ಸ್ಟಾರ್ಟಪ್ ಯೋಜನೆಗಗಳಿಂದ ತೋಟಗಾರಿಕಾ ಬೆಳೆಗಾರನನ್ನು ಉತ್ತೇಜಿಸಬಹುದು-ಡಾ. ಸಂಜಯ್ ಕುಮಾರ್
ಪುತ್ತೂರು: ಕೆಮ್ಮಿಂಜೆಯಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ನಲವತ್ತನೆಯ ಸಂಸ್ಥಾಪನಾ ದಿನಾಚರಣೆ ಜೂ.18ರಂದು ಆಚರಿಸಲಾಯಿತು.
ಮುಖ್ಯ ಅತಿಥಿ ನವದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಸಂಸ್ಥೆ(ಎ.ಎಸ್.ಆರ್.ಬಿ.) ಅಧ್ಯಕ್ಷ ಡಾ. ಸಂಜಯ್ ಕುಮಾರ್ ಮಾತನಾಡಿ ಸುಸ್ಥಿರ ಜೈವಿಕ ಆರ್ಥಿಕತೆಗೆ ತೋಟಗಾರಿಕೆ ನಾವೀನ್ಯತೆ ಮತ್ತು ಉದಯೋನ್ಮುಖ ಅವಕಾಶಗಳು ಎಂಬ ವಿಷಯದ ಬಗ್ಗೆ ಮಾತನಾಡಿ ಆಧುನಿಕ ತಂತ್ರಜ್ಞಾನದಿಂದ ಬೆಳೆಸಲಾದ ತೋಟಗಾರಿಕಾ ಬೆಳೆಗಳು ಹೇಗೆ ರೈತರಿಗೆ ಉಪಯುಕ್ತವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ಆಧುನಿಕ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಬೇಕಾದ Startup ಯೋಜನೆಗಳನ್ನು ಪ್ರಾರಂಭಿಸಬಹುದು. ಇಂತಹ ಯೋಜನೆಗಳಿಂದ ತೋಟಗಾರಿಕಾ ಬೆಳೆಗಾರನನ್ನೂ ಕೂಡ ಉತ್ತೇಜಿಸಬಹುದು ಎಂದು ಹೇಳಿದ ಅವರು ಚೆಂಡು ಹೂ, ಕೇಸರಿ ಇತ್ಯಾದಿ ಬೆಳೆಗಳ ಮೌಲ್ಯವರ್ಧನೆ ಮೂಲಕ ವಿಷಯವನ್ನು ಪ್ರಸ್ತುತಪಡಿಸಿದರು.

ತೋಟಗಾರಿಕಾ ಬೆಳೆಗಳ ಉಪ ಮಹಾನಿರ್ದೇಶಕ ಡಾ. ಎಸ್.ಕೆ. ಸಿಂಗ್ ಮಾತನಾಡಿ ಗೇರು ಒಂದು ವಾಣಿಜ್ಯ ಬೆಳೆಯಾಗಿದ್ದು, ಇದು ಗ್ರಾಮೀಣ ಭಾಗದ ರೈತರ ಮೂಲಸಂಪತ್ತು. ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾದ ತಂತ್ರಜ್ಞಾನಗಳು ರೈತರಿಗೆ ತಲುಪುವ ನಿಟ್ಟಿನಲ್ಲಿ ವಿಜ್ಞಾನಿಗಳು ಕೆಲಸ ಮಾಡಬೇಕೆಂದು ಹೇಳಿ ಗೇರು ಬೆಳೆಯ ಮಹತ್ವ ತಿಳಿಸಿದರು. ಸಂಸ್ಥೆಯ ಏಳಿಗೆಗಾಗಿ ಈ ಹಿಂದೆ ದುಡಿದ ಸಂಸ್ಥೆಯ ನಿರ್ದೇಶಕರುಗಳ ಕೊಡುಗೆಗಳ ಮಾಹಿತಿ ನೀಡಿದರು. ಹಣ್ಣು ಮತ್ತು ತೋಟಗಾರಿಕಾ ಬೆಳೆಗಳ ಸಹಾಯಕ ಮಹಾನಿರ್ದೆಶಕ ಡಾ. ವಿ.ಬಿ.ಪಟೇಲ್ ಮಾತನಾಡಿ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೇರು ಕೃಷಿಯಲ್ಲಿನ ಅವಕಾಶಗಳ ಬಗ್ಗೆ ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ರೀತಿಯ ಬಗ್ಗೆ ತಿಳಿಸಿ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾದ ವಿವಿಧ ಗೇರು ತಳಿಗಳು ಹಾಗೂ ತಂತ್ರಜ್ಞಾನಗಳ ಮಾಹಿತಿ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಈ ಹಿಂದಿನ ಎಲ್ಲಾ ನಿರ್ದೇಶಕರನ್ನೂ ಸ್ಮರಿಸಿದರು.
ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(CPCRI)ಯ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಗೌರವಾನ್ವಿತ ಅತಿಥಿಯಾಗಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಡಿ. ಬಾಲಸುಬ್ರಮಣಿಯನ್ ಸ್ವಾಗತಿಸಿ ಹಿರಿಯ ವಿಜ್ಞಾನಿ ಡಾ. ವಿ. ತೊಂಡೈಮಾನ್ ವಂದಿಸಿದರು. ಸಂಸ್ಥೆಯ ವಿಜ್ಞಾನಿ ಡಾ. ಅಶ್ವಥಿ ಸಿ. ನಿರೂಪಿಸಿದರು. ಸಂಸ್ಥೆಯ ಹಲವಾರು ಹಿರಿಯ ವಿಜ್ಞಾನಿಗಳು ಆನ್ಲೈನ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡರು.
ಪ್ರಶಸ್ತಿ ವಿತರಣೆ, ತಂತ್ರಜ್ಞಾನ ಹಸ್ತಾಂತರ
ಸಂಸ್ಥೆಯ ವಿಜ್ಞಾನಿ ಡಾ. ಮಂಜುನಾಥ ಕೆ. ಮತ್ತು ಅವರ ತಂಡ ಹಾಗೂ ಡಾ. ಶಂಸುದ್ಧೀನ್ ಎಂ. ಮತ್ತು ಬಳಗದವರಿಗೆ ಅತ್ಯುತ್ತಮ ಸಂಶೋಧನಾ ಲೇಖನಕ್ಕಾಗಿ ಪ್ರಶಸ್ತಿ ವಿತರಿಸಲಾಯಿತು. ಆಂಧ್ರಪ್ರದೇಶದ ಪಾರ್ವತೀಪುರಂ ಪ್ರಾಂತ್ಯದ ಪುನರ್ವಿ ಸಂಸ್ಥೆಗೆ ಗೇರು ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಗೊಳಿಸಲಾದ ಗೇರು ಹಣ್ಣಿನ ಮೌಲ್ಯವರ್ಧನೆಯ ತಂತ್ರಜ್ಞಾನವನ್ನು ಹಸ್ತಾಂತರ ಮಾಡಲಾಯಿತು. ಸಂಸ್ಥೆಯಲ್ಲಿ ಮುದ್ರಿಸಲಾದ ಹಲವು ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಾಯಿತು.