ನಾವು ಮನುಷ್ಯತ್ವದಿಂದ ದೈವತ್ವದೆಡೆಗೆ ನಡೆಯಬೇಕು : ಅಂಬಾಪ್ರಸಾದ್ ಪಾತಾಳ
ಪುತ್ತೂರು: ಮಕ್ಕಳು ಬೆಳಗ್ಗೆ ಸೂರ್ಯೋದಯದ ಮೊದಲು ಎದ್ದು ತಮ್ಮ ದೈನಂದಿನ ಕಾರ್ಯಗಳನ್ನು ಮುಗಿಸಿ, ದೇವರಿಗೆ ನಮಿಸಿ, ತಂದೆ ತಾಯಿಯ ಆಶೀರ್ವಾದವನ್ನು ಪಡೆದು ತಮ್ಮ ದಿನವನ್ನು ಆರಂಭಿಸಬೇಕು. ನಾವು ಪಶುವಿನಂತಿರದೆ ಮನುಷ್ಯತ್ವದಿಂದ ದೈವತ್ವದೆಡೆಗೆ ನಡೆಯಬೇಕು ಎಂದು ಯಕ್ಷಗಾನ ಕಲಾವಿದ ಅಂಬಾ ಪ್ರಸಾದ್ ಪಾತಾಳ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ ತರಗತಿಗಳನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಶಾಲೆ ಎಂಬುದು ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಅದರ ಬೆಳವಣಿಗೆಗೆ ಕಾರಣವಾಗುವ ಕೇಂದ್ರವಾಗಬೇಕೇ ವಿನಃ ಹೊರತು ಅಂಕ ಗಳಿಸುವಂತಷ್ಟೇ ಮಾಡುವ ಕಾರ್ಖಾನೆ ಆಗಬಾರದು. ಆದುದರಿಂದ ಶಿಕ್ಷಣ ಸಂಸ್ಥೆಯಲ್ಲಿ ಭರತನಾಟ್ಯ, ಚದುರಂಗ, ಈಜು, ಯಕ್ಷಗಾನ, ಸ್ಕೇಟಿಂಗ್, ಸ್ಕೌಟ್ ಮತ್ತು ಗೈಡ್, ಅಬಾಕಸ್ ಎಂಬ ಮೊದಲಾದ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಚೆಸ್ ಆಡುವುದು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯಕ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿ ಚೆಸ್ನಲ್ಲಿ ತೊಡಗಿಕೊಂಡರೆ ಸಹಜವಾಗಿಯೇ ಆತನ ಶೈಕ್ಷಣಿಕ ಪ್ರಗತಿ ಏರಿಕೆಯನ್ನು ಕಾಣುತ್ತದೆ. ಕಲೆ ಅನ್ನುವುದು ನಮ್ಮ ಸ್ವತ್ತು. ಅದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದು ಎಂದು ಅಭಿಪ್ರಾಯಪಟ್ಟರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಭಟ್, ಸ್ಕೌಟ್ ಗೈಡ್ಸ್ ತರಬೇತಿದಾರರಾದ ಚಂದ್ರಕಲಾ, ಭರತನಾಟ್ಯ ತರಬೇತುದಾರರಾದ ಪ್ರಿಯಾಶ್ರೀ ಕೆ. ಎಸ್, ಯಕ್ಷಗಾನ ತರಬೇತುದಾರರಾದ ಬಾಲಕೃಷ್ಣ ಉಡ್ಡಂಗಳ ಹಾಗೂ ಸತೀಶ್ ಇರ್ದೆ, ಮಾರ್ಷಲ್ ಆರ್ಟ್ ತರಬೇತುದಾರರಾದ ಶಿವಪ್ರಸಾದ್, ಅಬಕಸ್ ತರಬೇತುದಾರ ರಾಜಶ್ರೀ ಹಾಗು ಚೈತ್ರ, ಚೆಸ್ ತರಬೇತುದಾರ ಸುರೇಶ್ ಕುಮಾರ್, ಸ್ವಿಮ್ಮಿಂಗ್ ಮತ್ತು ಸ್ಕೇಟಿಂಗ್ ತರಬೇತುದಾರ ಸುಶಿತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮನಿಷಾ ಸ್ವಾಗತಿಸಿ, ವಿದ್ಯಾರ್ಥಿ ಸಂಭ್ರಮ್ ವಂದಿಸಿದರು. ಶಿಕ್ಷಕಿ ಗೌರಿ ಅತಿಥಿ ಪರಿಚಯ ನಡೆಸಿಕೊಟ್ಟರು.ವಿದ್ಯಾರ್ಥಿ ಅನುಶ್ರೀ ಕಾರ್ಯಕ್ರಮಕ್ಕೆ ಆಗಮಿಸಿದ್ದ ತರಬೇತುದಾರರ ಪರಿಚಯ ಮಾಡಿದರು. ವಿದ್ಯಾರ್ಥಿ ಸನ್ಮಯ್ ಕಾರ್ಯಕ್ರಮವನ್ನು ನಿರ್ವಹಿಸಿದರು.