‘ಬಿಜೆಪಿಯ ಸುಳ್ಳಿಗೆ ಕಾಂಗ್ರೆಸ್ ಉತ್ತರ’ – ಕುಂಬ್ರ ಜಂಕ್ಷನ್‌ನಲ್ಲಿ ಕಾಂಗ್ರೆಸ್ ಜನ ಜಾಗೃತಿ ಸಭೆ

0

ಅಪಪ್ರಚಾರ ಮತ್ತು ಸುಳ್ಳೇ ಬಿಜೆಪಿಯ ಜೀವಾಳ: ಪದ್ಮರಾಜ್ ಆರ್.ಪೂಜಾರಿ

ಪುತ್ತೂರು: ಭಾರತೀಯ ಜನತಾ ಪಾರ್ಟಿ ನಿಂತಿರುವುದೇ ಸುಳ್ಳು ಮತ್ತು ಅಪಪ್ರಚಾರಗಳಿಂದ, ಸತ್ಯವನ್ನು ಸುಳ್ಳು ಮಾಡುವುದು, ಸುಳ್ಳನ್ನು ಸತ್ಯ ಮಾಡುವುದು ಇದೇ ಬಿಜೆಪಿಯ ಕೆಲಸವಾಗಿದೆ. ಇಷ್ಟರವರೆಗೆ ಬಿಜೆಪಿ ಚುನಾವಣೆ ಗೆಲ್ಲುತ್ತಾ ಬಂದಿರುವುದೇ ಇದರಿಂದಾಗಿ, ಬಡ ಮುಗ್ದ ಜನರನ್ನು ತನ್ನ ಸುಳ್ಳು ಭಾಷಣಗಳಿಂದ ಮರುಳಾಗಿಸಿ, ಓಟು ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡು ಬಂದಿರುವು ದುರಂತ. ಬಿಜೆಪಿಯವರು ಹೇಳುತ್ತಿರುವ ಸುಳ್ಳುಗಳಿಗೆ ಕಾಂಗ್ರೆಸ್ ದಿಟ್ಟ ಉತ್ತರ ನೀಡಬೇಕಾದ ಅಗತ್ಯತೆ ಇದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.


ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಒಳಮೊಗ್ರು ವಲಯ ಕಾಂಗ್ರೆಸ್ ಸಮಿತಿ ಇದರ ವತಿಯಿಂದ ಕುಂಬ್ರ ಜಂಕ್ಷನ್‌ನಲ್ಲಿ ಜೂ.28 ರಂದು ಸಂಜೆ ನಡೆದ ಬೃಹತ್ ಕಾಂಗ್ರೆಸ್ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಏನಿದ್ದರೂ ಬಡವರ ಪಕ್ಷ, ಬಡವರ ಪರವಾಗಿ ಕೆಲಸ ಮಾಡುವ ಪಕ್ಷವಾಗಿದೆ. ಅಂದಿನಿಂದ ಇಂದಿನವರೇಗೂ ಕಾಂಗ್ರೆಸ್ ಅಭಿವೃದ್ಧಿ ಪರ ಕೆಲಸ ಮಾಡಿದೆ ಬಿಜೆಪಿಯವರ ಹಾಗೆ ಚಿಲ್ಲರೆ ರಾಜಕಾರಣ ಮಾಡಿಲ್ಲ ಎಂದ ಪದ್ಮರಾಜ್ ಪೂಜಾರಿಯವರು, ಬಿಜೆಪಿಯವರಿಗೆ ಬೇಕಾಗಿರುವುದು ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದು ಇದಕ್ಕಾಗಿ ಜಾತಿ, ಧರ್ಮ ಎಂದು ಜನರ ನಡುವೆ ಕಂದಕ ನಿರ್ಮಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ಮಾಡಿ ಚುನಾವಣೆ ಗೆಲ್ಲುವ ಚಾಳಿ ಮಾಡುತ್ತಿದ್ದಾರೆ. ಇಂತಹ ಕುತಂತ್ರಕ್ಕೆ ರಾಜ್ಯದಲ್ಲಿ ಯಾವ ರೀತಿಯಲ್ಲಿ ಫುಲ್ ಸ್ಟಾಪ್ ಇಡಲಾಗಿದೆಯೋ ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಗಬೇಕು, ಮುಂದಿನ ಚುನಾವಣೆಯಲ್ಲಿ ಜನರೇ ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಹೇಳಿದರು.


