ಪುತ್ತೂರು:ಪೋಷಕರ ಅಸಮಾಧಾನಕ್ಕೆ ಕಾರಣರಾಗಿರುವ, ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಸ.ಹಿ.ಪ್ರಾ ಶಾಲೆಯ ಶಿಕ್ಷಕಿಯೊಬ್ಬರನ್ನು ತಾತ್ಕಾಲಿಕವಾಗಿ ವರ್ಗಾವಣೆಗೊಳಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ.
ಈ ಹಿಂದೆ ಶಾಲೆಯಲ್ಲಿದ್ದು ಹಲವು ಆರೋಪಗಳಿಗೆ ಗುರಿಯಾಗಿದ್ದ ಶಿಕ್ಷಕಿ ಈ ವರ್ಷ ಮತ್ತೆ ಬೀರ್ನಹಿತ್ಲು ಶಾಲೆಗೆ ಬಂದಿದ್ದು ಅವರನ್ನು ಇಲ್ಲಿಂದ ಬದಲಾಯಿಸಿ ಬೇರೆ ಶಾಲೆಗೆ ಕಳುಹಿಸಬೇಕೆಂಬ ಬೇಡಿಕೆಗೆ ಇಲಾಖೆಯಿಂದ ಸರಿಯಾದ ಸ್ಪಂದನೆ ಲಭಿಸಿಲ್ಲ ಎಂದು ಅಸಮಾಧಾನಗೊಂಡಿದ್ದ ಮಕ್ಕಳ ಪೋಷಕರು ಜೂ.5ರಂದು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದು ಗೊಂದಲಕ್ಕೆ ಕಾರಣವಾಗಿತ್ತು.ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಜೂ.6ರಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಗೊಂದಲಕ್ಕೆ ಕಾರಣವಾದ ಶಿಕ್ಷಕಿಯನ್ನು ವರ್ಗಾವಣೆಗೊಳಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
27 ವಿದ್ಯಾರ್ಥಿಗಳಿರುವ ಬೀರ್ನಹಿತ್ಲು ಶಾಲೆಯಿಂದ ಎರಡು ವರ್ಷಗಳ ಹಿಂದೆ ವರ್ಗಾವಣೆಗೊಂಡಿದ್ದ ಶಿಕ್ಷಕಿ ಈ ವರ್ಷ ಶಾಲೆ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಬೀರ್ನಹಿತ್ಲು ಶಾಲೆಗೆ ಆಗಮಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರಿಗೆ ಕೆಟ್ಟದಾಗಿ ನಿಂದಿಸುತ್ತಿದ್ದರೆಂದು ಆರೋಪಿಸಿ,ಅವರನ್ನು ಶಾಲೆಯಿಂದ ಬಿಡುಗಡೆಗೊಳಿಸುವಂತೆ ಪೋಷಕರು ಇಲಾಖೆಗೆ ಮನವಿಯನ್ನು ಸಲ್ಲಿಸಿದ್ದರು.ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಎಸ್ಡಿಎಂಸಿಯವರೂ ಮನವಿ ನೀಡಿದ್ದರು.ಆದರೆ ಇಲಾಖೆ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿ ಪೋಷಕರು ಪ್ರತಿಭಟನಾರ್ಥವಾಗಿ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದರು.ಘಟನೆಯ ಬಗ್ಗೆ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್ರವರು ಜೂ.೬ರಂದು ಶಾಲೆಗೆ ಭೇಟಿ ನೀಡಿ ಪೋಷಕರು, ಎಸ್ಡಿಎಂಸಿ, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಗೊಂದಲಕ್ಕೆ ಕಾರಣವಾದ ಶಿಕ್ಷಕಿಯನ್ನು ತಾತ್ಕಾಲಿಕವಾಗಿ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಸದರಿ ಶಿಕ್ಷಕಿಗೆ ಕೆಲವೇ ದಿನಗಳಲ್ಲಿ ಇಲಾಖೆಯ ನಿಯಮಾನುಸಾರ ವರ್ಗಾವಣೆ ಆಗಲಿದ್ದು ಅಲ್ಲಿಯ ತನಕ ತಾತ್ಕಾಲಿಕವಾಗಿ ಬೊಳುವಾರು ಶಾಲೆಗೆ ವರ್ಗಾವಣೆಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್ ತಿಳಿಸಿದ್ದಾರೆ.