ಹೆಚ್ಚಳವಾದ ನೇತ್ರಾವತಿ ನದಿ ಹರಿವು

0

ಉಪ್ಪಿನಂಗಡಿ: ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯು ಉಪ್ಪಿನಂಗಡಿಯಲ್ಲಿ ಸಮುದ್ರಮಟ್ಟಕ್ಕಿಂತ ಜೂ.25ರ ರಾತ್ರಿಯಂದು 28.05 ಮೀ. ಎತ್ತರದಲ್ಲಿ ಹರಿಯುತ್ತಿದ್ದು, ಇಲ್ಲಿ ನದಿಯ ಅಪಾಯದ ಮಟ್ಟ 31.೦ ಆಗಿದೆ. ನೇತ್ರಾವತಿ ನದಿ ಪಾತ್ರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಕುಮಾರಧಾರ ನದಿಗಿಂತಲೂ ಹೆಚ್ಚಿನ ನೀರಿನ ಹರಿವು ನೇತ್ರಾವತಿ ನದಿಯಲ್ಲಿ ಕಂಡು ಬಂದಿದೆ.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನದಿಗಿಳಿಯಲು ಒಟ್ಟು 36 ಮೆಟ್ಟಿಲುಗಳಿದ್ದು, ಅದರಲ್ಲಿ ಜೂ.25ರ ರಾತ್ರಿಯ ವೇಳೆಗೆ 27 ಮೆಟ್ಟಿಲುಗಳು ಮುಳುಗಿದ್ದು, 9 ಮೆಟ್ಟಿಲುಗಳು ಮಾತ್ರ ಕಾಣುತ್ತಿತ್ತು.

ಉಪ್ಪಿನಂಗಡಿಯಲ್ಲಿ ನೇರವಾಗಿ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ನದಿಯಲ್ಲಿ ನೀರಿನ ಹರಿಯುವಿಕೆಯ ರಭಸ ಹೆಚ್ಚಿದ್ದು, ಇದರಿಂದ ದೇವಾಲಯದ ಹಿಂಬದಿಯಿಂದ ಹರಿದು ಬಂದು ನೇತ್ರಾವತಿ ನದಿಯೊಂದಿಗೆ ವಿಲೀನಗೊಳ್ಳುವ ಕುಮಾರಧಾರ ನದಿ ನೀರಿನ ಸರಾಗ ಹರಿಯುವಿಕೆಯನ್ನು ನೇತ್ರಾವತಿ ನದಿಯು ಕಟ್ಟಿದೆ. ಇದರಿಂದ ಕುಮಾರಧಾರ ನದಿ ನೀರಿನೊಂದಿಗೆ ಹರಿದು ಬಂದ ಕಸ- ಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯಗಳು ಕುಮಾರಧಾರ ನದಿಯ ಹಳೆಯ ಸೇತುವೆಯ ಬಳಿ ಸೇರಿಕೊಂಡಿವೆ. ನದಿ ಪಾತ್ರದ ಪ್ರದೇಶಗಳಲ್ಲಿ ಇನ್ನಷ್ಟು ಮಳೆಯಾದರೆ ಇಲ್ಲಿ ನದಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಳಗೊಳ್ಳಲಿದೆ.


ದೇವಾಲಯದ ಬಳಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಮೊಕ್ಕಾಂ ಹೂಡಿದ್ದು, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಇದರ ನೇತೃತ್ವ ವಹಿಸಿದ್ದಾರೆ.

LEAVE A REPLY

Please enter your comment!
Please enter your name here