ಆರ್‌ಜಿಯುಎಚ್‌ಎಸ್ ಅಕಾಡೆಮಿಕ್ ಕೌನ್ಸಿಲ್‌ಗೆ ಸದಸ್ಯರಾಗಿ ಪುತ್ತೂರಿನ ಡಾ.ಸಂದೇಶ್ ರೈ ಕುತ್ಯಾಡಿ ನೇಮಕ

0

ಪುತ್ತೂರು: ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಕೆ.ವಿ.ಜಿ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ಪುತ್ತೂರಿನ ಡಾ. ಸಂದೇಶ್ ರೈ ಕುತ್ಯಾಡಿ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್), ಕರ್ನಾಟಕದ ಅಕಾಡೆಮಿಕ್ ಕೌನ್ಸಿಲ್‌ಗೆ ಸದಸ್ಯರಾಗಿ ವಿಶ್ವವಿದ್ಯಾಲಯದ ಕುಲಪತಿಗಳು ನಾಮನಿರ್ದೇಶಿಸಿ ಆದೇಶಿಸಿದ್ದಾರೆ.

ಕೆ.ವಿ.ಜಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ವು ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂಗ ಸಂಸ್ಥೆ (constituent institute) ಆಗಿದೆ.

ಎರಡು ಪಿಎಚ್.ಡಿ ಪದವಿಗಳನ್ನು ಹೊಂದಿರುವುದು ಅಪರೂಪವಾಗಿದ್ದು, ಡಾ. ಸಂದೇಶ್ ರೈ ಅವರು ಮೈಸೂರು ವಿಶ್ವವಿದ್ಯಾಲಯದ ಆಂತರೋಪಾಲಜಿ ಅಧ್ಯಯನ ವಿಭಾಗದಿಂದ (Department of Studies in Anthropology) ವೈದ್ಯಕೀಯ ಮಾನವಶಾಸ್ತ್ರ ಪ್ರಾಧ್ಯಾಪಕಿ ಡಾ. ಅನ್ನಪೂರ್ಣ ಎಂ ಅವರ ಮಾರ್ಗದರ್ಶನದಲ್ಲಿ 2014ರಲ್ಲಿ ಗ್ಲೋಬಲ್ ಆಂತರೋಪಾಲಜಿ ವಿಷಯದಲ್ಲಿ ಮೊದಲ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ನಂತರ 2022 ರಲ್ಲಿ, ಅವರು “ಕರ್ನಾಟಕದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಸಾಮಾಜಿಕ ಕಾರ್ಯಕರ್ತರ ಪಾತ್ರ” ಎಂಬ ವಿಷಯದ ಮೇಲೆ ಅಭಿವೃದ್ಧಿ ಅಧ್ಯಯನ ಸಂಸ್ಥೆಯ (Institute of Development Studies) ಮಾಜಿ ನಿರ್ದೇಶಕಿ ಡಾ. ಮಂಗಳಾ ಎಸ್.ಎಂ ಅವರ ಮಾರ್ಗದರ್ಶನದಲ್ಲಿ ಮತ್ತೊಂದು ಪಿಎಚ್.ಡಿ ಪದವಿಯನ್ನು ಸಂಪನ್ನಗೊಳಿಸಿದ್ದಾರೆ.

ಅವರು ಇದುವರೆಗೆ 35ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಭಾರತೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಆರೋಗ್ಯ ವಿಜ್ಞಾನ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ, 2 ಅಂತರರಾಷ್ಟ್ರೀಯ ಮತ್ತು 3 ರಾಷ್ಟ್ರೀಯ ಜರ್ನಲ್‌ಗಳ ಸಂಪಾದಕೀಯ ಮಂಡಳಿಗಳಲ್ಲೂ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ. ಸಂದೇಶ್ ರೈ ಅವರು ಸೈಕೋ ಆಂಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಡಿಂಪಲ್ ಎಸ್ ರೈ ಅವರ ಪತಿ, ಸುನಂದಾ ರೈ ಕುತ್ಯಾಡಿ ಅವರ ಪುತ್ರ ಹಾಗೂ ಶ್ರೀ ಧನಂಜಯ ರೈ ಕುತ್ಯಾಡಿ ಅವರ ಸಹೋದರ

LEAVE A REPLY

Please enter your comment!
Please enter your name here