ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ನೆಲ್ಯಾಡಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ನೆಲ್ಯಾಡಿ ಇದರ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಜೂ.8ರಂದು ನೆಲ್ಯಾಡಿಯ ಹೋಟೆಲ್ ಬಿರ್ವ ಇದರ ಸಭಾಂಗಣದಲ್ಲಿ ನಡೆಯಿತು.

- ಆರಂಭದಲ್ಲಿ ನೋಣಯ್ಯ ಪೂಜಾರಿ ಅಂಬರ್ಜೆ ಮತ್ತು ತಂಡದವರಿಂದ ಭಜನೆ, ಗುರುಪೂಜೆ ನಡೆಯಿತು. ಬಳಿಕ ನಡೆದ ಸಮಾರಂಭವನ್ನು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ಕುಮಾರ್ ಕೆಡೆಂಜಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾರಾಯಣ ಗುರುಗಳ ಸಂದೇಶಗಳು ಇಂದಿನ ಸಮಾಜಕ್ಕೆ ಅನುಕರಣೀಯವಾಗಿದೆ ಎಂದು ಹೇಳಿ ಗ್ರಾಮ ಸಮಿತಿಗಳ ಕಾರ್ಯನಿರ್ವಹಣೆ ಕುರಿತು ತಿಳಿಸಿದರು. ಇದೇ ವೇಳೆ ಅವರು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅತಿಥಿಯಾಗಿದ್ದ ಬಂಟ್ವಾಳ ಸಿಆರ್ಇಡಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲ್ಯಾನ್, ಪುತ್ತೂರು ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ವಲಯ ಸಂಚಾಲಕ ಡಾ.ಸದಾನಂದ ಕುಂದರ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ದೋಂತಿಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜನಾರ್ದನ ಬಾಣಜಾಲು, ಮಹಿಳಾ ವೇದಿಕೆ ಅಧ್ಯಕ್ಷೆ ದೀಕ್ಷಾ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಪುತ್ತೂರು ಬಿಲ್ಲವ ಸಂಘದ ವಲಯ ಸಂಚಾಲಕರಾದ ಡಾ.ಸದಾನಂದ ಕುಂದರ್, ಸಾಧಕ ರಕ್ಷಣ್ ಹಾಗೂ ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ಕುಮಾರ್ ಕೆಡೆಂಜಿ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪುಸ್ತಕ ವಿತರಣೆ/ಪ್ರತಿಭಾ ಪುರಸ್ಕಾರ:
ಸಮಾರಂಭದಲ್ಲಿ ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಮಾರು ೭೫ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ನೆಲ್ಯಾಡಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ದೀಕ್ಷಾ ಸಾಲ್ಯಾನ್ ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಉಪಾಧ್ಯಕ್ಷ ಲಿತಿನ್ ಪಾಂಡಿಬೆಟ್ಟು ಧನಸಹಾಯ ನೀಡಿದವರ ಪಟ್ಟಿ ವಾಚಿಸಿದರು.
ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬಾಣಜಾಲು ವೇದಿಕೆಗೆ ಆಹ್ವಾನಿಸಿದರು. ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ಕುಮಾರ್ ದೋಂತಿಲ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಜನಾರ್ದನ ಬಾಣಜಾಲು ವರದಿ ವಾಚಿಸಿದರು. ಕೋಶಾಧಿಕಾರಿ ಲೋಕೇಶ್ ಬಾಣಜಾಲು ಲೆಕ್ಕಪತ್ರ ಮಂಡಿಸಿ, ಕೊನೆಯಲ್ಲಿ ವಂದಿಸಿದರು. ಮಹಿಳಾ ವೇದಿಕೆ ಕಾರ್ಯದರ್ಶಿ ಪದ್ಮಾವತಿ, ಕೋಶಾಧಿಕಾರಿ ಅನಿತಾಸುರೇಶ್ ಕಲಾಯಿ ಹಾಗೂ ಸದಸ್ಯರು ಸಹಕರಿಸಿದರು. ಗ್ರಾಮ ಸಮಿತಿ ಮಕ್ಕಳು ಪ್ರಾರ್ಥಿಸಿದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.