ಪುತ್ತೂರು: 2025-26ನೇ ವರ್ಷಕ್ಕೆ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಹೊಸ ದಾಖಲಾತಿ ಪಡೆದ ಮಕ್ಕಳು ಹಾಗೂ ಪೋಷಕರು ಆಗತ – ಸ್ವಾಗತ ಸಂಭ್ರಮದಲ್ಲಿ ಭಾಗವಹಿಸಿದರು. ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ಮಾಲಕ ಸಂಜೀವ ಆಳ್ವ ಇವರು ದೀಪ ಪ್ರಜ್ವಲಿಸಿ ತಮ್ಮ ಬಾಲ್ಯದ ದಿನಗಳ ನೆನಪನ್ನು ಹಸಿರಾಗಿಸಿದ ಮಕ್ಕಳ ಸ್ವಾಗತ ಸಂಭ್ರಮ ಅವರ ಜೀವನದುದ್ದಕ್ಕೂ ಖುಷಿಯನ್ನು ತಂದು ಸಮಾಜದ ಅನ್ಯಾನ್ಯ ಜವಾಬ್ದಾರಿಗಳನ್ನು ಶಕ್ತಿಯೊಂದಿಗೆ ಬೆಳಗಲಿ ಎಂದು ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರೂ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಲಕರೂ, ವೈದ್ಯರೂ ಆದ ಡಾ. ಸುಧಾ ಎಸ್ ರಾವ್ ಅವರಿಗೆ ಗೌರವಾರ್ಪಣೆ ನೆರವೇರಿಸಿ ನಮ್ಮ ನೆಲದ ಬಗ್ಗೆ ಮಕ್ಕಳು ಎಳವೆಯಿಂದಲೇ ಗೌರವ ಕೃತಘ್ನತೆ ಹಾಗೂ ಹೆಮ್ಮಯ ಭಾವ ಹೊಂದಿರಬೇಕಾದ ಪೋಷಕರು ಮತ್ತು ಶಿಕ್ಷಕರು ಭಾರತೀಯ ಪರಂಪರೆಯ ಶ್ರೇಷ್ಠತೆಯನ್ನು ತಿಳಿಸಬೇಕು. ಹಾಗೂ ನಮ್ಮ ನುಡಿ, ಕ್ರಿಯೆಗಳ ಮೂಲಕ ಅವರಿಗೆ ಅವಕಾಶ, ಪ್ರೇರಣೆ, ಪ್ರೋತ್ಸಾಹಗಳನ್ನು ನೀಡಬೇಕು ಎಂದರು.
ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಅವರು ಎಲ್ಲರಿಗೂ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿ ಶುಭ ಹಾರೈಸಿದರು. ಶಾಲಾ ಪ್ರೌಢ ವಿಭಾಗದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಅನ್ನಪೂರ್ಣಾ ಯೋಜನೆಗೆ ಸಹಕಾರವಿತ್ತ ಸಂಜೀವ ಆಳ್ವ ಇವರು ಶಿಶು ಶಿಕ್ಷಣದ ಭೌತಿಕ ವ್ಯವಸ್ಥೆಗಳಿಗಾಗಿ ರೂ 25 ಸಾವಿರ ದೇಣಿಗೆ ನೀಡಿದರು.
ಎಲ್ಲಾ ಮಕ್ಕಳಿಂದ ಹಾಗೂ ಪೋಷಕರಿಂದ ಘೃತಾಹುತಿ ಮಾಡಿಸಲಾಯಿತು. ಶಿಕ್ಷಕರು ಮಕ್ಕಳಿಗೆ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಿದರು. ಶಾಲಾ ಸಹಶಿಕ್ಷಕಿ ಸ್ವಾತಿ ಇವರು ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರಾದ ಚಂದ್ರಶೇಖರ್ ಇವರು ಅಭಿನಂದನಾ ಪತ್ರ ವಾಚಿಸಿದರು. ಶಾಲಾ ಸಂಚಾಲಕರಾದ ವಸಂತ ಸುವರ್ಣ ಕೋಶಾಧಿಕಾರಿ ಅಶೋಕ ಕುಂಬ್ಳೆ, ಮೂಡಬಿದಿರೆ ಬಿಪಿಎಡ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜಯರಾಂ ಉಪಸ್ಥಿತರಿದ್ದರು.