
ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಕೇಂದ್ರ ರಾಜ್ಯ ಹಣಕಾಸು ಯೋಜನೆಯ 2025-26ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಜೂ.19ರಂದು ಪುತ್ತೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಶೆಣೈಯವರ ಸಭಾಧ್ಯಕ್ಷತೆಯಲ್ಲಿ ಜೂ.19ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ಮನರೇಗಾದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರವೀಣ್ರವರು ರಾಜ್ಯ ಮತ್ತು ಕೇಂದ್ರ ಹಣಕಾಸು ಯೋಜನೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರು ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು ಒಳಮೊಗ್ರು ಗ್ರಾಪಂನಿಂದ ಉದ್ಯೋಗ ಖಾತರಿಯಲ್ಲಿ ಒಳ್ಳೆಯ ರೀತಿಯಲ್ಲಿ ಕೆಲಸಗಳು ಆಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮನರೇಗಾದ ತಾಲೂಕು ಐಇಸಿ ಭರತ್ರಾಜ್ರವರು ಮಾಹಿತಿ ನೀಡುತ್ತಾ, ಉದ್ಯೋಗ ಖಾತರಿಗೆ ಸರಕಾರ ಕೆಲವೊಂದು ನೀತಿ ನಿಯಮಗಳನ್ನು ಅಳವಡಿಸಿದ್ದು ಅದರಂತೆ ನಾವು ಮುಂದುವರಿಯಬೇಕಾಗಿದೆ. ಪ್ರತಿಯೊಬ್ಬರು ಉದ್ಯೋಗ ಚೀಟಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಖಾತರಿಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ ಅವರು ಉದ್ಯೋಗ ಖಾತರಿಯಲ್ಲಿ ಅಳವಡಿಸಿಕೊಳ್ಳಬಹುದಾದ ಕಾಮಗಾರಿಗಳ ಬಗ್ಗೆಯೂ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ತಾಲೂಕು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಶೆಣೈಯವರು ಮಾತನಾಡಿ, ನಾವು ಸರಕಾರದ ಕಾನೂನು ನೀತಿ ನಿಯಮಗಳಂತೆ ಕಾಮಗಾರಿಗಳನ್ನು ನಡೆಸಬೇಕಾಗುತ್ತದೆ. ಸರಕಾರ ಕೇಳುವ ದಾಖಲೆಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಸರಿಯಾದ ದಾಖಲೆಗಳನ್ನು ಪಡೆದುಕೊಳ್ಳದೆ ಕೆಲಸ ಮಾಡಿದರೆ ಅದು ಭ್ರಷ್ಟಚಾರವಾಗುತ್ತದೆ ಇದಕ್ಕೆ ಗ್ರಾಮಸ್ಥರು ಆಸ್ಪದ ಕೊಡಬಾರದು, ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಸರಕಾರ ಕೇಳುವ ಸೂಕ್ತ ದಾಖಲೆಗಳನ್ನು ಒದಗಿಸುವ ಕರ್ತವ್ಯ ಎಂದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯು ಒಂದು ಒಳ್ಳೆಯ ಯೋಜನೆಯಾಗಿದ್ದು ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿ, ಒಳಮೊಗ್ರು ಗ್ರಾಪಂನಿಂದ ಒಳ್ಳೆಯ ಕೆಲಸ ಕಾಮಗಾರಿಗಳು ನಡೆದಿರುವುದು ಖುಷಿ ತಂದಿದೆ. ಮುಂದೆಯೂ ಗ್ರಾಮಸ್ಥರು ಪಂಚಾಯತ್ನೊಂದಿಗೆ ಸಹಕಾರ ನೀಡುವಂತೆ ಕೇಳಿಕೊಂಡರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಉದ್ಯೋಗ ಖಾತರಿಯಲ್ಲಿ ಹಿಂದೆ ನಡೆದ ಕಾಮಗಾರಿಗಳ ಬಗ್ಗೆ ತಿಳಿಸಿದರು. ಸಾಮಾಜಿಕ ಪರಿಶೋಧನೆಯ ತಂಡದ ಕುಮಾರ್ ಮತ್ತು ಚಂಚಲಾ ವರದಿ ವಾಚಿಸಿದರು. ಕಾರ್ತಿಕ್, ವಿದ್ಯಾ ಮತ್ತು ಸಿಬ್ಬಂದಿಗಳು ಸಹಕರಿಸಿದ್ದರು. ಗ್ರಾಪಂ ಕಾರ್ಯದರ್ಶಿ ಜಯಂತಿ ಸ್ವಾಗತಿಸಿ,ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ, ಶೀನಪ್ಪ ನಾಯ್ಕ, ರೇಖಾ ಯತೀಶ್, ಸುಂದರಿ, ಚಿತ್ರಾ ಬಿ.ಸಿ, ನಳಿನಾಕ್ಷಿ, ಶಾರದಾ ಹಾಗೂ ಸಂಜೀವಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಹಾಗೂ ಸದಸ್ಯರುಗಳು, ನರೇಗಾ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ನರೇಗಾ 86 ಕಾಮಗಾರಿ, 463 ಮಾವನ ದಿನ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಒಳಮೊಗ್ರು ಗ್ರಾಪಂನಿಂದ 86 ಕಾಮಗಾರಿಗಳು ನಡೆದಿದ್ದು ಒಟ್ಟು463 ಮಾನವ ದಿನದ ಕೆಲಸ ಆಗಿರುತ್ತದೆ. ರೂ.15,57,956 ಕೂಲ ವೆಚ್ಚ, ರೂ.10,7,809 ಸಾಮಾಗ್ರಿ ವೆಚ್ಚ ಸೇರಿ ಒಟ್ಟು ರೂ.20,04,059 ಆಗಿರುತ್ತದೆ.