2 ವರ್ಷ 2 ಸಾವಿರ ಕೋಟಿ ರೂ. ಅನುದಾನ: ಕೃಷ್ಣ ಪ್ರಸಾದ್ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ, ಬಿಜೆಪಿಯವರು ಹೇಳುತ್ತಿರುವ ಸುಳ್ಳಿಗೆ ದಿಟ್ಟ ಉತ್ತರವನ್ನು ನೀಡುವ ಸಲುವಾಗಿ ಪ್ರತಿ ಗ್ರಾಮಮಟ್ಟದಲ್ಲೂ ಜನ ಜಾಗೃತಿ ಸಭೆ ಮಾಡಲಾಗುತ್ತಿದೆ. ವಸತಿ ಯೋಜನೆಯಲ್ಲಿ ಶಾಸಕರು ಪುತ್ತೂರಿಗೆ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಅಕ್ರಮ ಸಕ್ರಮ, 94ಸಿ ಅತೀ ಹೆಚ್ಚು ಪುತ್ತೂರಿನಲ್ಲೇ ಆಗಿದೆ. 2 ವರ್ಷದಲ್ಲಿ 2 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಆರ್‌ಟಿಓ ಟ್ರ್ಯಾಕ್, ಕ್ರೀಡಾಂಗಣ, ಮೆಡಿಕಲ್ ಕಾಲೇಜ್‌ನಂತಹ ಅಭಿವೃದ್ದಿ ಕೆಲಸಗಳು, ಪುತ್ತೂರು, ಉಪ್ಪಿನಂಗಡಿ ದೇವಸ್ಥಾನಗಳ ಅಭಿವೃದ್ದಿ ಸೇರಿದಂತೆ ಬಹಳಷ್ಟು ಅಭಿವೃದ್ದಿಗಳು ಆಗುತ್ತಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿದೆ ಈ ಎಲ್ಲಾ ವಿಚಾರಗಳನ್ನು ಜನರಿಗೆ ತಿಳಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು.


ಬಿಜೆಪಿಯವರಿಗೆ ಸುಳ್ಳು ಹೇಳದೆ ಬೇರೆ ದಾರಿ ಇಲ್ಲ: ಕಾವು ಹೇಮನಾಥ ಶೆಟ್ಟಿ
ಬಿಜೆಪಿಯವರಿಗೆ ಈ ಸುಳ್ಳು ಹೇಳುವುದು ಮೊದಲಿನಿಂದಲೇ ರೂಢಿಯಾಗಿ ಬಿಟ್ಟಿದೆ. ಏಕೆಂದರೆ ಅವರಿಗೆ ಸುಳ್ಳು ಹೇಳದೆ ಬೇರೆ ದಾರಿ ಇಲ್ಲ.ಕಾಂಗ್ರೆಸ್‌ನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಉಚಿತ ಬಸ್ಸುನಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಕೊನೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಹೋಗುತ್ತಾರೆ. ಸುಳ್ಳು ಹೇಳುವುದೇ ಬಿಜೆಪಿಯವರ ಹಣೆಬರಹ, ಅಭಿವೃದ್ದಿ ಪರ ಗೆಲ್ಲಲು ಸಾಧ್ಯವಿಲ್ಲದ ಬಿಜೆಪಿ ಚುನಾವಣೆ ಬಂದಾಗ ಧರ್ಮ, ಜಾತಿ ಎಂದು ಜನರನ್ನು ವಿಭಜಿಸಿ ಆ ಮೂಲಕ ಓಟು ಪಡೆದುಕೊಂಡು ಅಧಿಕಾರ ಪಡೆದುಕೊಳ್ಳುತ್ತದೆ. ಅವರಿಗೆ ಕಾಂಗ್ರೆಸ್‌ನ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಅವರದೇ ಅಧಿಕಾರ ಇರುವ ಪಂಚಾಯತ್ ಎದುರುಗಡೆಯೇ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕಿಂತ ದೊಡ್ಡ ದುರಂತ ಬೇಕೇ ಎಂದು ಅವರು ಕುಟುಕಿದರು.


