ಪುತ್ತೂರು:ಮಾನಸಿಕ ಕಿರುಕುಳ,ಜೀವ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಂಟ್ವಾಳ ಇಡ್ಕಿದು ನಿವಾಸಿ,ಪೈಂಟರ್ ಹರೀಶ್ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಪುತ್ತೂರು ತಾಲೂಕು ಸಪಲಿಗರ ಯಾನೆ ಗಾಣಿಗರ ಸಂಘ ಉಪ್ಪಿನಂಗಡಿ ಘಟಕದ ಸದಸ್ಯರು,ಪುತ್ತೂರು ವಲಯ ಮಟ್ಟದ ಸಮಿತಿ ಸದಸ್ಯರು ನ.21ರಂದು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಹರೀಶ್ರವರು ಪುತ್ತೂರಿನ ಕಾಂಪ್ಲೆಕ್ಸ್ ಒಂದರಲ್ಲಿ ವಾಹನಗಳ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಅದೇ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹೇಮಂತ್ ಆಚಾರ್ಯ ಎಂಬವರು ಹರೀಶ್ರವರಿಗೆ ಸುಮಾರು ಒಂದು ತಿಂಗಳಿನಿಂದ ವಿನಾಃ ಕಾರಣ ಬೈಯ್ಯುವುದು,ಮಾನಸಿಕ ಕಿರುಕುಳ ನೀಡುತ್ತಿದ್ದರೆಂಬ ಆರೋಪವಿದೆ.
ಕೆಲ ದಿನಗಳ ಹಿಂದೆ ಹರೀಶ್ರವರಿಗೆ ಆರೋಪಿಯು ಹಲ್ಲೆ ಮಾಡಿ, ತಲ್ವಾರು ಹಿಡಿದು ಜೀವ ಬೆದರಿಕೆ ಹಾಕಿದ್ದರಿಂದ ಮನನೊಂದು ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಪುತ್ತೂರು ವಲಯ ಮಟ್ಟದ ಸಮಿತಿ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ತಾಲೂಕು ಸಮಿತಿ ಸದಸ್ಯರಾದ ಮೋಹನ್ ನಗರ, ಪ್ರಶಾಂತ್ ಮುರ ಮತ್ತಿತರರು ಉಪಸ್ಥಿತರಿದ್ದರು.
