ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಮಕ್ಕಳ ಪ್ರವೇಶೋತ್ಸವ, ಪಾಲಕರ ಸಭೆ

0

ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಮಕ್ಕಳ ಪ್ರವೇಶೋತ್ಸವ ಹಾಗೂ ಪಾಲಕರ ಸಭೆಯು ಜೂ.22ರಂದು ನಡೆಯಿತು. ಕಾರ್ಯಕ್ರಮದ ಅತಿಥಿ ಮಧುರಾ ಗಣರಾಜ್ ಭಟ್ ರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ಶಿಶುಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿ ಮಧುರಾ ಗಣರಾಜ್ ಭಟ್‌ ಮಾತನಾಡಿ, ಶಿಕ್ಷಣ ಎಂಬುದು ಬಹುಮುಖ್ಯವಾದ ವಿಷಯ. ಆದರೆ ಇದು ಅಂಕಪಟ್ಟಿಗೆ ಸೀಮಿತವಾಗಿರಬಾರದು. ಶಿಕ್ಷಣ ಎನ್ನುವಂತದ್ದು ಮಗು ತಾಯಿಯ ಗರ್ಭದಲ್ಲಿರುವಾಗಲೇ ಸಿಗಬೇಕು. ಗರ್ಭಸಂಸ್ಕಾರ ಹಿಂದಿನ ಕಾಲದಲ್ಲೇ ಪ್ರಚಲಿತದಲ್ಲಿತ್ತು. ಇದರಿಂದ ಉತ್ತಮ ಆರೋಗ್ಯಯುತ ಮಕ್ಕಳನ್ನು ಪಡೆಯುತ್ತಿದ್ದರು ಎಂದರು.

ಈಗಿನ ಕಾಲದಲ್ಲಿ ಕೆಲವು ಮಕ್ಕಳಿಗೆ ಹಿರಿಯರಿಗೆ ನಮಸ್ಕಾರ ಮಾಡುವುದಾಗಲೀ ಅಥವಾ ತಮ್ಮ ಕೆಲಸವನ್ನು ತಾವೇ ಮಾಡುವುದಾಗಲಿ ತಿಳಿದಿಲ್ಲ. ಶಾಲೆಯಲ್ಲಿ ಸಂಸ್ಕಾರ ಕೊಡಬಹುದು ಆದರೆ ಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ಶಿಕ್ಷಣವನ್ನು ಗರ್ಭಸಂಸ್ಕಾರದ ಮೂಲಕ ನೀಡಬೇಕು. ನಾವು ಮಕ್ಕಳನ್ನು ಅಕ್ಷರಸ್ಥರನ್ನಾಗಿಸಲು ಎಷ್ಟು ಪ್ರಯತ್ನ ಪಡುತ್ತೇವೆಯೋ ಹಾಗೆಯೇ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಕೂಡ ಪ್ರಯತ್ನಿಸಿದರೆ ನಿಜವಾದ ವಿದ್ಯಾವಂತರನ್ನಾಗಿ ಮಾಡಬಹುದು. ಮಕ್ಕಳು ಸಣ್ಣ ಸಣ್ಣ ವಿಷಯದಲ್ಲೂ ಖುಷಿ ಕಂಡುಕೊಳ್ಳುತ್ತಾರೆ. ಪಾಲಕರು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಮಕ್ಕಳಿಗೆ ಆಟದ ಮೂಲಕ ಹಾಡಿನ ಮೂಲಕ ಕಲಿಸಿಕೊಡಬಹುದು ಎಂದರು.


ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶಿಕ್ಷಕರು ಆರತಿ ಬೆಳಗಿ, ಕುಂಕುಮ ಹಚ್ಚಿ ಅಕ್ಷತೆಯನ್ನು ಹಾಕಿ ಹಾರೈಸಿದರು. ಮಕ್ಕಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here