ಶಾಸಕರಿಂದ ಅಭಿನಂದನೆ, ಮನವಿ ಸ್ವೀಕಾರ
ಸಭೆಯ ಕೊನೆಯಲ್ಲಿ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಬಿಜೆಪಿಯವರ ಸುಳ್ಳುಗಳಿಗೆ ಯಾರೂ ಕೂಡ ಬಲಿಯಾಗದೆ ಅಭಿವೃದ್ದಿ ವಿಚಾರದಲ್ಲಿ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡೋಣ. ನಮಗೆ ಪುತ್ತೂರಿನ ಅಭಿವೃದ್ದಿಯೊಂದೆ ಮುಖ್ಯ ಎಂಬ ಕಿವಿ ಮಾತನ್ನು ಹೇಳಿದರು. ಇದೇ ಸಂದಭದಲ್ಲಿ ಪ್ರಾಕೃತಿಕ ವಿಕೋಪಗಳಿಂದ ತೊಂದರೆಯಾದವರ ಮನವಿಗಳನ್ನು ಸ್ವೀಕರಿಸಿದ ಶಾಸಕರು, ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ ನಿಮ್ಮೊಂದಿಗೆ ನಾನಿದ್ದೇನೆ ಎನ್ನುವ ಭರವಸೆ ಎನ್ನುವ ಭರವಸೆಯನ್ನು ನೀಡಿದರು.


ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಅಭಿನಂದನೆ ಸಲ್ಲಿಸಬೇಕು: ಮಹಮ್ಮದ್ ಬಡಗನ್ನೂರು
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಹಮ್ಮದ್ ಬಡಗನ್ನೂರುರವರು ಮಾತನಾಡಿ, ಬಿಜೆಪಿಯವರು ಏನೇ ಅಪಪ್ರಚಾರ, ಸುಳ್ಳುಗಳನ್ನು ಹೇಳುತ್ತಿದ್ದರೂ ಅದಲ್ಲಾ ಸತ್ಯಕ್ಕೆ ದೂರವಾದ ವಿಚಾರ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಅಭಿವೃದ್ದಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನೆ ಸಲ್ಲಿಸಬೇಕು ಏಕೆಂದರೆ ಪುತ್ತೂರನ್ನು ಧಾರ್ಮಿಕ ಪ್ರವಾಸಿ ತಾಣ ಮಾಡಲು ಹೊರಟ ಕಾರ್ಯ ಶ್ಲಾಘನೀಯ. ಪುತ್ತೂರು ಮತ್ತು ಉಪ್ಪಿನಂಗಡಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ಇಳಿದ ಶಾಸಕರಿಗೆ ವೈಯುಕ್ತಿಕವಾಗಿಯೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದ ಅವರು ನಾವೆಲ್ಲರೂ ಶಾಸಕರಿಗೆ ಜೊತೆಯಾಗಿ ನಿಲ್ಲೋಣ ಎಂಬ ಮಾತನ್ನು ಹೇಳಿದರು.


ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರರವರು ಮಾತನಾಡಿ, ಬಿಜೆಪಿಯ ಸುಳ್ಳಿನ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಬೇಕಾದ ಅಗತ್ಯತೆ ನಮ್ಮಲ್ಲಿದೆ. ಏಕೆಂದರೆ ಕಾಂಗ್ರೆಸ್‌ನ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ ಇದನ್ನು ನಿಲ್ಲಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು.


ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಪ್ರತಿನಿಧಿ ಶಶಿಕುಮಾರ್ ರೈ ನೂಜಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜಾ, ಬ್ಲಾಕ್ ಉಪಾಧ್ಯಕ್ಷೆ ಚಂದ್ರಪ್ರಭಾ ಗೌಡ, ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜೊರೋಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಸಂತೋಷ್ ಭಂಡಾರಿ ಚಿಲ್ಮೆತ್ತಾರು ವಂದಿಸಿದರು. ಬ್ಲಾಕ್ ಸಲಹಾ ಸಮಿತಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೂಣೇಶ್ ಭಂಡಾರಿ, ಕೆಪಿಎಸ್ ಕುಂಬ್ರ ಕಾರ್ಯಾಧ್ಯಕ್ಷ ರಕ್ಷಿತ್ ರೈ ಕುಂಬ್ರ, ಗ್ರಾಪಂ ಸದಸ್ಯರುಗಳಾದ ಶೀನಪ್ಪ ನಾಯ್ಕ ಮತ್ತು ವಿನೋದ್ ಶೆಟ್ಟಿ ಮುಡಾಲ, ಮಹಿಳಾ ಘಟಕದ ಅಧ್ಯಕ್ಷೆ ಬದ್ರುನ್ನೀಸಾ ಪರ್ಪುಂಜ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಜಯಂತ ಪೂಜಾರಿ ಕೆಂಗುಡೇಲು, ಬಶೀರ್ ಕೌಡಿಚ್ಚಾರ್, ಯೂಸುಫ್ ಕುಟ್ಟಿನೋಪಿನಡ್ಕ, ಎಸ್‌ಸಿ ತಾಲೂಕು ಘಟಕದ ಅಧ್ಯಕ್ಷ ಬಾಬು ಮರಿಕೆ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.


ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ
ನಾವು ಇದನ್ನು ಸ್ಪಷ್ಟ ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ಇಂದು ಜಿಎಸ್‌ಟಿ ರೂಪದಲ್ಲಿ ತೆರಿಗೆ ಪಾವತಿ ಮಾಡುತ್ತೇವೆ. ಈ ತೆರಿಗೆ ಪಾವತಿಯಲ್ಲಿ ಮಹಾರಾಷ್ಟ್ರ ಬಿಟ್ಟರೆ ೨ ಸ್ಥಾನದಲ್ಲಿ ಕರ್ನಾಟಕ ಇದೆ. ಆದರೆ ನಾವು ಕಟ್ಟುತ್ತಿರುವ ತೆರಿಗೆಯ ಪಾಲಿನಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಕೊಡಬೇಕಾಗಿರುವ 1 ರೂಪಾಯಿಯಲ್ಲಿ ಕೇವಲ 1.64 ಪೈಸೆ ಮಾತ್ರ ನೀಡುತ್ತಿದೆ. ನಾವು ಕಟ್ಟಿರುವ ತೆರಿಗೆಯಲ್ಲಿ ನಮ್ಮ ಪಾಲನ್ನು ನಮಗೆ ಕೊಡದ ಕೇಂದ್ರ ಸರಕಾರವನ್ನು ಪ್ರಶ್ನಿಸುವ ಧೈರ್ಯ ನಮ್ಮ ಸಂಸದರಿಗೆ ಇಲ್ಲದಂತಾಗಿದೆ. ಈ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುವ ಕೆಲಸ ಸಂಸದರು ಮಾಡಲಿ ಎಂದು ಪದ್ಮರಾಜ್ ಆರ್.ಪೂಜಾರಿ ಆಗ್ರಹಿಸಿದರು.


