ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರು ಪ್ರತೀ ಸೋಮವಾರ ತಮ್ಮ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಾರೆ. ಆ ದಿನ ತಮ್ಮ ಕಚೇರಿಗೆ ಬಂದ ಎಲ್ಲರಿಗೂ ಚಿಕ್ಕಿ ನೀಡುತ್ತಾರೆ. ಚಿಕ್ಕಿಯ ಖಾಲಿ ಡಬ್ಬಿಯನ್ನು ಯಾರಿಗಾದರು ನೀಡುತ್ತಾರೆ. ಹೀಗೆ ಶಾಸಕರಿಂದ ಡಬ್ಬಿ ಪಡೆದ ಮಹಿಳೆಯೋರ್ವರು ಅದೇ ಡಬ್ಬಿಯಲ್ಲಿ ಉಪ್ಪಿನಕಾಯಿ ತಂದ ಘಟನೆ ನಡೆದಿದೆ.
ಮೂಲತಃ ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಚಿತ್ರಾ ರೈ ಅವರಿಗೆ 9/11 ಸಿಗುವುದು ಕಷ್ಟವಾಗಿತ್ತು. ಈ ಬಗ್ಗೆ ದೂರು ನೀಡಲು ಶಾಸಕರ ಕಚೇರಿಗೆ ಬಂದಿದ್ದರು. ಶಾಸಕರಲ್ಲಿ ದೂರು ನೀಡಿದ ಮಾರನೇ ದಿನವೇ ಇವರ ಸಮಸ್ಯೆ ಪರಿಹಾರವಾಗಿತ್ತು. ಆ ಬಳಿಕ ಕಚೇರಿಗೆ ಬಂದ ಚಿತ್ರಾ ಅವರಿಗೂ ಚಿಕ್ಕಿ ನೀಡಿದ್ದ ಶಾಸಕರು ಚಿಕ್ಕಿಯ ಖಾಲಿ ಡಬ್ಬಿಯನ್ನು ನೀಡಿದ್ದರು. ಶಾಸಕರ ಮೂಲಕ ತನ್ನ ಕೆಲಸ ಆಗಿದೆ ಎಂಬ ಸಂತೋಷದಿಂದ ಚಿತ್ರಾ ಅವರು ಶಾಸಕರನ್ನು ಅಭಿನಂದಿಸಲು ಫಲ ಪುಷ್ಟಗಳನ್ನು ತಂದಿದ್ದರು. ಅದನ್ನು ಸ್ವೀಕರಿಸಿದ ಶಾಸಕರು ಕೃತಜ್ಞತೆ ಸಲ್ಲಿಸಿದರು. ಈ ಹಿಂದೆ ಚಿತ್ರಾ ಅವರು ತೆಗೆದುಕೊಂಡು ಹೋದ ಡಬ್ಬಿಯಲ್ಲಿ ಉಪ್ಪಿನಕಾಯಿಯನ್ನು ತಂದಿದ್ದು ಶಾಸಕರು ಅದನ್ನೂ ಸ್ವೀಕರಿಸಿದರು.
ಈ ಬಗ್ಗೆ ಚಿತ್ರ ಅವರಲ್ಲಿ ಕೇಳಿದಾಗ ನನ್ನ 9/11 ಸಮಸ್ಯೆಯ ಬಗ್ಗೆ ಕ್ಷಣ ಮಾತ್ರದಲ್ಲಿ ಶಾಸಕರು ಪರಿಹರಿಸಿದ್ದಾರೆ. ಇಂತಹ ಸ್ಪಂದನೆ ಇರುವ ಶಾಸಕರನ್ನು ನಾನು ಎಲ್ಲಿಯೂ ಕಂಡಿಲ್ಲ.ಇದಕ್ಕಾಗಿ ನಾನು ಅವರನ್ನು ಅಭಿನಂದಿಸಿದ್ದೇನೆ ಎಂದು ಹೇಳಿದರು.