ಪುತ್ತೂರು: ಎಪಿಎಂಸಿ ಯಾರ್ಡ್ನಲ್ಲಿ 4 ಗೋದಾಮುಗಳು ಅನಧಿಕೃತವಾಗಿ ತೆರೆದಿಟ್ಟುಕೊಂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಬಂದು ಪರಿಶೀಲನೆ ಮಾಡಿ ತೆರಳಿದ್ದಾರೆ.
ತನಿಖಾಧಿಕಾರಿಗಳು ಬಂದಾಗ ಗೋದಾಮುಗಳಿಗೆ ಈ ಮೊದಲೇ ಬೀಗ ಹಾಕಿರುವುದು ಬೆಳಕಿಗೆ ಬಂದಿದೆ. ಹಾಲಿ ಕಾರ್ಯದರ್ಶಿಯವರು ಎಪಿಎಂಸಿಗೆ ವರ್ಗಾವಣೆಯಾಗುವ ಮುಂಚೆಯೇ ಅನಧಿಕೃತ ಗೋದಾಮು ಬಗ್ಗೆ ತಿಳಿದುಕೊಂಡು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ ಗೋದಾಮುಗಳಿಗೆ ಬೀಗ ಹಾಕಿ ಸಮಿತಿ ವಶಕ್ಕೆ ಪಡೆದಿದ್ದರು.
ಜೂ.13ರಂದು ಬಂದ ತನಿಖಾಧಿಕಾರಿಗಳು ಬೀಗ ಹಾಕಿರುವ ಗೋದಾಮುಗಳ ಛಾಯಾಚಿತ್ರವನ್ನು ಪಡೆದುಕೊಂಡು ತೆರಳಿರುವುದಾಗಿ ವರ್ತಕರು ಮಾಹಿತಿ ನೀಡಿದ್ದಾರೆ.
ಸುಳ್ಳು ದೂರು: ಸಾಮಾಜಿಕ ಕಾರ್ಯಕರ್ತರು ನನ್ನ ಹಾಗೂ ಸಿಬ್ಬಂದಿಯ ಮೇಲೆ ನೀಡಿರುವ ದೂರು ಸುಳ್ಳು. ನಮ್ಮ ವಿರುದ್ಧ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದು ತನಿಖಾಧಿಕಾರಿಗಳಿಗೆ ಮನವರಿಕೆ ಆಗಿರುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಪಡಗಾನ್ನೂರು ತಿಳಿಸಿದ್ದಾರೆ.