ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಭವಿಷ್ಯ ರೂಪಿಸಿಕೊಳ್ಳಿ: ಪೇಜಾವರ ಶ್ರೀ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 500 ಕ್ಕಿಂತ ಹೆಚ್ಚು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಜೂ.17ರಂದು ಸಂಸ್ಥೆಯ ಶ್ರೀ ವಿಶ್ವೇಶ ಸೌಧ ಸಭಾಂಗಣದಲ್ಲಿ ನಡೆಯಿತು.

ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿ ಆಶೀರ್ವಚನ ನೀಡಿ, ಇಲ್ಲಿನ ವಿದ್ಯಾರ್ಥಿಗಳ ಸಾಧನೆಯಿಂದ ತುಂಬಾ ಸಂತಸವಾಗಿದೆ. ಸಂಸ್ಥೆಗೂ ಹೆಮ್ಮೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಗೆ ಮೊದಲು ಅದೊಂದು ಕಲ್ಲಿನ ಪ್ರತಿಮೆಯಾಗಿತ್ತು. ಪ್ರತಿಷ್ಠೆಯ ಬಳಿಕ ಪ್ರತಿಮೆಯಲ್ಲಿ ತೇಜಸ್ಸು ಕಂಡಿದ್ದೇವೆ. ಅದರಂತೆ ಕಲ್ಲಿನ ಪ್ರತಿಮೆಯಂತಿದ್ದ ವಿದ್ಯಾರ್ಥಿಗಳು ಅಧ್ಯಾಪಕರ ಶ್ರಮದಿಂದ ದೇವತೆಗಳಾಗಿ ರೂಪುಗೊಂಡಿದ್ದಾರೆ. ಮುಂದೆ ವಿದ್ಯಾರ್ಥಿಗಳು ಮತ್ತಷ್ಟು ಅಧ್ಯಯನಶೀಲರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನುಡಿದರು. ಶೇ.95ಕ್ಕಿಂತ ಅಧಿಕ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸುವುದು ಸುಲಭ. ಆದರೆ ಶೂನ್ಯದಿಂದ ಬಂದ ವಿದ್ಯಾರ್ಥಿಗಳೂ 600 ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವಂತೆ ತಯಾರುಗೊಳಿಸುತ್ತಿರುವ ಇಲ್ಲಿನ ಶಿಕ್ಷಕರ ಹಾಗೂ ಕಾರ್ಯದರ್ಶಿಯವರ ಸಾಧನೆ ಶ್ಲಾಘನೀಯ ಎಂದು ಕೊಂಡಾಡಿದ ಸ್ವಾಮೀಜಿ, ಸಂಸ್ಥೆಯ ಕಾರ್ಯದರ್ಶಿಯಾಗಿರುವ ಸೇಸಪ್ಪ ರೈ ಅವರು ಬಹಳಷ್ಟು ಶ್ರಮ ವಹಿಸಿ ಸಂಸ್ಥೆಯನ್ನು ಉತ್ತುಂಗಕ್ಕೇರಿಸಿದ್ದಾರೆ. ಅವರಿಗೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ನುಡಿದರು.
ಮುಖ್ಯ ಅತಿಥಿಯಾಗಿದ್ದ ಬೆಂಜನಪದವು ಕರಾವಳಿ ಕಲರ್ ಕಾರ್ಟನ್ಸ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಕೆ.ಪಿ.ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಈ ಸನ್ಮಾನ ಪಡೆದು ಅಹಂಕಾರಿಗಳಾಗದೆ ಭವಿಷ್ಯದ ಅಡಿಪಾಯವೆಂದು ತಿಳಿದು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. ಇನ್ನೋರ್ವ ಅತಿಥಿ ಪುತ್ತೂರು ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಅವರು ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆಯುವುದರ ಜೊತೆಗೆ ತಮ್ಮ ಜೀವನದಲ್ಲೂ ಶೇ.100 ಸಾಧನೆಗೈಯುವವರಾಗಬೇಕೆಂದರು.
ಕಾರ್ಕಳ ಶ್ರೀನಿವಾಸ್ ಗ್ಲಾಸ್ ಟ್ರೇಡರ್ಸ್ ಮಾಲಕ ಎಂ.ಗಣಪತಿ ಪೈ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ಮುಂದೆ ದೇಶದ ಆಸ್ತಿಯಾಗಿ ಬಾಳಬೇಕು ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು, ಪೇಜಾವರ ಶ್ರೀಗಳ ಆಶಯದಂತೆ ಕನಿಷ್ಠ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯಲ್ಲಿ ದಾಖಲಿಸಿ ಅವರು ಗರಿಷ್ಠ ಅಂಕ ಪಡೆಯುವಂತೆ ಸಾಧಿಸಿ ತೋರಿಸಲಾಗಿದೆ. ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ ಎಲ್ಲಾ 145 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರ ಪರಿಶ್ರಮ, ಪೋಷಕರ ಸಹಕಾರವೂ ಇದೆ ಎಂದು ಹೇಳಿದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ನಾರಾಯಣ ಭಟ್ ಟಿ, ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ಸದಸ್ಯ ಬಾಲಚಂದ್ರ ಮುಚ್ಚಿಂತ್ತಾಯ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಪ್ರಾಂಶುಪಾಲ ಪ್ರವೀದ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ, ಆಡಳಿತಾಧಿಕಾರಿ ಆನಂದ್ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ಆರ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಲೋಹಿತ ಎ., ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಗಾಯತ್ರಿ ಯು.ಎನ್.ವಂದಿಸಿದರು. ಸಹಶಿಕ್ಷಕರಾದ ಕಿಶೋರ್ ಕುಮಾರ್ ಬಿ, ಹರೀಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರರು ಸಹಕರಿಸಿದರು.
ಒಟ್ಟು 1.69 ಲಕ್ಷ ರೂ.ನಗದು ನೀಡಿ ಪುರಸ್ಕಾರ:
2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 500 ಕ್ಕಿಂತ ಹೆಚ್ಚು ಅಂಕ ಪಡೆದಕೊಂಡಡ 71 ವಿದ್ಯಾರ್ಥಿಗಳಿಗೆ ನಗದು ಹಾಗೂ ಫಲ, ಪುಷ್ಪ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಒಟ್ಟು 1.69 ಲಕ್ಷ ನಗದು ನೀಡಿ ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಶಿಕ್ಷಕನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.