2008ರಲ್ಲಿ ಜೀಪು ಅಪಘಾತ-7 ಮಂದಿ ಸಾವಿನ ಪ್ರಕರಣ- ಜೀಪು ಚಾಲಕ ನಿರ್ದೋಷಿ-ಹೈಕೋರ್ಟ್ ಆದೇಶ

0

ಪುತ್ತೂರು: ಹದಿನೇಳು ವರ್ಷಗಳ ಹಿಂದೆ ಜೀಪು ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಜೀಪು ಚಾಲಕನನ್ನು ನಿರ್ದೋಷಿಯೆಂದು ಬಿಡುಗಡೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.


26.೦5.2008ರಂದು ಬೆಳ್ತಂಗಡಿ ತಾಲೂಕು ಚೀಬಿದ್ರೆ ಗ್ರಾಮದ ಮನೆಯೊಂದರ ಕುಟುಂಬಸ್ಥರು ಸುಬ್ರಹ್ಮಣ್ಯ ದೇವಸ್ಥಾನದಿಂದ ಸರ್ಪಸಂಸ್ಕಾರ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಗುಂಡ್ಯ ಬಳಿ ಸಿರಿಬಾಗಿಲು ಎಂಬಲ್ಲಿ ಅವರಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಮೃತರಾಗಿದ್ದರು. ಘಟನೆಗೆ ಸಂಬಂಧಿಸಿ ಜೀಪು ಚಾಲಕ ರಾಜೇಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರು, ಐಪಿಸಿ ಸೆಕ್ಷನ್ 279(ಅಜಾಗರುಕತನದಿಂದ ವಾಹನ ಚಲಾವಣೆ),337(ಸಾಧಾರಣ ಗಾಯ),338(ತೀವ್ರತರದ ಗಾಯ)ಮತ್ತು 308(ಎ)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಪುತ್ತೂರು ನ್ಯಾಯಾಲಯ ಆರೋಪಿ ತಪ್ಪಿತಸ್ಥ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಜಿಲ್ಲಾ ನ್ಯಾಯಾಲಯ ಕೂಡಾ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಆರೋಪಿ ರಾಜೇಶ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಉಚ್ಚ ನ್ಯಾಯಾಲಯವು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ತೀರ್ಪು ರದ್ದುಪಡಿಸಿ ಆರೋಪಿಯನ್ನು ನೀರ್ದೋಷಿ ಎಂದು ಪರಿಗಣಿಸಿ ಬಿಡುಗಡೆ ಮಾಡಿ ಜೂ.25ರಂದು ಆದೇಶಿಸಿದೆ. ಆರೋಪಿಯ ಪರವಾಗಿ ಹೈಕೋರ್ಟ್ ವಕೀಲರಾದ ವಿನೋದ್ ಕುಮಾರ್ ಎಂ ಮತ್ತು ಕೇಶವ ಗೌಡ ಪಿ.ರವರು ವಾದಿಸಿದ್ದರು.

LEAVE A REPLY

Please enter your comment!
Please enter your name here