಗಂಟೆ ನಿದ್ರೆಯೊಂದಿಗೆ ಉಳಿದ ಹದಿನಾರು ಗಂಟೆ ಪ್ರಾಮಾಣಿಕವಾಗಿ ದೇವರು ಮೆಚ್ಚುವ ಕೆಲಸ ಮಾಡಿದಾಗ ನಮ್ಮಲ್ಲಿನ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ವೈದ್ಯ, ಫಾರ್ಮಸಿ, ಆಸ್ಪತ್ರೆ, ರೋಗಿ ವೈದ್ಯಲೋಕದ ಅಡಿಪಾಯಗಳು-ಡಾ.ಸತೀಶ್ ಎ.ಪಿ:
ದರ್ಬೆ ಮರಿಕೆ ಕ್ಲಿನಿಕ್ ವೈದ್ಯ ಡಾ.ಸತೀಶ್ ಎ.ಪಿ ರವರು ಮಾತನಾಡಿ, ಉದ್ಯೋಗಂ ಪುರುಷ ಲಕ್ಷಣಂ ಎಂಬಂತೆ ಮಾನವನ ವ್ಯಕ್ತಿತ್ವದ ಬದುಕು ಹಾಗೂ ಮೆರುಗು ಆಗಿದೆ. ಧರ್ಮ ಅಂದರೆ ಅರ್ಥ, ಅರ್ಥ ಅಂದರೆ ಜೀವನದ ಕಾಮನೆಗಳಿಂದ ಮೋಕ್ಷ ಸಾಧನೆಯಾಗಿದೆ. ವೈದ್ಯಲೋಕವು ರೋಗಿಯ ಶುಶ್ರೂಷೆಯನ್ನು ಮಾಡುವ ವೈದ್ಯ, ರೋಗಿಗೆ ಸಮರ್ಪಕ ಔಷಧ ನೀಡುವ ಫಾರ್ಮಸಿ, ರೋಗಿಯನ್ನು ಆರೈಕೆ ಮಾಡುವ ಆಸ್ಪತ್ರೆ ಹಾಗೂ ಶುಶ್ರೂಷಕಿಯರು ಮತ್ತು ವೈದ್ಯರು ನೀಡುವ ಔಷಧವನ್ನು ಸಮರ್ಪಕವಾಗಿ ತೆಗೆದುಕೊಳ್ಳುವ ರೋಗಿ ಹೀಗೆ ನಾಲ್ಕು ಅಡಿಪಾಯದಲ್ಲಿ ನಿಂತಿದೆ. ಮೆಡಿಕಲ್ ಹೊಂದಿದವರು ಹಿತಮಿತವಾಗಿ, ಸರಿಯಾಗಿ ಗ್ರಾಹಕರ ಹತ್ತಿರ ಮಾತನಾಡುವುದು, ತನ್ನ ಔಷಧ ಮಳಿಗೆಯಲ್ಲಿ ಎಲ್ಲಾ ತರಹದ ಔಷಧಗಳನ್ನು ಹೊಂದುವುದು ಅಗತ್ಯ ಎಂದು ಹೇಳಿ ಶುಭ ಹಾರೈಸಿದರು. ಮೂಡಬಿದ್ರೆ ಧವಳ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಜಯಶಂಕರ ಮೆಡಿಕಲ್ಸ್ ಮಾಲಕ ಕೃಷ್ಣಪ್ರಸಾದ್ ಕೆ.ರವರ ಸಹೋದರ ಅರವಿಂದ್ ಪ್ರಸಾದ್ ರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಕಟ್ಟಡ ಮಾಲಕ ಶಶಿಧರ್, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪ್ರಕಾಶ್ ಡಿ’ಸೋಜ, ಸ್ವೀಟಿ ಟೆಕ್ಸ್ ಟೈಲ್ಸ್ ಮಾಲಕ ಶಿವರಾಮ್, ಜಯಶಂಕರ ಮೆಡಿಕಲ್ಸ್ ಮಾಲಕ ಕೃಷ್ಣಪ್ರಸಾದ್ ರವರ ಸಹೋದರರು, ಸಹೋದರಿಯರು, ಕುಟುಂಬಿಕರು, ಹಿತೈಷಿಗಳು ಹೀಗೆ ಹಲವಾರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಉದ್ಘಾಟನೆ/ಧಾರ್ಮಿಕ ಕಾರ್ಯಕ್ರಮ:
ಮಳಿಗೆಯ ಉದ್ಘಾಟನೆ ಪ್ರಯುಕ್ತ ಬೆಳಿಗ್ಗೆ ಅರ್ಚಕರಾದ ರಾಜೇಶ್ ಭಟ್ ಕುಂಡಡ್ಕರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಮಳಿಗೆಯ ಯಶಸ್ಸಿಗೆ ಶುಭ ಹಾರೈಸಿದರು. ಮಳಿಗೆಯ ಮಾಲಕರಾದ ಕೃಷ್ಣಪ್ರಸಾದ್ ಕೆ.ರವರ ತಂದೆ ಶಂಕರನಾರಾಯಣ ನಾಯಕ್ ಹಾಗೂ ತಾಯಿ ಜಯಲಕ್ಷ್ಮಿರವರು ಅತಿಥಿಗಳ ಜೊತೆಗೂಡಿ ದೀಪ ಬೆಳಗಿಸಿ ಮಳಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಜಯಶಂಕರ’ ಬಗ್ಗೆ..ಮಳಿಗೆಯ ಮಾಲಕ ಕೃಷ್ಣಪ್ರಸಾದ್ ರವರ ತಂದೆಯ ಪ್ರಥಮ ಹೆಸರು ಶಂಕರ, ತಾಯಿಯ ಪ್ರಥಮ ಹೆಸರು ಜಯ, ಇವುಗಳನ್ನು ಜೋಡಿಸಿ “ಜಯಶಂಕರ” ಹೆಸರನ್ನು ಮೆಡಿಕಲ್ ಗೆ ಇಟ್ಟಿದ್ದು, ಉದ್ಯಮದಲ್ಲಿ ಈ ಮೆಡಿಕಲ್ ಜಯದತ್ತ ಸಾಗಲಿ ಎಂದು ಮೆಡಿಕಲ್ ಮಾಲಕ ಕೃಷ್ಣಪ್ರಸಾದ್ ರವರ ಸಹೋದರ ಅರವಿಂದ್ ಪ್ರಸಾದ್ ಹೇಳಿದರು.