ಬಡಗನ್ನೂರು: ಶ್ರೀ ಕೃಷ್ಣ ವಿದ್ಯಾ ಸಂಸ್ಥೆ ಪಟ್ಟೆ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಸಾಂಸ್ಕೃತಿಕ ಚಟುವಟಿಕೆ ತರಬೇತಿ ಕಾರ್ಯಕ್ರಮ ಜೂ.24ನೇ ರಂದು ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಲೆ ಮತ್ತು ವಿದ್ಯೆಯನ್ನು ಒಟ್ಟಿಗೆ ಕಲಿತಾಗ ವಿದ್ಯಾರ್ಥಿ ಯಶಸ್ಸು ಗಳಿಸಲು ಸಾಧ್ಯ. ಎಲ್ಲಾ ವಿದ್ಯಾರ್ಥಿ ಯಾವುದಾದರೂ ಒಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗಿ ತಿಳಿಸಿದರು.

ಸಪ್ತಕಲಾ ಕಾರ್ಯಕ್ರಮಗಳ ಕಡತವನ್ನು ಬಿಡುಗಡೆ ಮಾಡುವ ಮೂಲಕ ಉಚಿತ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರು ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ ಎನ್ನುತ್ತಾ ಸಾಂಸ್ಕೃತಿಕ ಚಟುವಟಿಕೆಗಳ ಮಹತ್ವವನ್ನು ತಿಳಿಸಿದರು. ಭರತನಾಟ್ಯ ತರಬೇತುದಾರರಾದ ವಿದ್ವಾನ್ ದೀಪಕ್ ಕುಮಾರ್ ಮಾತನಾಡಿ, ಭರತನಾಟ್ಯ ಕಲೆಯು ನಮ್ಮ ಸಂಸ್ಕೃತಿ, ವಿನಯ, ಧಾರ್ಮಿಕ ಪ್ರಜ್ಞೆ ಹಾಗೂ ಮೌಲ್ಯವನ್ನು ನೀಡುವುದು ಎಂದರು. ಶಾಲಾ ಸಂಚಾಲಕ ವಿಘ್ನೇಶ್ ಹಿರಣ್ಯ ಮಾತನಾಡಿ, ಈ ಸಾಂಸ್ಕೃತಿಕ ತರಬೇತಿಯು ವರ್ಷವಿಡಿ ನಡೆಯಲಿದ್ದು, ಇದರಲ್ಲಿ ಕರಾಟೆ, ಭರತನಾಟ್ಯ, ಸಂಗೀತ, ಯೋಗ, ಯಕ್ಷಗಾನ, ರಂಗಕಲೆ ಹಾಗೂ ನೈತಿಕ ಶಿಕ್ಷಣವು ಇದರ ಭಾಗವಾಗಿರಲಿದೆ. ಎಲ್ಲಾ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆಯಿರಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಗೀತ ತರಬೇತುದಾರೆ ಶೋಭಾ ಕುರಿಯ, ಕರಾಟೆ ತರಬೇತುದಾರ ಶೇಖರ್ ಮಾಡಾವು, ಯಕ್ಷಗಾನ ತರಬೇತುದಾರ ಚಂದ್ರಶೇಖರ್ ಉಪಸ್ಥಿತರಿದ್ದರು. ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ರಾಜಗೋಪಾಲ ಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರು ಸುಮನಾ ಬಿ ಇವರು ವಂದಿಸಿದರು. ಪ್ರೌಢಶಾಲಾ ಶಿಕ್ಷಕ ವಿಶ್ವನಾಥ್ ಬಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಎಲ್ಲಾ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.