ಬಾಡಿಗೆ ಭಾಷಣಕಾರರು, ಗೋಧಿ ಮೀಡಿಯಾಗಳಿಂದ ಸುಳ್ಳು, ಅಪಪ್ರಚಾರ
ಬಿಜೆಪಿಗೆ ಕೆಲವು ಮಂದಿ ಬಾಡಿಗೆ ಭಾಷಣಕಾರರಿದ್ದಾರೆ. ಇವರ ಮೂಲಕ ಸುಳ್ಳು, ಅಪಪ್ರಚಾರಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದೇ ಕೆಲಸವಾಗಿದೆ. ಚಿನ್ನದ ರಸ್ತೆ, ಬುಲೆಟ್ ಟ್ರೈನ್ ಇತ್ಯಾದಿ ಸುಳ್ಳುಗಳನ್ನು ಸತ್ಯವೆಂಬಂತೆ ಬಿಂಬಿಸುವ ಬಾಡಿಗೆ ಭಾಷಣಕಾರರ ಬಗ್ಗೆ ಎಚ್ಚರದಿಂದರಬೇಕಾಗಿದೆ ಎಂದ ಪದ್ಮರಾಜ್ ಆರ್.ಪೂಜಾರಿಯವರು ಬಿಜೆಪಿ ಬೆಂಬಲಿತ ಗೋಧಿ ಮೀಡಿಯಾಗಳು ಕೂಡ ಸಮಾಜದಲ್ಲಿ ಸುಳ್ಳು, ಅಪಪ್ರಚಾರವನ್ನು ಪ್ರಚಾರ ಮಾಡುವ ಮೂಲಕ ಸತ್ಯವನ್ನು ಸುಳ್ಳನ್ನಾಗಿ, ಸುಳ್ಳನ್ನು ಸತ್ಯವನ್ನಾಗಿ ಬಿಂಬಿಸುತ್ತಿರುವುದು ದುರಂತ ಎಂದು ಅವರು ಹೇಳಿದರು.

ಅಭಿವೃದ್ಧಿಯಲ್ಲಿ ಪುತ್ತೂರು ನಂಬರ್ 1
ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಯವರೇ ಪುತ್ತೂರನ್ನು ಒಮ್ಮೆ ಗಮನಿಸಿ ನೋಡಿ, ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ೨ ವರ್ಷದಲ್ಲಿ ೨ ಸಾವಿರ ಕೋಟಿ ರೂ.ಅನುದಾನ ಪುತ್ತೂರಿಗೆ ಬಂದಿದೆ. ಮೆಡಿಕಲ್ ಕಾಲೇಜ್, ಆರ್‌ಟಿಓ ಟ್ರ್ಯಾಕ್, ಕ್ರೀಡಾಂಗಣ, ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಇತ್ಯಾದಿ ಅಭಿವೃದ್ಧಿ ಪರ್ವಗಳು ಪುತ್ತೂರಲ್ಲಿ ನಡೆಯುತ್ತಿದೆ ಎಂದ ಪದ್ಮರಾಜ್‌ರವರು ಅಭಿವೃದ್ಧಿಯಲ್ಲಿ ಪುತ್ತೂರು ನಂಬರ್ ವನ್ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

‘ ಬಿಜೆಪಿಯವರ ಸುಳ್ಳಿಗೆ ಉತ್ತರ ಎಂಬ ಧ್ಯೇಯದೊಂದಿಗೆ ನಡೆದ ಕಾಂಗ್ರೆಸ್ ಜನ ಜಾಗೃತಿ ಸಭೆಗೆ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದ ಶಾಸಕರಿಗೆ, ಎಲ್ಲಾ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಹಾಗೂ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.’
-ಅಶೋಕ್ ಪೂಜಾರಿ ಬೊಳ್ಳಾಡಿ, ಅಧ್ಯಕ್ಷ ಒಳಮೊಗ್ರು ವಲಯ ಕಾಂಗ್ರೆಸ್

LEAVE A REPLY

Please enter your comment!
Please enter your name here