ವರ್ಗಾವಣೆಗೊಂಡ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಕಾಣಿಯೂರು ಶಾಖಾ ಮೆನೇಜರ್ ಅತಿಥ್ ರೈ ಅವರಿಗೆ ಸನ್ಮಾನ
ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ, ಕಾಣಿಯೂರಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆಯು ಜೂ 14ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಮಾತನಾಡುತ್ತಾ 2025-26ನೇ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸುತ್ತಾ ಸಂಸ್ಥೆ ಬೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿರುವ ಎಲ್ಲ ಪೋಷಕ ಬಂಧುಗಳನ್ನು ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಶಾಖೆಗೆ ವರ್ಗಾವಣೆಗೊಂಡ ಬ್ಯಾಂಕ್ ಆಫ್ ಬರೋಡದ ಕಾಣಿಯೂರು ಶಾಖಾ ಪ್ರಬಂಧಕ ಅತಿಥ್ ರೈಯವರನ್ನು ಸನ್ಮಾನಿಸಲಾಯಿತು. ಅವರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿದ್ದ ಪ್ರಗತಿ ವಿದ್ಯಾ ಸಂಸ್ಥೆಯ ಆತಿಥ್ಯ ಮತ್ತು ಸಾಧನೆಗಳು, ಕಾಣಿಯೂರಿನ ಜನತೆಯ ಪ್ರೀತಿ, ವಿಶ್ವಾಸ ಅವಿಸ್ಮರಣೀಯ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿರುವ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವಿಶ್ ಮುರುಳ್ಯ ಮಾತನಾಡುತ್ತಾ ಪ್ರಗತಿ ವಿದ್ಯಾಸಂಸ್ಥೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರಷ್ಟೇ ಪ್ರಮುಖ ಪಾತ್ರ ಪೋಷಕರದ್ದು. ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದರು. ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಶೈಕ್ಷಣಿಕ ಮಾಹಿತಿಯನ್ನು ನೀಡಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಸಂಸ್ಥೆಯ ಸರ್ವರೂ ಶ್ರಮಿಸುತ್ತಿರುವಾಗ ಪೋಷಕರು ಅದಕ್ಕೆ ಕೈಜೋಡಿಸಬೇಕು ಎಂದರಲ್ಲದೆ, ತರಗತಿವಾರು ಪೋಷಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, , ಹಿರಿಯ ಶಿಕ್ಷಕಿ ಸವಿತಾ ಕೆ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಪ್ರಣಿಧಿ ಉಡುಪ (10 ನೇ ) ಪ್ರಾರ್ಥಿಸಿದರು. ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ವಂದಿಸಿದರು. ಶಿಕ್ಷಕಿ ಕವಿತಾ ವಿ ರೈ ಸನ್ಮಾನಿತರ ಪರಿಚಯವನ್ನು ವಾಚಿಸಿದರು. ಆಂಗ್ಲ ಮಾಧ್ಯಮದ ಸಹಮುಖ್ಯಸ್ಥೆ ಅನಿತಾ ಜೆ ರೈ ಕಾರ್ಯಕ್ರಮ ನಿರೂಪಿಸಿದರು.