ದ್ವೇಷ ರಾಜಕೀಯದ ವಿರುದ್ಧ ಹೋರಾಟ ತೀವ್ರಗೊಳಿಸುವ ಸಂಕಲ್ಪ – ಮೂನಿಶ್ ಅಲಿ
ಪುತ್ತೂರು: ದ್ವೇಷ ರಾಜಕೀಯ, ಮನುವಾದಿಗಳ ಶೋಷಣೆ ಮತ್ತು ಫ್ಯಾಶಿಸ್ಟ್ ಧೋರಣೆಗಳ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪವನ್ನು ಪಕ್ಷದ ಸಂಸ್ಥಾಪನಾ ದಿನದಂದು ನಾವು ಮಾಡಬೇಕಾಗಿದೆ ಎಂದು ಗ್ರಾಮಾಂತರ ಜಿಲ್ಲಾ ಸಮಿತಿ ಉಪಾಧ್ಯಕ್ಷರೂ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷರಾದ ಮೂನಿಶ್ ಅಲಿ ಅವರು ಹೇಳಿದರು.
ಸಾಲ್ಮರದಲ್ಲಿ ನಡೆದ ಎಸ್ ಡಿ ಪಿ ಐ ಪಕ್ಷದ 17 ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು. ನಮ್ಮ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪವನ್ನು ನಾವು ಮಾಡಬೇಕಾಗಿದೆ.ಎಂಕೆ ಫೈಝಿಯಂತಹ ನಾಯಕರ ಬಿಡುಗಡೆಗಾಗಿ ಮತ್ತು ಯೆಪಿಎ ಇಡಿ ದುರ್ಬಳಕೆಯ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುವುದರೊಂದಿಗೆ ಸರ್ಕಾರದ ಷಡ್ಯಂತ್ರದ ವಿರುದ್ಧ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಯಾವ ರೀತಿ ನಮ್ಮ ಪೂರ್ವಿಕರು ಭಾರತದಿಂದ ಬ್ರಿಟೀಷ್ ಮುಕ್ತ ಸಂಕಲ್ಪದೊಂದಿಗೆ ಹೋರಾಟ ನಡೆಸಿದರೋ ಅದೇ ರೀತಿ ಇಂದು ನಮ್ಮ ದೇಶದಿಂದ ಆರ್ ಎಸ್ ಎಸ್ ಮುಕ್ತ ಮಾಡಬೇಕಾದ ಮಹತ್ತರ ಜವಬ್ಧಾರಿ ನಮ್ಮಲ್ಲಿದೆ ಎಂದರು.
ಪಕ್ಷದ ಉಪಾಧ್ಯಕ್ಷ ಹಮೀದ್ ಸಾಲ್ಮರ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸಾದ ಸುಂದರ ಮತ್ತು ಸೌಹಾರ್ದ ಭಾರತವನ್ನು ನಿರ್ಮಿಸಲು ಎಲ್ಲರೂ ಎಸ್ ಡಿ ಪಿ ಐ ಯೊಂದಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಕೆದಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಯ್ಯದ್ ಮಲೆ ಜುಮಾ ಮಸೀದಿ ಅಧ್ಯಕ್ಷ ಡಾ. ಶಂಸುದ್ದೀನ್ ಸಾಲ್ಮರ, ಪುತ್ತೂರು ನಗರಸಭೆ ಸದಸ್ಯೆ ಫಾತಿಮಾ ಝಹರ, ಪುತ್ತೂರು ನಗರ ಸಮಿತಿ ಅಧ್ಯಕ್ಷರಾದ ಯಹ್ಯಾ ಕೆ. ಎಚ್, ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕಾರ್ಯಕ್ರಮದ ಉಸ್ತುವಾರಿ ರಜಾಕ್ ಸಾಲ್ಮರ ಊರಿನ ಹಿರಿಯ ವ್ಯಕ್ತಿ ಪುತ್ತಬ್ಬಾ, ಅನ್ಸಾರುದ್ದೀನ್ ಉಪಸ್ಥಿತರಿದ್ದರು. ತಾಜುದ್ದೀನ್ ಸಾಲ್ಮರ ಸ್ವಾಗತಿಸಿ, ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು, ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಜ್ ಬಲಕ ವಂದಿಸಿದರು.