ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ 2025 ಜೂ.19, 20 ಮತ್ತು 21ರಂದು “ಭಾರತೀಯ ಜ್ಞಾನ ಪರಂಪರೆ” ವಿಷಯದ ಕುರಿತು ಮೂರು ದಿನಗಳ ಉಪನ್ಯಾಸ ಮಾಲಿಕೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಉತ್ತರದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಅವರು ಭಾರತವು ವಿಶ್ವ ಗುರುವಾಗಬೇಕಾದರೆ ಹಿಂದೂ ಜ್ಞಾನ ಪರಂಪರೆ ಅತ್ಯಂತ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಠ್ಯಕ್ರಮದಲ್ಲಿ ಹಿಂದೂ ಜ್ಞಾನ ಪರಂಪರೆಯನ್ನು ಅಳವಡಿಸುವ ಕುರಿತು ಮಾತನಾಡಿದ ಅವರು, ಈ ಜ್ಞಾನವನ್ನು ಪಠ್ಯದಲ್ಲಿ ಸೇರಿಸಿದರೆ ನಾವು ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು. ಹಿಂದೂ ಜ್ಞಾನ ಪರಂಪರೆ – ಏಕೆ? ಏನು? ಹೇಗೆ? ಎಂಬ ಮೂರು ಪ್ರಮುಖ ಅಂಶಗಳನ್ನು ತಿಳಿಸಿದರು. ರಾಷ್ಟ್ರೀಯತೆ, ಮನುಷ್ಯನ ಆಹಾರ ಪದ್ಧತಿ ಮತ್ತು ಚರಕ ಸಂಹಿತೆಯಲ್ಲಿನ ಆಯುರ್ವೇದದ ಮಹತ್ವವನ್ನು ತಿಳಿಸಿದರು. ಭಗವದ್ಗೀತೆ, ಉತ್ತರ ಮಿಮಾಂಸೆ, ಭಕ್ತಿ ಸಾಹಿತ್ಯ, ವೇದಗಳಲ್ಲಿನ ಶ್ರುತಿ–ಸ್ಮೃತಿ, ವೇದಾಂತ, ವೇದಾಂಗ, ಸೂತ್ರಶಾಸ್ತ್ರ, ಪುರಾಣ, ದರ್ಶನ, ಉಪನಿಷತ್ತುಗಳು, ಜೈನ ಸಾಹಿತ್ಯ, ತ್ರಿಪಿಟಕ, ಗುರು ಗ್ರಂಥ ಮುಂತಾದ ಮೂಲ ಗ್ರಂಥಗಳ ಮಹತ್ವ ಹಾಗೂ ಅವುಗಳ ಅಧ್ಯಯನದ ಅಗತ್ಯತೆಯನ್ನು ವಿವರಿಸಿದರು. ಶಿಕ್ಷಕರು ಈ ಗ್ರಂಥಗಳನ್ನು ಅಧ್ಯಯನ ಮಾಡಬೇಕು, ಇತರ ಭಾಷೆಗಳ ಕಲಿಕೆಯೊಂದಿಗೆ ಮೂಲಗ್ರಂಥಗಳನ್ನು ಅನುವಾದಿಸದೆ ಓದಬೇಕು, ಒಂದೇ ವಿಷಯಕ್ಕೆ ಸಂಬಂಧಿಸಿದ ವಿವಿಧ ಗ್ರಂಥಗಳನ್ನು ಸಂಗ್ರಹಿಸಬೇಕು ಎಂಬುದಾಗಿ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ. ಸುಧಾ ಎಸ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲೆ ಶೋಭಿತ ಸತೀಶ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ರವೀಂದ್ರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕರು, ಸಹಾಯಕ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು. ಸಹಾಯಕ ಪ್ರಾಧ್ಯಾಪಕಿ ಅನುರಾಧ ಕಾರ್ಯಕ್ರಮವನ್ನು ನಿರೂಪಿಸಿದರು.