ಉಪ್ಪಿನಂಗಡಿ: ಖಾಸಗಿ ಜಾಗಗಳಿಂದ ಸಾರ್ವಜನಿಕ ರಸ್ತೆ, ವಿದ್ಯುತ್ ತಂತಿ ಅಥವಾ ವಿದ್ಯುತ್ ಕಂಬಗಳ ಮೇಲೆ ಬಾಗಿಕೊಂಡಿರುವ ಗಿಡ, ಮರಗಳ ತೆರವು ಕಾರ್ಯವನ್ನು ಉಪ್ಪಿನಂಗಡಿ ಗ್ರಾ.ಪಂ. ಆರಂಭಿಸಿದೆ.
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮರ- ಗಿಡಗಳ ಗೆಲ್ಲು ಹಾಗೂ ಕೆಲವು ಕಡೆ ಮರಗಳನ್ನೇ ತೆರವುಗೊಳಿಸಲಾಗಿದೆ.
ಈ ಬಗ್ಗೆ ಕೆಲವು ದಿನಗಳ ಹಿಂದೆ ಉಪ್ಪಿನಂಗಡಿ ಗ್ರಾ.ಪಂ. ಸಾರ್ವಜನಿಕ ಪ್ರಕಟನೆ ನೀಡಿದ್ದು, ಖಾಸಗಿ ಜಾಗಗಳಿಂದ ಸಾರ್ವಜನಿಕ ರಸ್ತೆ, ವಿದ್ಯುತ್ ತಂತಿ ಹಾಗೂ ವಿದ್ಯುತ್ ಕಂಬಗಳ ಮೇಲೆ ಗಿಡ, ಮರಗಳು, ಮರದ ಕೊಂಬೆಗಳು ಬಾಗಿಕೊಂಡಿರುವುದನ್ನು ಮತ್ತು ರಸ್ತೆ ಮಾರ್ಜಿನ್ನಲ್ಲಿರುವ ಆವರಣ ಗೋಡೆ, ಬೇಲಿಗಳನ್ನು ಕೂಡಲೇ ತಮ್ಮ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಬೇಕು. ತೆರವುಗೊಳಿಸುವ ಸಂದರ್ಭ ಸ್ವತ್ತಿಗೆ ಯಾವುದೇ ಹಾನಿ ಉಂಟಾದಲ್ಲಿ ಗ್ರಾ.ಪಂ. ಜವಾಬ್ದಾರವಾಗುವುದಿಲ್ಲ ಹಾಗೂ ಕಾರ್ಯಾಚರಣೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ತಮ್ಮಿಂದಲೇ ವಸೂಲು ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿತ್ತು. ಅದರಂತೆ ಮರ-ಗಿಡಗಳ, ಗೆಲ್ಲುಗಳ ತೆರವು ಕಾರ್ಯ ಆರಂಭಿಸಲಾಗಿದ್ದು, ರಸ್ತೆ ಮಾರ್ಜಿನ್ನಲ್ಲಿರುವ ಆವರಣ ಗೋಡೆಗಳ, ಬೇಲಿಗಳ ತೆರವು ಕಾರ್ಯ ಇನ್ನಷ್ಟೇ ಆರಂಭಿಸಬೇಕಿದೆ.
ಈ ತೆರವು ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಹಾಗೂ ಗ್ರಾ.ಪಂ. ಸಿಬ್ಬಂದಿ ಭಾಗವಹಿಸಿದರು.