ಜು.13 : ಮರಾಟಿ ಸಮಾಜ ಸೇವಾ ಸಂಘದಿಂದ ವಧು-ವರಾನ್ವೇಷಣಾ ಸಮಾವೇಶ

0

ಪುತ್ತೂರು: ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಹಾಗೂ ಮರಾಟಿ ಯುವ ವೇದಿಕೆ ಕೊಂಬೆಟ್ಟು ಇವುಗಳ ಸಹಭಾಗಿತ್ವದಲ್ಲಿ ವಧು-ವರಾನ್ವೇಷಣಾ ಸಮಾವೇಶ-2025 ಜು.13ರಂದು ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಬಡಾವು ಹೇಳಿದರು.


ಜೂ.25ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ದಶಕಗಳಿಂದ ಊರ-ಪರವೂರ ದಾನಿಗಳ ದೇಣಿಗೆ, ಸರಕಾರದ ಅನುದಾನದಲ್ಲಿ ಸುಸಜ್ಜಿತ ಸಮಾಜ ಮಂದಿರ ನಿರ್ಮಿಸಿಕೊಂಡು ಸ್ವಜಾತಿ ಬಾಂಧವರ ಅಭಿವೃದ್ಧಿಯಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಬರುತ್ತಿರುವ ಸಂಘವು ಮರಾಟಿ ಸಮುದಾಯದವರ ಶುಭ ಸಮಾರಂಭಗಳಿಗೆ ಶೇ.20ರ ರಿಯಾಯಿತಿಯಲ್ಲಿ ಸಮಾಜ ಮಂದಿರವನ್ನು ನೀಡಲಾಗುತ್ತಿದೆ. ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹಕ್ಕಾಗಿ ವಾರ್ಷಿಕ ಕ್ರೀಡಾಕೂಟ, ಸರ್ವರ ಯೋಗ ಕ್ಷೇಮಕ್ಕಾಗಿ ಸತ್ಯನಾರಾಯಣ ಪೂಜೆ, ಗೋಂದೊಳು ಪೂಜೆ, ಬೈರವ ಆರಾಧನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿ ವೇತನಕ್ಕಾಗಿ ಶಾಶ್ವತ ವಿದ್ಯಾನಿಧಿ ಸ್ಥಾಪಿಸಲಾಗಿದೆ. ಪ್ರಾಕೃತಿಕ ವಿಕೋಪ, ಅನಾರೋಗ್ಯ ಪೀಡಿತರಿಗೆ ನಗದು ರೂಪದ ಸಹಕಾರ ನೀಡುತ್ತಿದೆ. ಸಂಘವು ಕಳೆದ ಹಲವು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹದ ಮೂಲಕ ಸರಳ ವಿವಾಹಕ್ಕೆ ಆದ್ಯತೆ ನೀಡುತ್ತಿರುವ ಸಂಘವು ವಧು-ವರಾನ್ವೇಷನಾ ಕಾರ್ಯಕ್ರಮವನ್ನು ಪ್ರಥಮವಾಗಿ ಆಯೋಜಿಸುತ್ತಿದೆ.ವಧು-ವರಾನ್ವೇಷಣಾ ಕಾರ್ಯಕ್ರಮದ ಮೂಲಕ ಮರಾಟಿ ಸಮುದಾಯದ ವಿವಾಹಯೋಗ್ಯ ಆಸಕ್ತ ಯುವಕ-ಯುವತಿಯರಿಗೆ ಕಂಕಣ ಭಾಗ್ಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ವಿವಾಹ ಸಂಬಂಧಕ್ಕಾಗಿ ಮದ್ಯವರ್ತಿಗಳ ಮೊರೆ ಹೋಗಿ ಅನಗತ್ಯ ಖರ್ಚು, ತಕರಾರುಗಳನ್ನು ತಪ್ಪಿಸುವುದು, ವಿದ್ಯಾಭ್ಯಾಸ ನಂತರ ದೂರದ ಪಟ್ಟಣಗಳಲ್ಲಿ ಉದ್ಯೋಗದಲ್ಲಿರುವವರಿಗೆ ತ್ವರಿತ ಕಂಕಣ ಭಾಗ್ಯ ದೊರೆಯಲು ಹೆತ್ತವರು ಅಥವಾ ಪೋಷಕರ ಸಮ್ಮುಖದಲ್ಲೇ ಮುಕ್ತವಾಗಿ ವಿಚಾರ ವಿನಿಮಯದ ಮುಖಾಂತರ ವಿವಾಹ ಬಂಧನಕ್ಕೆ ಅವಕಾಶ ಒದಗಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗುತ್ತಿದೆ. ಕಾನೂನಿನಂತೆ 21 ವರ್ಷ ಪೂರೈಸಿದ ಯುವಕರು ಹಾಗೂ 18 ವರ್ಷ ಪೂರೈಸಿದ ಯುವತಿಯರಿಗೆ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಸಮಾವೇಶದಲ್ಲಿ ಭಾಗವಹಿಸುವವರಿಗೆ ಯಾವುದೇ ಪ್ರಾದೇಶಿಕ ಅಥವ ಬೌಗೋಳಿಕ ನಿರ್ಬಂಧಗಳಿಲ್ಲ. ಸ್ವಜಾತಿ ಯುವಕ-ಯುವತಿಯರು ತಮ್ಮ ಜೊತೆಗೆ 3 ಮಂದಿ ಹಿರಿಯರೊಂದಿಗೆ ವಧು-ವರಾನ್ವೇಷಣಾ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು.


ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಂಘದ ಮಾಜಿ ಅಧ್ಯಕ್ಷರಾಗಿರುವ ಕೆ.ಸುಂದರ ನಾಯ್ಕ ಬಪ್ಪಳಿಗೆ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಬಡಾವು ಅಧ್ಯಕ್ಷತೆ ವಹಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಶಿಪ್ರಭಾ ಹೆಚ್., ದ.ಕ ಜಿಲ್ಲಾ ಮರಾಟಿ ಸಂಘದ ಕಾರ್ಯದರ್ಶಿಗಳು, ಮಂಗಳೂರು ಕುಲಶೇಖರ ಆಸ್ಟಿನ್ ವಾಲ್ ಮತ್ತು ಕಂಪನಿಯ ಸೀನಿಯರ್ ಮ್ಯಾನೇಜರ್ ಮಹಾಲಿಂಗ ನಾಯ್ಕ ಹೆಚ್., ಬೆಳ್ತಂಗಡಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ನಾಯ್ಕ, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಬಂಟ್ವಾಳ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.


ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಶೀನಪ್ಪ ನಾಯ್ಕ ಎಸ್ ನೆಲ್ಯಾಡಿ, ಉಪಾಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು, ಕೋಶಾಧಿಕಾರಿ ಮೋಹನ ನಾಯ್ಕ ಎಂ., ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಯುವ ವೇದಿಕೆ ಅಧ್ಯಕ್ಷ ವಸಂತ ನಾಯ್ಕ ಆರ್ಯಾಪು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here