15 ಮತ್ತು ರಾಜ್ಯ ಹಣಕಾಸು ಯೋಜನೆಯ ಕಾಮಗಾರಿಗಳು
15 ನೇ ಹಣಕಾಸು ಯೋಜನೆಯಲ್ಲಿ ಒಳಮೊಗ್ರು ಗ್ರಾಪಂನಲ್ಲಿ 2022-23 ನೇ ಅವಧಿಯಲ್ಲಿ ಅನುಷ್ಠಾನವಾದ ಕಾಮಗಾರಿಗಳು 13 ಆಗಿದ್ದು ವೆಚ್ಚ ರೂ.23,79,350 ಆಗಿರುತ್ತದೆ. ರಾಜ್ಯ ಹಣಕಾಸು ಯೋಜನೆಯಲ್ಲಿ ತಾಲೂಕು ಪಂಚಾಯತ್ ಅನುದಾನದಲ್ಲಿ 26 ಕಾಮಗಾರಿ ಆಗಿದ್ದು ರೂ.10,13,831 ವೆಚ್ಚ ಆಗಿರುತ್ತದೆ ಎಂದು ಪ್ರವೀಣ್ರವರು ತಿಳಿಸಿದರು.
ಬೋರ್ಡ್ ಅಳವಡಿಕೆಗೆ ರಿಯಾಯಿತಿ ಕೊಡಿ
ನರೇಗಾದಲ್ಲಿ ಆಗಿರುವ ಕಾಮಗಾರಿಗಳಿಗೆ ಬೋರ್ಡ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದ್ದು ಆದರೆ ಕೆಲವೊಂದು ಸಣ್ಣ ಮೊತ್ತದ ಕಾಮಗಾರಿಗಳಿಗೆ ಬೋರ್ಡ್ ಅಳವಡಿಸಿದರೆ ಬೋರ್ಡ್ ಅಳವಡಿಕೆಗೆಯೇ ಅಧಿಕ ವೆಚ್ಚ ತಗಲುತ್ತದೆ ಆದ್ದರಿಂದ ಅಲ್ಪಮೊತ್ತದ ಕಾಮಗಾರಿಗಳಿಗೆ ಬೋರ್ಡ್ ಅಳವಡಿಕೆಯಲ್ಲಿ ರಿಯಾಯಿತಿ ಕೊಡುವಂತೆ ಅದ್ರಾಮ ಶಾಂತಿಗೋಡು ಅಡ್ಕ ವಿನಂತಿಸಿಕೊಂಡರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವಂತೆ ತಿಳಿಸಿದರು.
‘ ಗ್ರಾಪಂನಿಂದ ನರೇಗಾದಲ್ಲಿ 86 ಕಾಮಗಾರಿ, 15ನೇ ಹಣಕಾಸು ಯೋಜನೆಯಲ್ಲಿ 13 ಹಾಗೇ ರಾಜ್ಯ ಹಣಕಾಸು ಯೋಜನೆಯಲ್ಲಿ 26 ಕಾಮಗಾರಿ ನಡೆದಿದ್ದು, ಗ್ರಾಪಂನಿಂದ ಒಳ್ಳೆಯ ರೀತಿಯ ಅಭಿವೃದ್ಧಿ ಕೆಲಸಗಳು ನಡೆದಿರುವುದು ಖುಷಿ ತಂದಿದೆ. ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದಗಳೊಂದಿಗೆ ಮುಂದೆಯೂ ಸಹಕಾರ ನೀಡುವಂತೆ ಕೋರಿಕೆ.’
ತ್ರಿವೇಣಿ ಪಲ್ಲತ್ತಾರು,
ಅಧ್ಯಕ್ಷರು ಒಳಮೊಗ್ರು ಗ್ರಾಪಂ