ಕೇರಳ ಗಡಿಭಾಗದ ಈ ಶಾಲೆಯಲ್ಲಿ ಕೆಪಿಎಸ್ ಸ್ಕೂಲ್ ಗೆ ಮೊದಲ ಆದ್ಯತೆ: ಶಾಸಕ ಅಶೋಕ್ ರೈ
ಪುತ್ತೂರು: ಕೇರಳ ಗಡಿಭಾಗದಲ್ಲಿರುವ ನೆಟ್ಟಣಿಗೆ ಮುಡ್ನೂರು ಗ್ರಾಮಕ್ಕೆ ಕೆಪಿಎಸ್ ಮಾದರಿ ಸ್ಕೂಲ್ಗೆ ಪ್ರಥಮ ಆದ್ಯತೆಯನ್ನು ನೀಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುವು ಮಾಡಿಕೊಡುವಲ್ಲಿ ಮುತುವರ್ಜಿ ವಹಿಸುವುದಾಗಿ ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಜೂ. 3 ರಂದು ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಕೊಠಡಿ, ಶೌಚಾಲಯ ಇಂಟರ್ಲಾಕ್ ನ್ನು ಶಾಸಕರು ಉದ್ಘಾಟಿಸಿದರು.

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಹೆಚ್ಚು ಮಕ್ಕಳು ಸರಕಾರಿ ಶಾಲೆಗಳಲ್ಲಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಸರಕಾರಿ ಶಾಲೆಗಳು ಮಕ್ಕಳಿಲ್ಲದ ಕಾರಣಕ್ಕೆ ಬಂದ್ ಆದಲ್ಲಿ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ. ಹೆಚ್ಚಾಗಿ ಬಡವರ ಮಕ್ಕಳು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಸರಕಾರಿ ಶಾಲೆಯ ಮಕ್ಕಳು ಹೆಚ್ಚು ಸಾಧನೆ ಮಾಡಿರುವುದು ನಮ್ಮ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ. ತರಬೇತಿ ಪಡೆದ ಶಿಕ್ಷಕರುಗಳೇ ಸರಕಾರಿಯಲ್ಲಿ ಇರುವುದರಿಂದ ಕಲಿಕಾ ಗುಣಮಟ್ಟವೂ ಉತ್ತುಂಗದಲ್ಲಿರುತ್ತದೆ ಎಂದು ಹೇಳಿದರು.
ವನಮಹೋತ್ಸವ ಕಾರ್ಯಕ್ರಮ
ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಗಿಡ ನೆಡುವ ಮೂಲಕ ಶಾಸಕರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪ್ರತೀಯೊಂದು ಮಗು ಕೂಡಾ ಒಂದು ಸಸಿಯನ್ನು ನೆಡುವ ಮೂಲಕ ಗಿಡಗಳ ಮೇಲಿನ ಪ್ರೀತಿಯನ್ನು ಮೈಗೂಡಿಸಿಕೊಳ್ಳಬೇಕು. ಪರಿಸರ ಮೇಲಿನ ಪ್ರೀತಿ ನಮ್ಮ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಸುಂದರ ಪರಿಸರದ ನಿರ್ಮಾಣಕ್ಕೂ ಕಾರಣವಾಗುತ್ತದೆ ಎಂದು ಹೇಳಿದರು.
ಪುತ್ತೂರು ಅರಣ್ಯ ಇಲಾಖೆಯ ರೇಂಜರ್ ಕಿರಣ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗಹಿಸಿದರು. ಗ್ರಾಪಂ ಅಧ್ಯಕ್ಷೆ ಫೌಝಿಯಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಂಆರ್ಪಿಎಲ್ ಜನರಲ್ ಮೆನೆಜರ್ ಕೃಷ್ಣರಾಜ್ ಭಂಡಾರಿ, ಉಪ್ಪಳಿಗೆ ಸರಕಾರಿ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ , ಗ್ರಾಪಂ ಸದಸ್ಯರುಗಳಾದ ಇಬ್ರಾಹಿಂ ಪಳ್ಳತ್ತೂರು , ವೆಂಕಪ್ಪ ನಾಯ್ಕ , ಲಲಿತಾ , ಸುಬ್ಬಯ್ಯ ನಾಯ್ಕ್ ಎಸಿಎಫ್ ಪುತ್ತೂರು, ಸದಾಶಿವ ರೈ ನಡುಬೈಲು ಮತ್ತು ಮಹಾಬಲ ರೈ ಕರ್ನೂರು ಶಿಕ್ಷಣ ತಜ್ಞರು, ಅಬ್ದುಲ್ ಖಾದರ್ ಸುರಳಿ ಮೂಲೆ, ಮುಸಾನ್ ನರಸಿ ನಡ್ಕ, ಸುಬ್ಬಯ್ಯ ಪಂಚಾಯತ್ ಆಡಳಿತ ಅಧಿಕಾರಿಗಳು, ವಿಕ್ರಂ ರೈ ಸಾಂತ್ಯಾ, ಸೂಫಿ ಬಾಂಟಡ್ಕ, ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷರಾದ ಶ್ರೀರಾಂ ಪಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಪ್ರೇಮ್ ಕುಮಾರ್ ವಂದಿಸಿ, ಶಿಕ್ಷಕ ದೇವಿಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.