ಇಂದು ನೆಲದಲ್ಲಿ ಕುಳಿತವರು ನಾಳೆ ವೇದಿಕೆಯಲ್ಲಿರಬೇಕು: ಪುತ್ತೂರು ಉಮೇಶ್ ನಾಯಕ್
ಭೂಮಿಯ ಬಾಡಿಗೆಯ ಋಣ ತೀರಿಸುವವರಾಗಬೇಕು: ಹಸೀನಾ ಬಾನು
- ಗಳಿಸಿದ್ದರಲ್ಲಿ ಒಂದಂಶ ಸಮಾಜಕ್ಕೆ ಕೊಡುವ ಗುಣ ಬೆಳೆಯಬೇಕು: ಎ.ಕೆ ಜಯರಾಮ ರೈ

ಪುತ್ತೂರು: ವಿದ್ಯಾರ್ಥಿಗಳು ನಮ್ಮೂರಿನ ಸಾಧಕರನ್ನು ಅವರ ಸಾಧನೆಯ ಹೆಜ್ಜೆಗುರುತುಗಳೊಂದಿಗೆ ಅವರ ಗುಣಗಳನ್ನು ಆದರ್ಶವನ್ನಾಗಿಟ್ಟುಕೊಂಡು ಮುಂದೆ ಬರಬೇಕು, ಇಂದು ನೆಲದಲ್ಲಿ ಕುಳಿತವರು ನಾಳೆಯ ದಿನ ವೇದಿಕೆಯ ಮೇಲೆ ಕುಳಿತುಕೊಳ್ಳುವವರಾಗಬೇಕು, ತಮ್ಮಿಂದ ತಾನು ಹುಟ್ಟಿ ಬೆಳೆದ ಊರಿಗೆ ಕಲಿತ ಶಾಲೆಗೆ ಒಳ್ಳೆಯ ಹೆಸರನ್ನು ತರುವಂತವರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ರವರು ಹೇಳಿದರು.
ಅವರು ಜೂ.20 ರಂದು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು ಇವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇವರ ಸಹಯೋಗದೊಂದಿಗೆ ಕುರಿಯ ಮಾಡಾವುಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ನಡೆದ 13ನೇ ವರ್ಷದ ಪುಸ್ತಕ ವಿತರಣೆ,ವಿದ್ಯಾಸಿರಿ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಡಾ.ಹರ್ಷ ಕುಮಾರ್ ರೈಯವರು ತಾನು ಹುಟ್ಟಿದ ಊರು ಮತ್ತು ಕಲಿತ ಶಾಲೆಗೆ ಇಂದು ತನ್ನ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದ ಉಮೇಶ್ ನಾಯಕ್ರವರು ಇವರ ಗುಣಗಳನ್ನು ವಿದ್ಯಾರ್ಥಿಗಳು ಆದರ್ಶವನ್ನಾಗಿಟ್ಟುಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.
- ಭೂಮಿಯ ಬಾಡಿಗೆಯ ಋಣ ತೀರಿಸುವವರಾಗಬೇಕು : ಹಸೀನಾ ಬಾನು
ಮುಖ್ಯ ಅತಿಥಿಯಾಗಿದ್ದ ಕೆಪಿಎಸ್ ಪ್ರಾಂಶುಪಾಲೆ ಹಸೀನಾ ಬಾನುರವರು ಮಾತನಾಡಿ, ನಾವೆಲ್ಲರೂ ಈ ಭೂಮಿಯ ಮೇಲಿನ ಬಾಡಿಗೆದಾರರು, ಈ ಭೂಮಿಯ ಬಾಡಿಗೆಯ ಋಣ ತೀರಿಸುವವರು ನಾವಾಗಬೇಕು. ಈ ನಿಟ್ಟಿನಲ್ಲಿ ಡಾ.ಹರ್ಷ ಕುಮಾರ್ ರೈಯವರು ತಾನು ಕಲಿತ ಶಾಲೆಯ ಋಣವನ್ನು ಈ ರೀತಿಯಾಗಿ ತೀರಿಸುತ್ತಿದ್ದಾರೆ. ಇವರನ್ನು ನಾನು ದಾನಿ ಎಂದೇಳುವುದಿಲ್ಲ ಬದಲಾಗಿ ತಾನು, ತನ್ನ ತಂದೆ, ತಂಗಿ ಕಲಿತ ಶಾಲೆಯ ಋಣವನ್ನು ತೀರಿಸುತ್ತಿದ್ದಾರೆ. ಮಕ್ಕಳು ಕೂಡ ಇಂತಹ ಗುಣವನ್ನು ಚಿಕ್ಕಂದಿನಲ್ಲೇ ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.
- ಗಳಿಸಿದ್ದರಲ್ಲಿ ಒಂದಂಶ ಸಮಾಜಕ್ಕೆ ಕೊಡುವ ಗುಣ ಬೆಳೆಯಬೇಕು: ಎ.ಕೆ ಜಯರಾಮ ರೈ
ಸಭಾಧ್ಯಕ್ಷತೆ ವಹಿಸಿದ್ದ ಕೆಪಿಎಸ್ ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈಯವರು ಮಾತನಾಡಿ, ತಾನು ಗಳಿಸಿದ ಗಳಿಕೆಯಲ್ಲಿ ಒಂದಂಶವನ್ನು ಸಮಾಜವನ್ನು ಕೊಡುವ ಗುಣ ನಮ್ಮಲ್ಲಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಡಾ.ಹರ್ಷ ಕುಮಾರ್ ರೈಯವರು ಕಳೆದ 13 ವರ್ಷಗಳಿಂದ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಸಮಾಜ ಮೆಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಮುಂದಿನ ವರ್ಷಕ್ಕೆ ಕೆಪಿಎಸ್ನ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕೆಪಿಎಸ್ ಉಪ ಪ್ರಾಂಶುಪಾಲ ಕೆ.ಎಸ್.ವಿನೋದ್ ಕುಮಾರ್ರವರು ಮಾತನಾಡಿ, ಒಳ್ಳೆಯ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು, ತಾನು ಕೂಡ ಒಳ್ಳೆಯ ಶಿಕ್ಷಣವನ್ನು ಪಡೆದು ಉನ್ನತ ಮಟ್ಟಕ್ಕೆ ತಲುಪಬೇಕು ಆ ಬಳಿಕ ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಮಾಡುವ ವ್ಯಕ್ತಿಯಾಗಬೇಕು ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮನಸ್ಸಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು. ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು ಮಾಸ್ತರ್ರವರು ಮಾತನಾಡಿ, ಕಳೆದ 13 ವರ್ಷಗಳಿಂದ ಕೆಪಿಎಸ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯೊಂದಿಗೆ ವಿದ್ಯಾಸಿರಿ ಪುರಸ್ಕಾರ ಮಾಡುವ ಮೂಲಕ ತಾನು ಕಲಿತ ಶಾಲೆಗೆ ತನ್ನಿಂದ ಸಾಧ್ಯವಾಗುವ ಸೇವೆಯನ್ನು ಮಾಡುತ್ತಿರುವ ಡಾ.ಹರ್ಷ ಕುಮಾರ್ ರೈಯವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಇವರಿಂದ ಇನ್ನಷ್ಟು ಸಮಾಜಮುಖಿ ಸೇವೆಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜನ್ಮ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಹರ್ಷ ಕುಮಾರ್ ರೈ ಮಾಡಾವುರವರು ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್, ಶಿಕ್ಷಕರಾದ ಪ್ರಕಾಶ್ ಹುಲಿಗಟ್ಟಿ, ರವಿ ಟಿ, ಎಸ್ಡಿಎಂಸಿ ಸದಸ್ಯೆ ಧರಣಿ ಕೆಯ್ಯೂರು, ಶಿಕ್ಷಕಿ ಸಂದ್ಯಾ ಅತಿಥಿಗಳಿಗೆ ಕನ್ನಡದ ಶಾಲು, ಹೂ ನೀಡಿ ಸ್ವಾಗತಿಸಿದರು. ವಿದ್ಯಾಸಿರಿ ಪುರಸ್ಕಾರದ ವರದಿಯನ್ನು ಜಿಪಿಟಿ ಶಿಕ್ಷಕ ಪ್ರಕಾಶ್ ಹುಲಿಗಟ್ಟೆ, ಗೌರವ ಶಿಕ್ಷಕಿಯರಾದ ದಿವ್ಯಾ, ಅಶ್ವಿನಿ ವಾಚಿಸಿದರು. ಶಿಕ್ಷಕಿ ಸಂದ್ಯಾ ವಂದಿಸಿದರು. ಶಿಕ್ಷಕಿ ಸುಫ್ರಭಾ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರುಗಳಾದ ವಸಂತಿ, ಶಾಲಿನಿ, ಶೈಲಜಾ, ಪ್ರಸಿಲ್ಲಾ, ಆದಿತ್ಯ ಹೆಬ್ಬಾರ್, ಅತಿಥಿ ಶಿಕ್ಷಕರಾದ ಗೀತಾ, ಕಮಲ, ಎಲ್ಕೆಜಿ ಶಿಕ್ಷಕಿಯರಾದ ಸೌಮ್ಯ,ಜ್ಯೋತಿ ಹಾಗೂ ಸಹಾಯಕರಾದ ರಶ್ಮಿತಾ, ರೂಪ ಸಹಕರಿಸಿದ್ದರು.
