ಹಿರೇಬಂಡಾಡಿ: ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯ ನೂಜಿ, ದಾಸರಮೂಲೆ ಹಾಗೂ ಇನ್ನಿತರ ಕಡೆಗಳಲ್ಲಿ ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಲಾಗಿದೆ.
1 ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯ ನೂಜಿ, ದಾಸರಮೂಲೆ ಹಾಗೂ ಇನ್ನಿತರ ಕಡೆಗಳಲ್ಲಿ ಗುಡ್ಡ ಜರಿದು ಮಣ್ಣು ಗಿಡ ಗಂಟಿ ಸಮೇತ ರಸ್ತೆಗೆ ಬಿದ್ದಿತ್ತು. ಇದರಿಂದ ಸದ್ರಿ ರಸ್ತೆಯಲ್ಲಿ ಓಡಾಟ ನಡೆಸುವ ವಾಹನ ಸವಾರರೂ ಸಂಕಷ್ಟಕ್ಕೆ ಒಳಗಾಗಿದ್ದರು. 1 ತಿಂಗಳು ಕಳೆದರೂ ಮಣ್ಣು ತೆರವುಗೊಳಿಸದೇ ಇರುವ ಬಗ್ಗೆ ಸುದ್ದಿಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ವೆಬ್ನ್ಯೂಸ್ನಲ್ಲಿ ವರದಿ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜೂ.17ರಂದು ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಿದ್ದಾರೆ. ಇದರಿಂದಾಗಿ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಚರಂಡಿ ದುರಸ್ತಿಯಾಗಿಲ್ಲ:
ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಕೆಲವು ಕಡೆಗಳಲ್ಲಿ 1 ಅಡಿಗೂ ಹೆಚ್ಚು ನೀರು ರಸ್ತೆಯಲ್ಲೇ ನಿಂತಿದೆ. ವೇಗವಾಗಿ ಹೋಗುವ ವಾಹನಗಳು ನೀರಿನ ಮೇಲೆಯೇ ಸಂಚಾರ ಮಾಡುವುದರಿಂದ ಕೆಸರು ನೀರು ಶಾಲಾ ಮಕ್ಕಳು, ಸಾರ್ವಜನಿಕರ ಮೇಲೆಯೇ ಬೀಳುತ್ತಿದೆ. ಆದ್ದರಿಂದ ಚರಂಡಿ ದುರಸ್ತಿಗೊಳಿಸಿ ನೀರು ಚರಂಡಿಯಲ್ಲೇ ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.