ಪುತ್ತೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ ಹಾಗೂ ಮನೆ ದುರಸ್ಥಿಗೆ ಈ ಹಿಂದೆ ಸರಕಾರ ಫಲಾನುಭವಿಗಳನ್ನು ಆಯ್ಕೆ ಮಾಡಿತ್ತು. ಆಯ್ಕೆಯಾದ ಪ.ಜಾತಿ.ಪ ಪಂಗಡ,ವಿಕಲಚೇತನ ಹಾಗೂ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಕಂತಿನ ಹಣ ಪಾವತಿಯಾಗಿರಲಿಲ್ಲ. ಈ ಬಗ್ಗೆ ಫಲಾನುಭವಿಗಳು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಬಾಕಿ ಇರುವ ಕಂತು ಶೀಘ್ರ ಬಿಡುಗಡೆಗೆ ಆಗ್ರಹಿಸಿ ಸರಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದ್ದರು.
ಜೂ.20ರಂದು ಶಾಸಕ ಅಶೋಕ್ ರೈ ಅವರು ಪೌರಾಡಳಿತ ಸಚಿವಾಲಯದ ನಿರ್ದೇಶಕ ಪ್ರಭುಲಿಂಗ ಕವಳಕಟ್ಟಿ ಅವರನ್ನು ಭೇಟಿಯಾಗಿ, ಬಾಕಿ ಇರುವ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ಶೀಘ್ರ ಪಾವತಿಗೆ ಮನವಿ ಮಾಡಿದ್ದರು.ಶಾಸಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು 20 ದಿನದೊಳಗೆ ಬಾಕಿ ಇರುವ ಪಾವತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 220 ಫಲಾನುಭವಿಗಳಿದ್ದು ಇವರಿಗೆಲ್ಲಾ ನಗರೋತ್ಥಾನ ಹಂತ 4 ಇದರ ಹಣ ಪಾವತಿಯಾಗಲು ಬಾಕಿ ಇದೆ. ಫಲಾನುಭವಿಗಳು ಈಗಾಗಲೇ ಮನೆ ನಿರ್ಮಾಣ, ದುರಸ್ಥಿ ,ಶೌಚಾಲಯ ನಿರ್ಮಾಣ ಕೆಲಸವನ್ನು ಮಾಡಿದ್ದು, ಹಣ ಪಾವತಿಯಾಗದ ಕಾರಣ ಕೆಲಸ ಅರ್ಧಕ್ಕೆ ನಿಂತಿದೆ.
ನಗರೋತ್ಥಾನ ಹಂತ 4 ಇದರ ಹಣ ಪಾವತಿಯಾಗದ ಕಾರಣ ಫಲಾನುಭವಿಗಳು ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ಇಂದು ಪೌರಾಡಳಿತ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಬಾಕಿ ಇರುವ ಎಲ್ಲಾ ಹಣವನ್ನು ಪಾವತಿ ಮಾಡುವಂತೆ ಕೇಳಿಕೊಂಡಿದ್ದು 20 ದಿನದೊಳಗೆ ಎಲ್ಲಾ ಪಾವತಿಯೂ ನಡೆಯಲಿದೆ. ಫಲಾನುಭವಿಗಳು ಯಾವುದೇ ಆತಂಕ ಪಡಬೇಕಾಗಿಲ್ಲ. ಹಣ ಪಾವತಿಯಾಗುವಂತೆ ವ್ಯವಸ್ಥೆ ಮಾಡುವ ಜವಾಬ್ದಾರಿ ನನ್ನದು .
ಅಶೋಕ್ ರೈ ಶಾಸಕರು,ಪುತ್ತೂರು