- 484 ವಿದ್ಯಾರ್ಥಿಗಳಿಗೆ 1620 ಪುಸ್ತಕ ವಿತರಣೆ
ಡಾ.ಹರ್ಷ ಕುಮಾರ್ ರೈ ಮಾಡಾವುರವರ ನೇತೃತ್ವದಲ್ಲಿ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ಜನ್ಮ ಫೌಂಡೇಶನ್ ಟ್ರಸ್ಟ್ ವತಿಯಿಂದ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗದ ಒಟ್ಟು 484 ವಿದ್ಯಾರ್ಥಿಗಳಿಗೆ 1620 ಬರೆಯುವ ಪುಸ್ತಕ ವಿತರಣೆ ಮಾಡಲಾಯಿತು. ಎಲ್ಕೆಜಿ, ಯುಕೆಜಿಯ 84 ವಿದ್ಯಾರ್ಥಿಗಳಿಗೆ ಚಿತ್ರಕ್ಕೆ ಬಣ್ಣ ತುಂಬಿಸುವ ಪುಸ್ತಕಗಳನ್ನು ವಿತರಿಸಲಾಯಿತು.
ವಿದ್ಯಾಸಿರಿ ಪುರಸ್ಕಾರ/ ಸನ್ಮಾನ
2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. 1ನೇ ತರಗತಿಯಿಂದ 8 ನೇ ತರಗತಿಯ ಕನ್ನಡ ಮಾಧ್ಯಮದ 8 ವಿದ್ಯಾರ್ಥಿಗಳಿಗೆ ಹಾಗೂ 1 ನೇ ತರಗತಿಯಿಂದ 5ನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗದ 5 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. 8 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಓರ್ವ ವಿದ್ಯಾರ್ಥಿನಿ ನಿಶಾ ಡಿ.ಪಿಯವರಿಗೆ ವಿದ್ಯಾಸಿರಿ ಪುರಸ್ಕಾರದೊಂದಿಗೆ ಫಲಪುಷ್ಪ. ಶಾಲು, ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಲಾಯಿತು.
“ಪ್ರಾಥಮಿಕ ವಿಭಾಗದ 484 ವಿದ್ಯಾರ್ಥಿಗಳಿಗೆ 1620 ಪುಸ್ತಕಗಳನ್ನು ವಿತರಿಸಲಾಯಿತು.ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ಸೇರಿದಂತೆ 15 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪುರಸ್ಕಾರ ಮಾಡಲಾಯಿತು. ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವುದು ನಮ್ಮ ಉದ್ದೇಶವಾಗಿದೆ.ನಮ್ಮೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೇ ಕೆಪಿಎಸ್ನ ಶಿಕ್ಷಕ ವೃಂದದವರು ಸಹಕಾರ ನೀಡುತ್ತಿದ್ದು ಸಹಕರಿಸುತ್ತಿರುವ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.”
ಡಾ.ಹರ್ಷ ಕುಮಾರ್ ರೈ ಮಾಡಾವು,
ಅಧ್ಯಕ್ಷರು ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು