ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪಾಣಾಜೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರಕಾರದಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ-ನಿತೀಶ್ ಕುಮಾರ್ ಶಾಂತಿವನ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮಾತನಾಡಿ ರಾಜ್ಯದಲ್ಲಿ ಬ್ರಷ್ಠಾಚಾರ ತಾಂಡವವಾಡುತ್ತಿದೆ. 94ಸಿ, ವಾಲ್ಮೀಕಿ ನಿಗಮ, ವಸತಿ ನಿಗಮದಲ್ಲಿ ಹಗರಣಗಳು ನಡೆಯುತ್ತಿದೆ. ಗ್ರಾಮ ಪಂಚಾಯತ್ಗೆ ಬರುವ ಅನುದಾನವನ್ನು ತಡೆಹಿಡಿದಿದ್ದಾರೆ. ಗ್ರಾಮ ಪಂಚಾಯತ್ಗಳಿಗೆ ರಾಜ್ಯ ಸರಕಾರದಿಂದ ಒಂದು ರೂಪಾಯಿಯ ಅನುದಾನವೂ ಬರುತ್ತಿಲ್ಲ. ಹಿಂದಿನ ನಮ್ಮ ಬಿಜೆಪಿ ಸರಕಾರದ ಸಾಧನೆಯನ್ನೇ ನಾವು ಮಾಡಿದ್ದೇವೆ ಎಂದು ಫೋಸ್ ಕುಡುತ್ತಿದ್ದಾರೆ. ಅಲ್ಲದೆ ಬಿಜೆಪಿ ಸರಕಾರದ ಅನುದಾನದ ಕಾಮಗಾರಿಗಳಿಗೆ ರಿಬ್ಬನ್ ಕಟ್ ಮಾಡುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದರು. ಪ್ರಚಾರ ತೆಗೆದುಕೊಳ್ಳುವ ಪುತ್ತೂರಿನ ಈಗಿನ ಶಾಸಕರು ಪುತ್ತೂರಿನಲ್ಲಿ ಕಳೆದ ಶಾಸಕರು ಮಾಡಿದ ಹಕ್ಕುಪತ್ರವನ್ನೇ ನೀಡುತ್ತಿದ್ದಾರೆ. ಬಿಜೆಪಿ ಸರಕಾರದ ಯೋಜನೆಗಳನ್ನು ರದ್ದು ಮಾಡುತ್ತಿದ್ದು ಬಡವರ ಹೊಟ್ಟೆಗೆ ಪೆಟ್ಟು ಕೊಡುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಮೆಸ್ಕಾಂ ಉದ್ಯೋಗಿಗಳ ಪಿಂಚಣಿ ನಮ್ಮಿಂದ ಕೊಡಬೇಕಾದ ಪರಿಸ್ಥಿತಿ ಇದೆ. ತೆರಿಗೆ ಹೆಚ್ಚಳ ಮಾಡಿ ಮನೆ ಕಟ್ಟಲು ಕಲ್ಲು ಸಿಗದ ಹಾಗೆ ಮಾಡಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡುತ್ತಿಲ್ಲ. ಹಿಂದು ನಾಯಕರ ಹಾಗೂ ಹಿರಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ಜನೌಷಧಿ ಮಳಿಗೆಯನ್ನು ರದ್ದು ಮಾಡುತ್ತಿದ್ದಾರೆ. ಇಂತಹ ದುರಾಡಳಿತದ ಕಾಂಗ್ರೆಸ್ ಸರಕಾರ ಕಿತ್ತೊಗೆದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಬೆಂಬಲ ಕೊಡುವ ಕೆಲಸ ಮಾಡಬೇಕು ಎಂದು ವಿನಂತಿಸಿದರು.
ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಸ್ವಾಗತಿಸಿ ಮಾತನಾಡಿ ರಾಜ್ಯ ಸರಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗದೆ ಜನರ ನಿರೀಕ್ಷೆ ಸುಳ್ಳಾಗುತ್ತಿದೆ. ಉದ್ಯೋಗವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. 2 ವರ್ಷಗಳಿಂದ ಯಾವುದೇ ಹುದ್ದೆಗಳ ನೇಮಕಾತಿ ನಡೆಯುತ್ತಿಲ್ಲ. ಗ್ರಾಮ ಪಂಚಾಯತ್ನ ಅಧಿಕಾರಗಳನ್ನು ಕಿತ್ತುಕೊಂಡಿದ್ದಾರೆ. ಗ್ರಾಮ ಪಂಚಾಯತ್ಗಳಿಗೆ ಯಾವುದೇ ಅನುದಾನವನ್ನು ಕೊಡುತ್ತಿಲ್ಲ. ಕೇಂದ್ರ ಸರಕಾರದ ಅನುದಾನದಿಂದ ಗ್ರಾಮ ಪಂಚಾಯತ್ಗಳು ನಡೆಯುತ್ತಿದೆ ಎಂದರು. ಇಂದು ಶ್ಯಾಮ್ ಪ್ರಸಾದ್ ಮುಖರ್ಜಿ ಹುಟ್ಟುಹಬ್ಬದ ದಿನ. ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ವಾಜಪೇಯಿರವರು ದೇಶಕ್ಕಾಗಿ ಸೇವೆ ಮಾಡಿದವರು. ಹಿರಿಯರ ಸೂಚನೆ ಮೇರೆಗೆ ಪ್ರತಿಭಟನೆ ಮಾಡಿ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತಿದ್ದೇವೆ ಎಂದ ಅವರು ಕೆಟ್ಟ ಜನವಿರೋಧಿ ಸರಕಾರವನ್ನು ಆದಷ್ಟು ಬೇಗ ತೊಲಗಿಸಬೇಕು ಎಂದರು.
ಮನವಿ:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜನಸಾಮಾನ್ಯರಿಗೆ ನೀಡುತ್ತಿರುವ ಸರಕಾರಿ ಸೇವೆಗಳನ್ನು ಕಠಿಣಗೊಳಿಸಿರುವುದನ್ನು ತಕ್ಷಣದಿಂದಲೇ ಕೈ ಬಿಡುವಂತೆ ಸರಕಾರವನ್ನು ಒತ್ತಾಯಿಸಿ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಕರ್ನಾಟಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಪಾಣಾಜೆ ಗ್ರಾಮ ಪಂಚಾಯತ್ವರೆಗೆ ಮೆರವಣಿಗೆ ನಡೆಯಿತು. ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಸುಭಾಷ್ ರೈ ಸಿ.ಎಚ್., ಮೋಹನ ನಾಯ್ಕ, ಸುಲೋಚನ, ಪಾಣಾಜೆ ಶಕ್ತಿಕೇಂದ್ರದ ಅಧ್ಯಕ್ಷ ಪ್ರೇಮರಾಜ್ ಆರ್ಲಪದವು, ಬೂತ್ ಪದಾಧಿಕಾರಿಗಳಾದ ಪುಷ್ಪರಾಜ ರಐ ಕೋಟೆ, ಸಂದೀಪ್ ಕೆ., ಚಂದ್ರ ಎ.ಬಿ., ಕೀರ್ತಿರಾಜ್ ಉಡ್ಡಂಗಳ, ಸುಖಿನ್ ರಾಜ್, ಶಶಿಕಾಂತ್ ವಾಣಿಯನ್, ಪ್ರದೀಪ್ ಪಾಣಾಜೆ, ರಘುನಾಥ ಪಾಟಾಳಿ, ಸಂತೋಷ್ ರೈ ಗಿಳಿಯಾಲು, ಸುರೇಶ್ ತೂಂಬಡ್ಕ, ಪುರಂದರ ಗಿಳಿಯಾಲು, ಗೀತಾ ಗೋಪಾಲಕೃಷ್ಣ, ಜಯಲಕ್ಷ್ಮಿ, ಹರೀಶ್ ಪಾಣಾಜೆ, ರವಿಶಂಕರ ಶರ್ಮ, ಜಯರಾಮ ರೈ, ಪುಷ್ಪಾವತಿ, ಸವಿತಾ ಎಂ.ಜಿ., ಹರೀಶ್ ಆರ್ಲಪದವು ಭಾಗವಹಿಸಿದ್ದರು.