ಉಪ್ಪಿನಂಗಡಿ: ಇರಾನಿನ ಅಣು ಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಇರಾನ್ನಿಂದ ಉಂಟಾಗಿರುವ ಪ್ರತಿದಾಳಿಯ ನೆಲೆಗಟ್ಟಿನಲ್ಲಿ ಇಸ್ರೇಲ್ ದೇಶದಾದ್ಯಂತ ಯುದ್ಧದ ವಾತಾವರಣವಿದೆ. ಶುಕ್ರವಾರದಿಂದಲೇ ಇಲ್ಲಿನ ಶಾಲೆಗಳಿಗೆ ಒಂದು ವಾರದ ರಜೆ ಘೋಷಿಸಲಾಗಿದೆ. ರಸ್ತೆಗಳಲ್ಲಿ ಬಸ್ ಸಂಚಾರ ನಿರ್ಬಂಧಿಸಲಾಗಿದ್ದು, ಜನಸಂಚಾರ ವಿರಳವಾಗಿದೆ. ಅಲ್ಲೊಂದು ಇಲ್ಲೊಂದು ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ಮಾತ್ರ ತೆರೆದಿವೆ. ಮಿಸೈಲ್ ದಾಳಿಗಳು ಹೆಚ್ಚಿನ ಸಂದರ್ಭದಲ್ಲಿ ರಾತ್ರಿ ಆಗುತ್ತಿದ್ದರೆ, ಆದಿತ್ಯವಾರ ಅಪರಾಹ್ನ 4 ಮತ್ತು 4.08ಕ್ಕೆ ಟೆಲ್ ಅವೀವ್ನ ಮೇಲೆ ಎರಡು ಮಿಸೈಲ್ ದಾಳಿಯಾಗಿವೆ. ಒಟ್ಟಿನಲ್ಲಿ ಯುದ್ಧದ ಭೀತಿ ಇದ್ದರೂ ಇಲ್ಲಿರುವ ಅತ್ಯುತ್ತಮ ಸುರಕ್ಷತಾ ವ್ಯವಸ್ಥೆಯಿಂದ ನಾವು ಸುರಕ್ಷಿತರಾಗಿದ್ದೇವೆ ಎಂದು ಇಸ್ರೇಲ್ನ ಟೆಲ್ ಅವೀವ್ನಲ್ಲಿರುವ ಕೊೖಲ ನಿವಾಸಿಯಾಗಿರುವ ಪ್ರದೀಪ್ ಕೊೖಲ ತಿಳಿಸಿದ್ದಾರೆ.
ಇಲ್ಲಿ ಹೋಂ ಫ್ರಂಟ್ ಕಮಾಂಡೋ ಎಂಬ ರಕ್ಷಣಾ ವ್ಯವಸ್ಥೆಯಿದ್ದು, ಇದರ ಮೊಬೈಲ್ ಅಫ್ಲೀಕೇಷನ್ನನ್ನು ನಾವು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ದಾಳಿಯ ಸೂಚನೆ ದೊರೆತಾಗಲೇ ಈ ಅಫ್ಲಿಕೇಶನ್ನಲ್ಲಿ ಎಚ್ಚರಿಕೆಯ ಸಂದೇಶ ದೊರೆಯುತ್ತದೆ. ಯಾವಾಗ ಮಿಸೈಲ್ಗಳನ್ನು ಹಾರಿಸಲಾಯಿತು. ಯಾವ ಕಡೆ ಬರುತ್ತಿದೆ. ಗುರಿ ತಲುಪಬಹುದಾದ ಸಮಯ ಎಲ್ಲವನ್ನೂ ಹೋಂ ಫ್ರಂಟ್ ಕಮಾಂಡೋ ಮೊಬೈಲ್ ಅಫ್ಲಿಕೇಷನ್ ಮೂಲಕ ನಿಖರವಾಗಿ ತಿಳಿಸುತ್ತದೆ. ಇದಲ್ಲದೇ, ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ಗೆ ಅಲರ್ಟ್ ಸಂದೇಶ ಬರುತ್ತದೆ. ಅಲ್ಲದೇ ಸೈರನ್ ಮೊಳಗುತ್ತದೆ. ಆಗ ನಾವೆಲ್ಲಾ ಬಂಕರ್ಗೆ ಹೋಗಿ ಆಶ್ರಯ ಪಡೆಯುತ್ತೇವೆ. ಇಲ್ಲಿ ಇತ್ತೀಚಿನ ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ಎಲ್ಲಾ ಫ್ಲಾಟ್ ಗಳಲ್ಲಿ ಬಂಕರ್ ವ್ಯವಸ್ಥೆ ಇದ್ದು, ಸಾರ್ವಜನಿಕ ಸ್ಥಳದಲ್ಲಿಯೂ ಬಂಕರ್ ವ್ಯವಸ್ಥೆಗಳಿವೆ. ಇವುಗಳಲ್ಲಿ ನೆಲಮಹಡಿಯಲ್ಲಿರುವ ಬಂಕರ್ ವ್ಯವಸ್ಥೆಗಳು ಹೆಚ್ಚು ಸುರಕ್ಷಿತವಾಗಿವೆ ಎಂದು ಅವರು ತಿಳಿಸಿದರು.
ಇಲ್ಲಿ ಇರುವ ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್ ಹಾಗೂ ತಾಡ್ ಎಂಬ ರಕ್ಷಣಾ ವ್ಯವಸ್ಥೆಗಳಿಂದ, ಇರಾನ್ ನಡೆಸುವ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಅಲ್ಲದೇ, ರಸ್ತೆಗಳಲ್ಲಿ ಇಲ್ಲಿನ ಭದ್ರತಾ ಕಾರ್ಯಪಡೆಯವರು ಗಸ್ತು ತಿರುಗುತ್ತಲೇ ಇದ್ದಾರೆ. ಇಲ್ಲಿನ ಜನರೂ ಅಷ್ಟೇ, ನಾವು ಭಾರತೀಯರು ಎಂದು ನಮ್ಮನ್ನು ಕಡೆಗಣಿಸುವುದಿಲ್ಲ. ನಾವು ಸುಲಭದಲ್ಲಿ ಸಿಗುವ ಯಾವ ಬಂಕರ್ಗೆ ಹೋದರೂ ಅದರೊಳಗೆ ಕುಳಿತುಕೊಳ್ಳಬಹುದಾಗಿದೆ. ಅವರು ಕೂಡಾ ನಮ್ಮ ಜಾಗರೂಕತೆಯ ಬಗ್ಗೆ ಅವರಷ್ಟೇ ಕಾಳಜಿ ತೋರುತ್ತಾರೆ. ಇಲ್ಲಿ ಯುದ್ಧದ ಭೀತಿ ಇದ್ದರೂ ಇಸ್ರೇಲ್ ದೇಶದ ಉತ್ತಮ ರಕ್ಷಣಾ ವ್ಯವಸ್ಥೆಯಿಂದ ನಾವು ಸುರಕ್ಷಿತ ಹಾಗೂ ನೆಮ್ಮದಿಯಿಂದ ಇದ್ದೇವೆ ಎಂದು ಪ್ರದೀಪ್ ಕೊೖಲ ‘ಸುದ್ದಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಅನುಭವ ಹಂಚಿಕೊಂಡರು.