ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆ

0

ಪೋಷಕರಾದವರು ಮಕ್ಕಳಿಗೋಸ್ಕರ ಬದಲಾಗಬೇಕು : ಸುಬ್ರಮಣ್ಯ ನಟ್ಟೋಜ


ಪುತ್ತೂರು: ಮಕ್ಕಳು ಹೆತ್ತವರನ್ನು ಅನುಕರಣೆ ಮಾಡುವುದರ ಮೂಲಕ ಕಲಿಯುತ್ತಾರೆ. ಹಾಗಾಗಿ ಪೋಷಕರಾದವರು ಮಕ್ಕಳಿಗೋಸ್ಕರ ಬದಲಾಗಬೇಕು. ಕೇವಲ ಅಂಕ ಗಳಿಸುವುದು ನಿಜವಾದ ಶಿಕ್ಷಣ ಎಂಬ ತಪ್ಪು ಕಲ್ಪನೆಯಲ್ಲಿ ಅನೇಕ ಪೋಷಕರಿದ್ದಾರೆ. ಆದರೆ ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಧರ್ಮ ಪ್ರಜ್ಞೆ, ದೇಶಪ್ರೇಮವನ್ನು ಬೆಳೆಸುವುದು ನಿಜವಾದ ಶಿಕ್ಷಣ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ರಕ್ಷಕ ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.


ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಮಾತಿನಂತೆ ಧಾರ್ಮಿಕ ವಿಚಾರಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಬೇಕು. ತಪ್ಪಿದಲ್ಲಿ, ನಂತರದ ದಿನಗಳಲ್ಲಿ ನಾವು ಅಸಹಾಯಕರಾಗಬೇಕಾಗುತ್ತದೆ. ಆದ್ದರಿಂದ ಹೆತ್ತವರು ಶಾಲೆಗೆ ಸೇರಿಸುವುದಷ್ಟೇ ಅಲ್ಲದೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಉತ್ಕೃಷ್ಟ ನಾಗರಿಕರನ್ನಾಗಿ ಅವರನ್ನು ಬೆಳೆಸಬೇಕು ಎಂದರು.


ಸಂಸ್ಥೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ, ಪುತ್ತೂರು ತಾಲೂಕು ವಲಯ ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ ಶಿಕ್ಷಣ ಎಂದರೆ ಕೇವಲ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದಲ್ಲ. ಆತ್ಮದಿಂದ ಬೆಳವಣಿಗೆ ಆಗಬೇಕು. ಅಷ್ಟು ಅಲ್ಲದೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೀಗೆ ಸರ್ವತೋಮುಖ ಬೆಳವಣಿಗೆಯೇ ನಿಜವಾದ ಶಿಕ್ಷಣ. ನಮ್ಮ ದೇಶದಲ್ಲಿ ಶಿಕ್ಷಣವನ್ನು ಪಡೆಯುವ ನಮ್ಮ ಮಕ್ಕಳು ನಮ್ಮ ದೇಶದ ಪ್ರಗತಿಗಾಗಿ ದುಡಿಯಬೇಕು ಎಂದು ತಿಳಿಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಅವರು ಶಾಲೆಯಲ್ಲಿ ನೂತನವಾಗಿ ಅಳವಡಿಸಲಾಗುವ ಶಾಲಾ ಆಪ್ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ಅವರು ಶೈಕ್ಷಣಿಕ ವರ್ಷದ ಮೊದಲಾರ್ಧದಲ್ಲಿ ನಡೆಯಲಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಣೆಯನ್ನು ನೀಡಿದರು. ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಪಾಲಕರು ನಿರ್ವಹಿಸಬಹುದಾದ ಕರ್ತವ್ಯಗಳ ಕುರಿತು ಮಾತನಾಡಿದರು.
ಶಿಕ್ಷಕಿಯರಾದ ಸುಷ್ಮಾ ಮಿಥುನ್ ಸ್ವಾಗತಿಸಿ, ಕುಸುಮ ವಂದಿಸಿದರು, ಪ್ರಿಯಾಶ್ರೀ ಕೆ. ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here